ಕರ್ನಾಟಕ

karnataka

ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ನಕಲಿಗೆ ಅವಕಾಶ ಆರೋಪ: ಇಬ್ಬರು ಶಿಕ್ಷಕರ ಅಮಾನತು - Cheating in SSLC exam

By ETV Bharat Karnataka Team

Published : Mar 25, 2024, 8:31 PM IST

ಯಾದಗಿರಿ ಜಿಲ್ಲೆಯ ಪ್ರತ್ಯೇಕ ಕಡೆಗಳಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯುವಾಗ ವಿದ್ಯಾರ್ಥಿಗಳಿಗೆ ನಕಲು ಮಾಡುವುದಕ್ಕೆ ಅವಕಾಶ ಕೊಟ್ಟ ಆರೋಪದ ಮೇಲೆ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಇಬ್ಬರು ಶಿಕ್ಷಕರ ಅಮಾನತು
ಇಬ್ಬರು ಶಿಕ್ಷಕರ ಅಮಾನತು

ಬೆಂಗಳೂರು:ಎಸ್ಎಸ್ಎಲ್​ಸಿ ಪರೀಕ್ಷೆ-1ರ ಪ್ರಥಮ ಭಾಷೆ ಪರೀಕ್ಷೆ ವೇಳೆ ಕೆಲ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರೂ ಕ್ರಮ ಕೈಗೊಳ್ಳದ ಮತ್ತು ನಕಲು ಮಾಡಲು ಸಹಕರಿಸಿದ ಆರೋಪದ ಹಿನ್ನೆಲೆೆಯಲ್ಲಿ ಯಾದಗಿರಿ ಜಿಲ್ಲೆಯ ಎರಡು ಶಾಲೆಯ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹುಸಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿದ್ದ ಎಸ್ಎಸ್ಎಲ್​ಸಿ ಪರೀಕ್ಷೆ-1ರ ವೆಬ್ ಕಾಸ್ಟಿಂಗ್ ಸಿಸಿ ಕ್ಯಾಮರಾ ಜಿಲ್ಲಾ ಪಂಚಾಯತ್ ಸಿಇಒ ವೀಕ್ಷಣೆ ಮಾಡುವ ವೇಳೆಯಲ್ಲಿ ಕೊಠಡಿ ಸಂಖ್ಯೆ-11ರ ಕೋಣೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಪತ್ತೆಯಾಗಿದೆ.

ಈ ಕೊಠಡಿ ಮೇಲ್ವಿಚಾರಕರಾಗಿ ಏವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಸಾಹೇಬಗೌಡ ಉಕ್ಕಾಲಿ ಕರ್ತವ್ಯದಲ್ಲಿದ್ದು, ನಕಲು ಮಾಡುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಅಲ್ಲದೇ ಮುಖ್ಯ ಅಧೀಕ್ಷಕರ ಗಮನಕ್ಕೂ ತಂದಿಲ್ಲ. ಹಾಗಾಗಿ ಪರೀಕ್ಷಾ ಅಕ್ರಮಕ್ಕೆ ಸಹಕಾರ ಮತ್ತು ಕರ್ತವ್ಯಲೋಪದ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ. ಇದೇ ರೀತಿ ಏವೂರ ಸರ್ಕಾರಿ ಪ್ರೌಢಶಾಲೆಯಲ್ಲಿಯೂ ಇಂತಹದ್ದೇ ಘಟನೆ ನಡೆದಿದ್ದು, ಆ ಶಿಕ್ಷಕರನ್ನೂ ಅಮಾನತುಗೊಳಿಸಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆ ಸರ್ಕಾರಿ ಪ್ರೌಢಶಾಲೆ, ಯಾದಗಿರಿ ಜಿಲ್ಲೆಯ ಏವೂರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು(ಪೌಢ ವಿಭಾಗ), ಮತ್ತು ಸುರಪುರ ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರು ಶಿಕ್ಷಕರಗಳು ಕಾರ್ಯ ನಿರ್ವಹಿಸುತ್ತಿದ್ದ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯ ತೋರಿದ ಹಿನ್ನೆಲೆ ತಕ್ಷಣವೇ ಜಾರಿಗೆ ಬರುವಂತೆ ಉಪನಿರ್ದೇಶಕರು (ಆಡಳಿತ), ಸೇವೆಯಿಂದ ಅಮಾನತುಗೊಳಿಸಿರುತ್ತಾರೆ ಎಂದು ತಿಳಿಸಿದೆ.

ಶಾಂತಿಯುತ ಪರೀಕ್ಷೆ :ಎಸ್ಎಸ್ಎಲ್​ಸಿ ಪರೀಕ್ಷೆ-1ರ ಕನ್ನಡ ವಿಷಯಕ್ಕೆ 845811 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, 832343 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 13,468 ವಿದ್ಯಾರ್ಥಿಗಳು ಗೈರಾಗಿದ್ದು, ಶೇ.98.41 ರಷ್ಟು ಹಾಜರಾತಿ ಇದೆ. ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಪರೀಕ್ಷೆ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಪರೀಕ್ಷಾ ಅಕ್ರಮದ ಒಂದು ಪ್ರಕರಣ ವರದಿಯಾಗಿದೆ. ಯಾದಗಿರಿಯಲ್ಲಿ ಇಬ್ಬರು ಶಿಕ್ಷಕರನ್ನು ಪರೀಕ್ಷಾ ಅಕ್ರಮಕ್ಕೆ ಸಹಕರಿಸಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಇನ್ನುಳಿದಂತೆ ಪರೀಕ್ಷೆ ನಿರ್ವಿಘ್ನವಾಗಿ ನಡೆದಿದೆ.

ಇದನ್ನೂ ಓದಿ :ಕಾಪಿ ಹೊಡೆಯುವುದು ಮಹಾಪರಾಧವೇ?: ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಮಾಜಿ ಸಚಿವ ಎನ್​. ಮಹೇಶ್ ಆಕ್ಷೇಪ - CCTV IN EXAMINATION HALLS

ABOUT THE AUTHOR

...view details