ಕರ್ನಾಟಕ

karnataka

ಕೊಪ್ಪಳದಲ್ಲಿ ವೈರಲ್ ಫೀವರ್; ಗ್ರಾಮವನ್ನೇ ಆವರಿಸಿದ ಜ್ವರ

By ETV Bharat Karnataka Team

Published : Feb 8, 2024, 5:15 PM IST

ಕೊಪ್ಪಳದ ನೆರೆಬೆಂಚಿ ಗ್ರಾಮದ ಜನರಲ್ಲಿ ವೈರಲ್​ ಫೀವರ್​ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಫೀವರ್
ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಫೀವರ್

ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಫೀವರ್

ಕೊಪ್ಪಳ: ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಫೀವರ್​ನಿಂದಾಗಿ ಜನರಲ್ಲಿ ಜ್ವರ, ಮೈ ಕೈ ನೋವು ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಕಳೆದೊಂದು ವಾರದಿಂದ ನೆರೆಬೆಂಚಿ ಗ್ರಾಮದ ಜನರಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಅನಾರೋಗ್ಯ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯಿಂದ ಗ್ರಾಮದ ದೇವಸ್ಥಾನದಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಕುಷ್ಟಗಿ ತಹಶೀಲ್ದಾರ್ ರವಿ ಅಂಗಡಿ ಅವರು ಗ್ರಾಮಕ್ಕೆ ಭೇಟಿ ನೀಡಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು, ಗ್ರಾಮದಲ್ಲಿ ಎಲ್ಲಿ ನೋಡಿದರೂ ಸ್ವಚ್ಛತೆ ಕಾಣಸಿಗದಾಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ನಿಂತಿದ್ದು ಸೊಳ್ಳೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿವೆ. ಕುಡಿಯುವ ನೀರು ಕೂಡ ಶುದ್ಧವಾಗಿಲ್ಲ. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿಯವರ ಗಮನಕ್ಕೆ ತಂದರೂ ಕ್ರಮ ವಹಿಸಿಲ್ಲ ಎಂದು ತಹಶಿಲ್ದಾರರೆದುರು ತಮ್ಮ ಅಳಲು ತೋಡಿಕೊಂಡರು.

ಬಳಿಕ ಮಾತನಾಡಿದ ತಹಶೀಲ್ದಾರ್ ರವಿ ಅಂಗಡಿ, ಚಿಕಿತ್ಸೆಗೆ ತಾಲೂಕು ಆಡಳಿತದಿಂದ ಸಕಲ ವ್ಯವಸ್ಥೆ ಮಾಡಲಾಗಿದೆ. ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಕೈ, ಕಾಲು ನೋವು, ಗಂಟಲು ಬೇನೆ ಸೇರಿದಂತೆ ಜ್ವರ ಕಾಣಸಿಕೊಂಡಿದೆ. ಈಗಾಗಲೇ ಹಲವರಿಗೆ ಚಿಕಿತ್ಸೆ ನೀಡಲಾಗಿದ್ದು, ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಸದ್ಯ ಗ್ರಾಮದ ದೇವಸ್ಥಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲು ಸಕಲ ವ್ಯವಸ್ಥೆ ಕೂಡ ಮಾಡಲಾಗಿದೆ. ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಬಳಿಕ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ, ಕಳೆದ ಎರಡು ದಿನದ ಹಿಂದೆಯೇ ಕೆಲವರ ರಕ್ತ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ ಕೆಲವರಿಗೆ ಚಿಕನ್​ಗುನ್ಯಾ ಪಾಸಿಟಿವ್​ ಕಂಡು ಬಂದಿದೆ ಮತ್ತೆ ಕೆಲವರಿಗೆ ನೆಗೆಟಿವ್ ಬಂದಿದೆ. ಲಾರ್ವ ಸೊಳ್ಳೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಂದಿದೆ. ಸೊಳ್ಳೆ ನಾಶಕ್ಕೆ ತಾಲೂಕು ಆರೋಗ್ಯ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ. ರಕ್ತದ ಮಾದರಿ ರಿಪೋರ್ಟ್​ ಬರುವುದು ತಡವಾಗಿದ್ದಕ್ಕೆ ಈ ಸಮಸ್ಯೆಯಾಗಿದೆ. ಸದ್ಯ ನಿನ್ನೆ 30 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಇಂದು ಸುಮಾರು 25 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಸೇರಿದಂತೆ ಇತರೆ ಗ್ರಾಮಗಳಲ್ಲೂ ಈತರದ ಸಮಸ್ಯೆ ಕಂಡುಬಂದಲ್ಲಿ ಅಂತವರ ರಕ್ತದ ಮಾಹಿತಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕಬ್ಬಿನ ಹಣ ಪಾವತಿಸದ ಆರೋಪ: ಸಕ್ಕರೆ ತುಂಬಿದ್ದ ಲಾರಿ ತಡೆದು ರೈತರ ಪ್ರತಿಭಟನೆ

ABOUT THE AUTHOR

...view details