ಕಾರವಾರ (ಉತ್ತರ ಕನ್ನಡ) :ಹವಾಮಾನ ಮುನ್ಸೂಚನೆ ನೀಡುವ ಸಂಬಂಧ ಪಶ್ಚಿಮ ಕರಾವಳಿ ಸಮುದ್ರದಲ್ಲಿ ಅಳವಡಿಸಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವೇವ್ ರೆಡಾರ್ ಬೊಯ್ ನಾಪತ್ತೆಯಾಗಿದ್ದು, ಯಾರೋ ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ.
ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಇನ್ ಕೊಯಿಸ್ ಹೈದರಬಾದ್ ಮತ್ತು ಕಾರವಾರದ ಕಡಲ ಜೀವಶಾಸ್ತ್ರ ವಿಭಾಗ ವತಿಯಿಂದ ಲೈಟ್ ಹೌಸ್ ಹತ್ತಿರದ ಸಮುದ್ರದಲ್ಲಿ ಹಾಕಿದ್ದ ಈ ವೇವ್ ರೆಡಾರ್ ಬಾಯ್ ಹಗ್ಗವನ್ನು ಕತ್ತರಿಸಿರುವುದು ಕಂಡುಬಂದಿದೆ. ಕಳೆದ ನಾಲ್ಕೈದು ದಿನಗಳಿಂದ ಇನ್ ಕೊಯಿಸ್ ಸಂಸ್ಥೆಗೆ ಸಮುದ್ರದಲ್ಲಿನ ಯಾವುದೇ ಮುನ್ಸೂಚನೆ ಬಾರದೇ ಸಂಪರ್ಕ ಕಡಿತವಾಗಿತ್ತು. ಈ ಬಗ್ಗೆ ಕವಿವಿ ಕಡಲಜೀವ ಶಾಸ್ತ್ರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಜಗನ್ನಾಥ ರಾಥೋಡ ಸಿಬ್ಬಂದಿಯೊಂದಿಗೆ ಲೈಟ್ ಹೌಸ್ ಬಳಿ ತೆರಳಿ ಪರಿಶೀಲಿಸಿದಾಗ ಬೊಯ್ ಹಗ್ಗ ಕತ್ತರಿಸಿ ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ಸಮುದ್ರದ ಆಳದಿಂದ ಸುಮಾರು ದೂರ ಎಳೆದುಕೊಂಡು ಹೋಗಿದ್ದು ಕೊನೆಯದಾಗ ವೇವ್ ರೆಡಾರ್ ಬಾಯ್ ಸಿಗ್ನಲ್ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸಿಕ್ಕಿದೆ ಎನ್ನಲಾಗಿದೆ.