ಕರ್ನಾಟಕ

karnataka

ಅಹಿಂದ ಸಮುದಾಯದಲ್ಲಿ ಭಯ ಮೂಡಿಸುವುದೇ ಸಿಎಎ ಕಾಯ್ದೆಯ ಗುರಿ: ಸಚಿವ ಹೆಚ್ ಸಿ ಮಹದೇವಪ್ಪ

By ETV Bharat Karnataka Team

Published : Mar 12, 2024, 8:50 PM IST

ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಲ್ಲಿ ಭಯ ಮೂಡಿಸಲೆಂದೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಸಚಿವ ಹೆಚ್ ಸಿ ಮಹದೇವಪ್ಪ
ಸಚಿವ ಹೆಚ್ ಸಿ ಮಹದೇವಪ್ಪ

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್​ಆರ್​ಸಿ)ಗೆ ಸಂಬಂಧಿಸಿದಂತೆ ಈ ಹಿಂದೆ ದೇಶದ ಜನರಿಂದ ಸಾಕಷ್ಟು ವಿರೋಧ ಎದುರಿಸಿದ್ದ ಕೇಂದ್ರ ಸರ್ಕಾರವು, ತನ್ನ ಗೃಹ ಸಚಿವ ಅಮಿತ್ ಶಾ ಅವರ ಮೂಲಕ ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಮುಂದೆ ಇಲ್ಲವೆಂದು ಹೇಳಿತ್ತು. ಆದರೆ, ಇದೀಗ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಮತ್ತೊಮ್ಮೆ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಗೊಂದಲ ಎಬ್ಬಿಸಿ ಅವರಲ್ಲಿ ಭೀತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್​ ಸಿ ಮಹದೇವಪ್ಪ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈಗಾಗಲೇ ಹಲವು ಬಾರಿ ಹೇಳಲಾದಂತೆ ಪ್ರಜಾಪ್ರಭುತ್ವ ದೇಶವಾದ ಭಾರತವು ಸಾಮರಸ್ಯದ ತತ್ವವನ್ನು ಅಳವಡಿಸಿಕೊಂಡ ನೆಲವಾಗಿದೆ. ಬುದ್ಧನ ಕಾಲದಲ್ಲೇ ಈ ದೇಶವು ಪೌರತ್ವ ಮತ್ತು ಪ್ರಜಾಪ್ರಭುತ್ವವನ್ನು ಅನುಭವಿಸಿದ್ದು, ನಮಗೆ ಪೌರತ್ವ ಕೊಡಿ ಎಂದು ಕೇಳುವಂತಹ ದುರ್ಗತಿ ಬರುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಮೂಲತಃ ಶೋಷಿತ ವರ್ಗಗಳ ವಿರೋಧಿಗಳಾಗಿರುವ ಮನುವಾದಿ ಬಿಜೆಪಿಗರು ಕ್ರಮೇಣ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಪಡಿಸಿ ಅವರಲ್ಲಿ ಭೀತಿ ಹುಟ್ಟಿಸಿ ನಂತರ ಅದನ್ನು ದಲಿತರು, ಆದಿವಾಸಿಗಳು ಮತ್ತು ಹಿಂದುಗಳಿದ ವರ್ಗಗಳ ಮೇಲೂ ಆ ಭೀತಿಯನ್ನು ಹೇರುತ್ತಾರೆ ಎಂದು ಮಹದೇವಪ್ಪ ಕೇಂದ್ರದ ವಿರುದ್ಧ ಕಿಡಿ ಕಾರಿದರು.

ಹೀಗಾಗಿ ಯಾರಿಗೋ ತೊಂದರೆ ಅಥವಾ ಭೀತಿ ಉಂಟಾದರೆ ನಮಗೇನು ಎಂದು ನಾವು ಈ ದಿನ ಸುಮ್ಮನೇ ಕುಳಿತರೆ ಮುಂದೆ ನಮಗೆ ತೊಂದರೆ ಆದಾಗ ನಮ್ಮ ಪರವಾಗಿ ಹೋರಾಟ ನಡೆಸಲು ಯಾರೂ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೇಶದ ಒಳಗೆ ಒಡಕು ಮೂಡಿಸುವ ಉದ್ದೇಶದೊಂದಿಗೆ ಜಾರಿಗೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ನಾನು ತೀವ್ರವಾಗಿ ಖಂಡಿಸುತ್ತೇನೆ. ಆಡಳಿತಾತ್ಮಕ ವೈಫಲ್ಯ ಮತ್ತು ಚುನಾವಣಾ ಬಾಂಡ್​​ಗಳ ಚರ್ಚೆಯ ದಿಕ್ಕು ತಪ್ಪಿಸಲು ಮನಸ್ಸಿಗೆ ಬಂದಂತೆ ನಿರ್ಧಾರ ಕೈಗೊಳ್ಳುತ್ತಿರುವ ಬಿಜೆಪಿಗರ ಸರ್ವಾಧಿಕಾರಕ್ಕೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ತಕ್ಕ ಪಾಠ ಕಲಿಸಬೇಕು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಎ ಬಿಜೆಪಿಯ ಚುನಾವಣಾ ಗಿಮಿಕ್, ಪಶ್ಚಿಮ ಬಂಗಾಳದಲ್ಲಿ ಜಾರಿಗೆ ಅವಕಾಶ ನೀಡಲ್ಲ: ಮಮತಾ ಬ್ಯಾನರ್ಜಿ

ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳ ಅಧಿಸೂಚನೆ ಹೊರಡಿಸಿರುವುದು ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಟೀಕಿಸಿದ್ದಾರೆ. ಹೊಸ ನಿಯಮಗಳ ಅಡಿ ಅರ್ಜಿ ಸಲ್ಲಿಸುವವರನ್ನು ತಕ್ಷಣಕ್ಕೆ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಸಿಎಎ ಅಥವಾ ಎನ್‌ಆರ್‌ಸಿ ಜಾರಿಗೆ ಬಿಡುವುದಿಲ್ಲ ಎಂದು ಸಹ ಅವರು ಹೇಳಿದ್ದಾರೆ.

ABOUT THE AUTHOR

...view details