ಕರ್ನಾಟಕ

karnataka

ಹಾಸನ ಪೆನ್​ಡ್ರೈವ್​ ಪ್ರಕರಣ: ವಿಡಿಯೋ ನೋಡಲು ನಾನು ಧೈರ್ಯ ಮಾಡಿಲ್ಲ ಎಂದ ನಿಖಿಲ್ ಕುಮಾರಸ್ವಾಮಿ - Hassan Pendrive Case

By ETV Bharat Karnataka Team

Published : May 4, 2024, 6:39 PM IST

ವಿಡಿಯೋ ನೋಡಲು ನಾನು ಧೈರ್ಯ ಮಾಡಿಲ್ಲ. ಈ ಪ್ರಕರಣವನ್ನು ರಾಜಕೀಯವಾಗಿ ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

NIKHIL KUMARASWAMY  VIDEO  BENGALURU
ವಿಡಿಯೋ ನೋಡಲು ನಾನು ಧೈರ್ಯ ಮಾಡಿಲ್ಲ ಎಂದ ನಿಖಿಲ್ (Etv Bharat)

ಬೆಂಗಳೂರು : ನನಗೆ ಒಂದೇ ಒಂದು ವಿಷಯ ಬಹಳ ದುಃಖ ತಂದಿದೆ. ವಿಡಿಯೋ ನೋಡುವುದಕ್ಕೆ ನಾನು ಧೈರ್ಯ ಮಾಡಿಲ್ಲ. ಈ ವಿಷಯ ನಮ್ಮ ಸುತ್ತಮುತ್ತಲಿನ ಜನ ಫೋನ್ ಮಾಡಿ ಹೇಳಿದರು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಅಜ್ಜನ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ವಿಡಿಯೋಗಳು ಇದ್ದಾಗ ಬ್ಲರ್ ಮಾಡಬೇಕಿತ್ತು. ಹೆಣ್ಣು ಮಕ್ಕಳ ಮುಖ ಕಾಣುವ ರೀತಿಯಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಸರಿಯಲ್ಲ. ಅದು ಸಹ ತನಿಖೆಯಾಗಬೇಕೆಂದು ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣದಿಂದ ದೇವೇಗೌಡರನ್ನು ಮುಗಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ನಡೆಯುತ್ತಿದೆ. ಇಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ದೇವೇಗೌಡರು ಹಾಗೂ ಕುಮಾರಣ್ಣರನ್ನು ಎಳೆದು ತರುವುದು ಸರಿಯಲ್ಲ. ಯಾರು ಆರೋಪಿ ಸ್ಥಾನದಲ್ಲಿ ಇದ್ದಾರೆ. ನಾನು ಹೇಳೋದು ಇಷ್ಟೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ತಪ್ಪು ಮಾಡಿದ ಮೇಲೆ ತಲೆ ಬಾಗಲೇಬೇಕು. ಅಂತಿಮವಾಗಿ ಎಸ್‌ಐಟಿ ವರದಿ ಬಂದ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಮಾತನಾಡೋಣ ಎಂದು ತಿಳಿಸಿದರು.

''ಈ ಪ್ರಕರಣವನ್ನು ರಾಜಕೀಯವಾಗಿ ತಪ್ಪು ದಾರಿಗೆ ಎಳೆಯಲಾಗುತ್ತಿದ್ದು, ರಾಜ್ಯದ ಜನಕ್ಕೆ ತಪ್ಪು ಸಂದೇಶ ಕೊಡುವ ಕೆಲಸ ಆಗುತ್ತಿದೆ. ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಬದುಕು ರಾಜ್ಯದ ಜನರಿಗೆ ಗೊತ್ತಿದೆ. ಅದರಲ್ಲೂ ವಿಶೇಷವಾಗಿ ದೇವೇಗೌಡರ ವೈಯಕ್ತಿಕ ಬದುಕು ತೆರೆದ ಪುಸ್ತಕ. ಅವರಾಗಲಿ, ನಮ್ಮಜ್ಜಿ ಚೆನ್ನಮ್ಮ ಆಗಲಿ ನಮ್ಮಂತ ಯುವಕರಿಗೆ ಸ್ಫೂರ್ತಿ. ದೇವೇಗೌಡರಿಗೆ ಈಗ 91 ವರ್ಷ ವಯಸ್ಸು, ಸಹಜವಾಗೇ ಈ ಎಲ್ಲ ವಿಷಯಗಳನ್ನು ಕೇಳಿ ಅವರ ಮನಸ್ಸಿಗೆ ಎಷ್ಟರ ಮಟ್ಟಿಗೆ ಆಘಾತ ಆಗಿರುತ್ತದೆ ಎಂಬುದನ್ನು ಊಹಿಸುವುದಕ್ಕೂ ಆಗಲ್ಲ. ಅವರು ಸಾಕಷ್ಟು ನೊಂದಿದ್ದಾರೆ. ತಾತ, ಅಜ್ಜಿ ಸಾಕಷ್ಟು ನೋವಿನಲ್ಲಿದ್ದಾರೆ. ಅದು ರಾಜ್ಯದ ಜನತೆಗೆ ಗೊತ್ತು'' ಎಂದು ಹೇಳಿದರು.

ನಾನು ಹಾಸನ ಜಿಲ್ಲೆಗೆ ಕಾಲಿಟ್ಟವನಲ್ಲ: ರೇವಣ್ಣ ಅವರ ವಿಚಾರವಾಗಿರಲಿ, ಹಾಸನ ಸಂಸದರ ವಿಚಾರವಾಗಲಿ ನಾನು ಬಹಳಷ್ಟು ಬಾರಿ ಹೇಳಿದ್ದೇನೆ. ನಾನು ಹೆಚ್ಚು ಹಾಸನ ಜಿಲ್ಲೆಗೆ ಕಾಲಿಟ್ಟವನಲ್ಲ, ಹಾಸನಾಂಬೆ ದರ್ಶನಕ್ಕೆ ಹೋಗುತ್ತಿದ್ದೆ. ನನಗಾಗಲಿ, ಹಾಸನ ಸಂಸದರಿಗೆ ಹೆಚ್ಚಿನ ಸಂಪರ್ಕ ಇಲ್ಲ ಎನ್ನುವ ಮೂಲಕ ಪ್ರಜ್ವಲ್‌ ರೇವಣ್ಣ ಅವರ ಹೆಸರು ಹೇಳಲು ಕೂಡ ಹಿಂದೇಟು ಹಾಕಿದ ನಿಖಿಲ್, ಇನ್ನು, ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟಿದೆಯೋ ಅವರ ಪರ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೇವೆ ಎಂದರು.

ಪ್ರಜ್ವಲ್‌ ರೇವಣ್ಣ ಪ್ರಕರಣದಿಂದ ನೊಂದಿರುವ, ಮುಜುಗರಪಟ್ಟಿರುವ ಹಾಸನ ಜಿಲ್ಲೆಯ ಕಾರ್ಯಕರ್ತರನ್ನು, ಮುಖಂಡರನ್ನು ಭೇಟಿ ಮಾಡಿ ಹೆಚ್.ಡಿ. ಕುಮಾರಸ್ವಾಮಿ ಶೀಘ್ರದಲ್ಲೇ ಧೈರ್ಯ ಹೇಳಲಿದ್ದಾರೆ ಎಂದು ತಿಳಿಸಿದರು.

ದೇವೇಗೌಡರ ಆರೋಗ್ಯ ವಿಚಾರಿಸಿಕೊಂಡು ಹೋಗುವುದಕ್ಕೆ ಬಂದಿದ್ದೆ. ನನಗೂ ನಾಲ್ಕೈದು ದಿನದಿಂದ ವೈರಲ್ ಫಿವರ್‌ ಆಗಿತ್ತು. ಬರಲಿಕ್ಕೆ ಆಗಿರಲಿಲ್ಲ. ಫೋನ್‌ ಮಾಡಿ ಅವರ ಆರೋಗ್ಯ ವಿಚಾರಿಸಿದ್ದೆ, ಈಗ ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಬಂದಿದ್ದೇನೆ. ಮುಚ್ಚು ಮರೆ ಏನಿಲ್ಲ. ಆರೋಗ್ಯದ ಬಗ್ಗೆ ಗಮನ ಕೊಡಿ. ಹೆಚ್ಚು ಚಿಂತೆ ಮಾಡ್ಬೇಡಿ ಎಂದು ಹೇಳಿದ್ದೇನೆ. ಅವರ ಹೋರಾಟದಿಂದಲೇ ಪ್ರಾದೇಶಿಕ ಪಕ್ಷ ಬೆಳೆದಿದೆ. ದೊಡ್ಡವರ ಆರೋಗ್ಯ, ಮಾನಸಿಕ ಆರೋಗ್ಯದ ಮೇಲೆ ಇದು ಪರಿಣಾಮ ಬೀರಿದೆ. ಧೈರ್ಯವಾಗಿರಿ, ನಾವೆಲ್ಲ ಇದೀವಿ ಎಂದು ಧೈರ್ಯ ತುಂಬಿದ್ದೇನೆ ಎಂದು ಭಾವನಾತ್ಮಕವಾಗಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

ಓದಿ:ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆ, ಶೀಘ್ರ ಪ್ರಜ್ವಲ್​ ಬಂಧಿಸಲು ಕ್ರಮ: ಸಿಎಂಗೆ ಎಸ್​ಐಟಿ ಮಾಹಿತಿ - HASSAN PEN DRIVE CASE

ABOUT THE AUTHOR

...view details