ಕರ್ನಾಟಕ

karnataka

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಕೇರಳ, ತಮಿಳುನಾಡು ಅಧಿಕಾರಿಗಳಿಗೆ ಮಾಹಿತಿ ನೀಡಿದ ಎನ್ಐಎ

By ETV Bharat Karnataka Team

Published : Mar 20, 2024, 1:56 PM IST

Updated : Mar 20, 2024, 3:03 PM IST

ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣ ಹಾಗೂ ಕೇರಳದ ಆರ್​ಎಸ್​ಎಸ್ ಮುಖಂಡನ ಹತ್ಯೆ ಪ್ರಕರಣದ ಆರೋಪಿಗಳ ಜೊತೆಗೆ ರಾಮೇಶ್ವರಂ ಕೆಫೆ ಸ್ಫೋಟ ಆರೋಪಿಗೆ ನಂಟಿರುವ ಕುರಿತು ಎನ್​ಐಎ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Rameshwar Cafe blast accused suspected to have links
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಆರೋಪಿಗೆ ನಂಟು ಶಂಕೆ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ತನಿಖೆ ಜವಾಬ್ದಾರಿ ವಹಿಸಿಕೊಂಡಿರುವ ಬೆಂಗಳೂರಿನ ಎನ್ಐಎ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ತಮಿಳುನಾಡು ಹಾಗೂ ಕೇರಳದ ಎನ್ಐಎ ವಿಭಾಗದ ಅಧಿಕಾರಿಗಳು ಕೊಯಮತ್ತೂರಿನ ಕಾರ್ ಬಾಂಬ್ ಸ್ಫೋಟ ಪ್ರಕರಣದ ನಾಲ್ವರು ಹಾಗೂ ಕೇರಳದ ಪಾಲಕ್ಕಾಡ್​ನಲ್ಲಿ ನಡೆದ ಆರ್​ಎಸ್​ಎಸ್ ಮುಖಂಡನ ಹತ್ಯೆ ಪ್ರಕರಣದ ಓರ್ವ ಆರೋಪಿ ಸೇರಿದಂತೆ ಐವರನ್ನು ವಶಕ್ಕೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಮಾರ್ಚ್ 1ರಂದು ಬ್ರೂಕ್ ಫೀಲ್ಡ್​ನ ರಾಮೇಶ್ವರ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿಗೆ ಐವರು ಆರೋಪಿಗಳೊಂದಿಗೆ ನಂಟು ಇರುವ ಗುಮಾನಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಎನ್ಐಎ ಅಧಿಕಾರಿಗಳು ಕೇರಳ ಹಾಗೂ ತಮಿಳುನಾಡಿನ ಎನ್ಐಎ ಅಧಿಕಾರಿಗಳಿಗೆ ನೀಡಿದ ಮಾಹಿತಿ ಮೇರೆಗೆ ನ್ಯಾಯಾಂಗ ಬಂಧನದಲ್ಲಿರುವ ಐವರು ಆರೋಪಿಗಳನ್ನು ಮಾರ್ಚ್ 18ರಿಂದ 28ರ ವರೆಗೆ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಸ್ಲಾಮಿಕ್‌ ಸ್ಟೇಟ್ (ಐಎಸ್) ಭಯೋತ್ಪಾದನಾ ಸಂಘಟನೆ ಜೊತೆ ನಂಟು‌ ಹಾಗೂ‌ 2022ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ ಜಮೀಲ್ ಪಾಷಾ ಉಮ್ರಿ, ಮೊಹಮ್ಮದ್ ಹುಸೇನ್, ಇರ್ಷತ್, ಸೈಯದ್ ಅಬ್ದುಲ್ ರೆಹಮಾನ್ ಹಾಗೂ ಕೇರಳದ‌ ಪಾಲಕ್ಕಾಡ್​ನಲ್ಲಿ ನಡೆದಿದ್ದ ಆರ್​ಎಸ್​ಎಸ್ ಮುಖಂಡ ಶ್ರೀನಿವಾಸ್ ಹತ್ಯೆ ಪ್ರಕರಣದ ಆರೋಪಿ ಶಫಿಕ್ ಸೇರಿ ಐವರನ್ನು ವಶಕ್ಕೆ ಪಡೆದು ಆಯಾ ವಿಭಾಗದ ಎನ್ಐಎ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ರಾಮೇಶ್ವರ ಕೆಫೆ ಸ್ಫೋಟ‌ ಪ್ರಕರಣದ ಶಂಕಿತ ಆರೋಪಿಗೆ ತಮಿಳುನಾಡು ಹಾಗೂ ಕೇರಳದ ಟ್ರಾವೆಲ್ ಹಿಸ್ಟರಿ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇನ್ನು, ಶಿವಮೊಗ್ಗ ಜಿಲ್ಲೆಯಲ್ಲಿ ಟ್ರಯಲ್‌ ಬ್ಲಾಸ್ಟ್ ಕೇಸ್ ಆರೋಪಿಯಾಗಿರುವ ತೀರ್ಥಹಳ್ಳಿ ಮೂಲದ ಮಾಜ್ ಮುನೀರ್​ನನ್ನು ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಏಳು ದಿನಗಳಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹತ್ವದ ಮಾಹಿತಿಗಳು ಸಿಕ್ಕಿವೆ. ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗುವ ಹಿನ್ನೆಲೆಯಲ್ಲಿ ಇಂದೇ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿಗಳು ಆತನನ್ನು ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ:ಕೆಫೆ ಸ್ಫೋಟ ಪ್ರಕರಣ: ತಮಿಳರ ಬಗ್ಗೆ ವಿವಾದಾತ್ಮಕ ಹೇಳಿಕೆಗೆ ಶೋಭಾ ಕರಂದ್ಲಾಜೆ ಕ್ಷಮೆಯಾಚನೆ

Last Updated :Mar 20, 2024, 3:03 PM IST

ABOUT THE AUTHOR

...view details