ಕರ್ನಾಟಕ

karnataka

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್​ ಆಕಾಂಕ್ಷಿಗಳು ಯಾರು?

By ETV Bharat Karnataka Team

Published : Mar 1, 2024, 3:19 PM IST

ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷಗಳಿಂದ ಯಾರೂ ಕಣಕ್ಕಿಳಿಯಲಿದ್ದಾರೆ?, ಯಾರಿಗೆ ಈ ಬಾರಿ ಟಿಕೆಟ್​ ಒಲಿದು ಬರಬಹುದು? ಎಂಬ ಕುತೂಹಲವಿದೆ.

BJP and Congress aspirants
ಬಿಜೆಪಿ ಕಾಂಗ್ರೆಸ್​ ಆಕಾಂಕ್ಷಿಗಳು

ಬೆಂಗಳೂರು:ರಾಜ್ಯದಲ್ಲಿ ಬಿಜೆಪಿಗೆ ಅತ್ಯಂತ ಸುರಕ್ಷಿತ ಹಾಗೂ ಭದ್ರಕೋಟೆ ಎಂದರೆ ಅದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ. ಹಾಗಾಗಿ ಈ ಕ್ಷೇತ್ರವನ್ನು ಬಿಜೆಪಿ ಈ ಬಾರಿ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಚುನಾವಣಾಪೂರ್ವ ಮೈತ್ರಿ ಕಾರಣದಿಂದಾಗಿ ಈ ಬಾರಿ ಇಲ್ಲಿ ಜೆಡಿಎಸ್​ ಸ್ಪರ್ಧೆ ಇಲ್ಲ. ಆದರೆ ಕಾಂಗ್ರೆಸ್​ಗೆ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಈವರೆಗೆ ನಡೆದ ಚುನಾವಣೆಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಈ ಕ್ಷೇತ್ರ ಕಾಂಗ್ರೆಸ್​ ಪಾಲಾಗಿದ್ದು ಬಿಟ್ಟರೆ ಎರಡನೇ ಬಾರಿಗೆ ಅವಕಾಶ ಸಿಕ್ಕಿಲ್ಲ. ಇದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಅಷ್ಟಾಗಿ ಇಲ್ಲ.

1977ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿ ಚುನಾವಣೆ ನಡೆಯಿತು. ಮೊದಲ ಮೂರು ಚುನಾವಣೆಯಲ್ಲಿಯೂ ಜನತಾ ಪಕ್ಷ ಗೆದ್ದರೆ 1989ರಲ್ಲಿ ಮೊದಲ ಬಾರಿ ಕಾಂಗ್ರೆಸ್​ಗೆ ವಿಜಯಲಕ್ಷ್ಮಿ ಒಲಿದಿದ್ದಳು. ಆರ್​.ಗುಂಡೂರಾವ್​​ ಗೆದ್ದಿದ್ದರು. ಅದನ್ನು ಬಿಟ್ಟರೆ ನಂತರ ನಡೆದ 1991ರ ಚುನಾವಣೆಯಲ್ಲಿ ಬಿಜೆಪಿಯಿಂದ ಕೆ.ವೆಂಕಟಗಿರಿ ಗೌಡ ಚೊಚ್ಚಲ ಗೆಲುವು ದಾಖಲಿಸಿ ಬಿಜೆಪಿಯ ಖಾತೆ ತೆರೆದರು. ನಂತರ 1996ರಿಂದ 2014ರವರೆಗೆ ಸತತವಾಗಿ ಆರು ಬಾರಿ ಬಿಜೆಪಿಯಿಂದ ಅನಂತ್​​ ಕುಮಾರ್​​ ಗೆದ್ದು ಬಂದರು. ಅವರ ನಿಧನದಿಂದಾಗಿ 2019ರಲ್ಲಿ ತೇಜಸ್ವಿ ಸೂರ್ಯಗೆ ಅವಕಾಶ ಸಿಕ್ಕಿದ್ದು ಅವರೂ ಗೆದ್ದಿದ್ದಾರೆ. ಹಾಗಾಗಿ ಸತತವಾಗಿ 8 ಬಾರಿಯಿಂದ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿಯೇ ಇದೆ.

ಬಿಜೆಪಿಯ ಭದ್ರಕೋಟೆಯಲ್ಲಿ ಈ ಬಾರಿ ಕಾಂಗ್ರೆಸ್​ನಿಂದ ಪ್ರಬಲ ಎದುರಾಳಿ ಕಣಕ್ಕೆ ಇಳಿಯುವುದು ಅನುಮಾನವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ತನ್ನ ಪ್ರಯೋಗ ಶಾಲೆಯ ಭಾಗವಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ. ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವ ಸಂಪುಟ ಸದಸ್ಯರಾಗಿರುವ ಕೆಲವರನ್ನು ಲೋಕಸಭೆಗೆ ಕಳುಹಿಸಬೇಕು ಎನ್ನುವ ಚಿಂತನೆ ಇದೆ. ಅದರ ಭಾಗವಾಗಿ ಪ್ರಮುಖ ನಾಯಕರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದು ಎನ್ನಲಾಗಿದೆ.

ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಮ್ಮತಿ ಸಿಕ್ಕಿಲ್ಲ. ಹಾಲಿ ಸಂಸದರಿಗೆ ಟಿಕೆಟ್ ಕೊಡುವ ನಿರ್ಧಾರವಾದಲ್ಲಿ ತೇಜಸ್ವಿ ಸೂರ್ಯ ಸ್ಪರ್ಧೆಗೆ ಅಡ್ಡಿ ಇಲ್ಲ. ಇನ್ನು ಅಭ್ಯರ್ಥಿ ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದರೂ ಸ್ಥಳೀಯವಾಗಿ ವಿರೋಧ ವ್ಯಕ್ತವಾಗುವ ಸಾಧ್ಯತೆ ಇಲ್ಲ. ಅನಂತ್​ ಕುಮಾರ್​ ಪತ್ನಿ ತೇಜಸ್ವಿನಿ ಅನಂತ್​ ಕುಮಾರ್​ ಕಳೆದ ಬಾರಿ ಟಿಕೆಟ್ ಕೈತಪ್ಪಿದರೂ ಬಂಡಾಯವೇಳದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಹಾಗಾಗಿ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಹೊರತುಪಡಿಸಿ ಇನ್ನು ಬೇರೆ ಯಾವುದೇ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಇಲ್ಲ.

ಆದರೆ ವರಿಷ್ಠರು ಪ್ರಯೋಗಕ್ಕೆ ಮುಂದಾಗುವ ನಿರ್ಧಾರಕ್ಕೆ ಬಂದರೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಕೌಶಲಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್​ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಜೈಶಂಕರ್​ ಬೆಂಗಳೂರಿಗೆ ಬಂದಾಗಲೆಲ್ಲಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ, ಫುಡ್​ ಸ್ಟ್ರೀಟ್​ಗೆ ಭೇಟಿ ನೀಡಿ ಫುಟ್ ಪಾತ್​ನಲ್ಲಿ ತಿಂಡಿ ಸವಿದು ಗಮನ ಸೆಳೆಯುವ ಮೂಲಕ ಕ್ಷೇತ್ರದ ಜೊತೆ ಹೆಚ್ಚಿನ ನಂಟು ಇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ರಾಜೀವ್ ಚಂದ್ರಶೇಖರ್​ಗೆ ರಾಜ್ಯಸಭಾ ಟಿಕೆಟ್​ ನೀಡಿಲ್ಲ. ಹಾಗಾಗಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಜೈಶಂಕರ್ ಸ್ಪರ್ಧೆ ಮಾಡಿದರೆ ರಾಜೀವ್​ ಚಂದ್ರಶೇಖರ್​ ಅವರನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎನ್ನುವ ಚಿಂತನೆ ನಡೆಸಲಾಗಿದೆ. ಭದ್ರಕೋಟೆಯಾಗಿರುವ ಕಾರಣ ಇಲ್ಲಿಂದ ಕೇಂದ್ರದ ನಾಯಕರನ್ನು ಗೆಲ್ಲಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರಿದ್ದಾರೆ. ಹಾಗಾಗಿ ಬಿಜೆಪಿಯಿಂದ ಹಾಲಿ ಸಂಸದ ತೇಜಸ್ವಿಸೂರ್ಯ, ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ಪ್ರಮುಖ ಆಕಾಂಕ್ಷಿಗಳಾಗಿದ್ದರೂ ಕೇಂದ್ರ ಸಚಿವರಾದ ಜೈಶಂಕರ್​ ಮತ್ತು ರಾಜೀವ್​ ಚಂದ್ರಶೇಖರ್​ ಸೇರಿ ನಾಲ್ವರು ಆಕಾಂಕ್ಷಿಗಳಿದ್ದಾರೆ.

ಆದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯನ್ನು ಪಕ್ಷದ ನಾಯಕರು ತಳ್ಳಿಹಾಕಿದ್ದಾರೆ. ಸದ್ಯಕ್ಕೆ ಆ ರೀತಿಯ ಯಾವುದೇ ಮಾಹಿತಿ ಹೈಕಮಾಂಡ್​ನಿಂದ ಬಂದಿಲ್ಲ. ಹಿರಿಯ ಸಂಸದರ ವಿಚಾರದಲ್ಲಿ ಚರ್ಚೆಯಾಗಿರುವುದು ನಿಜ ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಕುರಿತು ಚರ್ಚೆಯಾಗಿಲ್ಲ. ಕೇಂದ್ರ ಸಚಿವರನ್ನು ಇಲ್ಲಿಂದ ಕಣಕ್ಕಿಳಿಸುವ ಕುರಿತು ಮಾಹಿತಿ ಇಲ್ಲ. ಆದರೆ ಯಾರಿಗೆ ಅವಕಾಶ ನೀಡಬೇಕು ಎನ್ನುವುದನ್ನು ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆ ನಿರ್ಧರಿಸಲಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ವಿಧಾನ ಪರಿಷತ್​ ಬಿಜೆಪಿ ಸಚೇತಕ ರವಿಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಚುನಾವಣಾ ಪೂರ್ವ ಮೈತ್ರಿ ಇರುವ ಕಾರಣ ಕ್ಷೇತ್ರ ಬಿಜೆಪಿ ಪಾಲಾಗಲಿದ್ದು ಜೆಡಿಎಸ್ ಅಭ್ಯರ್ಥಿ ಇರುವುದಿಲ್ಲ. ಹಾಗಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್​ನ ನೇರ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಆದರೆ ಕಾಂಗ್ರೆಸ್​ಗೆ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ಸತತವಾಗಿ ಕಾಡುತ್ತಿದೆ. 1989ರಲ್ಲಿ ಆರ್.ಗುಂಡೂರಾವ್​ ಒಮ್ಮೆ ಗೆದ್ದಿದ್ದು ಬಿಟ್ಟರೆ ಕಾಂಗ್ರೆಸ್​ಗೆ ಈವೆರೆಗೆ ಒಮ್ಮೆಯೂ ಗೆಲ್ಲಲು ಸಾಧ್ಯವಾಗಿಲ್ಲ.

ಸಾಕಷ್ಟು ಪ್ರಯೋಗ ನಡೆಸಿದರೂ ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ ಬೆಂಗಳೂರು ದಕ್ಷಿಣ ಗೆಲ್ಲಲು ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ತೀರಾ ವಿರಳ ಎನ್ನಬಹುದಾಗಿದೆ. ಈ ಹಿಂದೆ ಅಚ್ಚರಿ ಅಭ್ಯರ್ಥಿ ಹಾಕುವ ಪ್ರಯೋಗಗಳನ್ನು ಮಾಡಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ದೇಶದ ಜನರಿಗೆ ಆಧಾರ್​ ಕಾರ್ಡ್ ಸಿಗುವಂತೆ ಮಾಡುವಲ್ಲಿನ ಶ್ರಮಕ್ಕೆ ಹೆಸರಾಗಿದ್ದ ನಂದನ್​ ನೀಲೇಕಣಿಗೆ ಟಿಕೆಟ್ ನೀಡಿತು. ನಂತರ ಹಿರಿಯ ನಾಯಕ ರಾಜ್ಯಸಭಾ ಸದಸ್ಯರಾಗಿ ಅನುಭವ ಇದ್ದ ಬಿ.ಕೆ.ಹರಿಪ್ರಸಾದ್​ಗೆ ಟಿಕೆಟ್ ನೀಡಿದರೂ ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲಾಗಿಲ್ಲ.

ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದಿದ್ದ ಆರ್.ಗುಂಡೂರಾವ್ ಪುತ್ರ ದಿನೇಶ್ ಗುಂಡೂರಾವ್ ಅವರನ್ನು ಕಣಕ್ಕಿಳಿಸಬೇಕು ಎನ್ನುವುದು ಕಾಂಗ್ರೆಸ್ ನಾಯಕರ ಆಲೋಚನೆ, ಸಿದ್ದರಾಮಯ್ಯ ಸಂಪುಟದ ಕೆಲ ಸಚಿವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಬೇಕು ಎನ್ನುವ ಅಪೇಕ್ಷೆ ಕಾಂಗ್ರೆಸ್ ಹೈಕಮಾಂಡ್​​​ನದ್ದಾಗಿದೆ. ಅದರಂತೆ ಆದಲ್ಲಿ ದಿನೇಶ್ ಗುಂಡೂರಾವ್ ಸ್ಪರ್ಧಿಸಬೇಕಾದ ಸನ್ನಿವೇಶ ಎದುರಾಗಬಹುದು.

ಆದರೆ ಇದಕ್ಕೆ ದಿನೇಶ್ ಗುಂಡೂರಾವ್ ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೆ ಜಯನಗರ ಕ್ಷೇತ್ರದಲ್ಲಿ ಪರಾಭವಗೊಂಡಿರುವ ಸೌಮ್ಯರೆಡ್ಡಿ ಟಿಕೆಟ್​ಗೆ ಪ್ರಯತ್ನ ನಡೆಸಿದ್ದಾರೆ. ಪುತ್ರಿಯ ಪರ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಕೂಡ ಲಾಬಿ ನಡೆಸುತ್ತಿದ್ದು, ಟಿಕೆಟ್​ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ ಸ್ಥಳೀಯ ಕಾಂಗ್ರೆಸ್ ನಾಯಕ ಎನ್.ರಮೇಶ್​ ಕುಮಾರ್ ಹೆಸರು ಕೇಳಿಬರುತ್ತಿದೆ. ಆದರೆ ರಾಜ್ಯ ನಾಯಕರ ಲೆಕ್ಕಾಚಾರ ನಿಗೂಢವಾಗಿದೆ.

ಸದ್ಯ ಇಂದಿನ ಸನ್ನಿವೇಶವನ್ನು ಗಮನಿಸಿದರೆ ಬಿಜೆಪಿಯಿಂದ ತೇಜಸ್ವಿ ಸೂರ್ಯ, ತೇಜಸ್ವಿನಿ ಅನಂತ್​ ಕುಮಾರ್​, ಕೇಂದ್ರ ಸಚಿವರಾದ ಜೈಶಂಕರ್, ರಾಜೀವ್​ ಚಂದ್ರಶೇಖರ್​ ಹೆಸರು ಕೇಳಿಬಂದಿದ್ದರೆ ಕಾಂಗ್ರೆಸ್​ನಿಂದ ಸೌಮ್ಯರೆಡ್ಡಿ, ಸಚಿವ ದಿನೇಶ್​ ಗುಂಡೂರಾವ್, ಎನ್.ರಮೇಶ್ ಕುಮಾರ್ ಹೆಸರು ಕೇಳಿಬರುತ್ತಿವೆ. ಆದರೆ ಅಚ್ಚರಿ ಆಯ್ಕೆ ಆಗಲಿದೆಯಾ ಅಥವಾ ನಿರೀಕ್ಷಿತರಿಗೆ ಟಿಕೆಟ್ ಸಿಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಬಿಜೆಪಿ ಚುನಾವಣಾ ಸಮಿತಿ ಸಭೆ: ಲೋಕಸಭೆ ಅಭ್ಯರ್ಥಿಗಳ ಮೊದಲ ಪಟ್ಟಿ ಶೀಘ್ರದಲ್ಲೇ ಬಿಡುಗಡೆ

ABOUT THE AUTHOR

...view details