ಕರ್ನಾಟಕ

karnataka

ಲೋಕಸಭೆ ಚುನಾವಣೆ: ಬಿಜೆಪಿಯಿಂದ 40 ದಿನ 'ಧನ್ಯವಾದ ಮೋದಿ' ಅಭಿಯಾನ - BJP Campaign

By ETV Bharat Karnataka Team

Published : Mar 30, 2024, 9:31 PM IST

ರಾಜ್ಯದಲ್ಲಿ 40 ದಿನಗಳ ಕಾಲ ಧನ್ಯವಾದ ಮೋದಿ ಅಭಿಯಾನ ನಡೆಸಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

thank-you-modi-campaign-for-40-days-in-karnataka-sunil-kumar
ಲೋಕಸಭೆ ಚುನಾವಣೆ: ಬಿಜೆಪಿಯಿಂದ 40 ದಿನ 'ಧನ್ಯವಾದ ಮೋದಿ' ಅಭಿಯಾನ

ಬೆಂಗಳೂರು:ಕರ್ನಾಟಕ ಬಿಜೆಪಿ ವತಿಯಿಂದ ಇಂದಿನಿಂದ 'ಧನ್ಯವಾದ ಮೋದಿ ಅಭಿಯಾನ' ಆರಂಭಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ತಿಳಿಸಿದರು.

ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ.ರಿಜಾಯ್ಸ್​ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ 10 ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ದೊಡ್ಡ ಪ್ರಮಾಣದ ಕೊಡುಗೆಯನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನೀಡುತ್ತಿದೆ. ಮೋದಿಯವರದ್ದು ಎಲ್ಲ ಆಯಾಮಗಳ, ಯಾವುದೇ ತಾರತಮ್ಯ ಇಲ್ಲದ ಆಡಳಿತ. ಕರ್ನಾಟಕದ ಕೊಡುಗೆಗಳನ್ನು ಗುರುತಿಸಿಕೊಂಡು ಪ್ರತಿದಿನ ಒಂದು-ಎರಡು ಯೋಜನೆಗಳನ್ನು ವಿಡಿಯೋ ಮೂಲಕ ಪರಿಚಯಿಸಿ ಮುಂದಿನ 40 ದಿನಗಳ ಕಾಲ ಧನ್ಯವಾದ ಮೋದಿ ಅಭಿಯಾನ ಮಾಡಲಿದ್ದೇವೆ ಎಂದರು.

ಪ್ರತಿ ಯೋಜನೆಯ ಮೂಲಕ ಕರ್ನಾಟಕಕ್ಕೆ ಆದ ಲಾಭವನ್ನು ತಿಳಿಸುವ ಉದ್ದೇಶವಿದೆ. ತನ್ಮೂಲಕ ಇನ್ನಷ್ಟು ಯೋಜನೆಗಳು ಕರ್ನಾಟಕಕ್ಕೆ ಬರಲು ಮತ್ತೊಮ್ಮೆ ಮೋದಿಯವರ ಸರ್ಕಾರ ದೇಶದಲ್ಲಿ ಬರಬೇಕು ಎಂಬುದು ನಮ್ಮ ಆಶಯ ಎಂದರು.

ವಿಡಿಯೋ ಬಿಡುಗಡೆ:ಇದೇ ವೇಳೆ ಮೊದಲ ವಿಡಿಯೋವನ್ನು ಅವರು ಬಿಡುಗಡೆ ಮಾಡಿದರು. ಹೊಗೆಮುಕ್ತ ಅಡುಗೆ ಮನೆಯ 'ಉಜ್ವಲ' ಸಿಲಿಂಡರ್ ಸಂಪರ್ಕ ಯೋಜನೆ ಕುರಿತ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು. ಈ ಯೋಜನೆಯಡಿ ಕರ್ನಾಟಕದಲ್ಲಿ 40.70 ಲಕ್ಷ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡಿದ್ದನ್ನು ಗಮನಕ್ಕೆ ತಂದರು. ಇಡೀ ದೇಶದಲ್ಲಿ ಇದರ ಫಲಾನುಭವಿಗಳ ಸಂಖ್ಯೆ 10.5 ಕೋಟಿ ಎಂದು ಸುನೀಲ್ ಕುಮಾರ್ ತಿಳಿಸಿದರು.

ಮೋದಿಯವರು 4 ಪ್ರಮುಖ ಪರಿಕಲ್ಪನೆ ಇಟ್ಟುಕೊಂಡಿದ್ದಾರೆ. ಯುವಕರು, ಮಹಿಳೆಯರು, ರೈತರು ಮತ್ತು ಬಡವರ ವರ್ಗಗಳಿಗಾಗಿ ಹಾಗೂ ಅವರ ಕಲ್ಯಾಣಕ್ಕಾಗಿ ದುಡಿಯುವುದಾಗಿ ಉಲ್ಲೇಖಿಸಿದ್ದಾರೆ. ಈ ಕ್ಷೇತ್ರಗಳಿಗಾಗಿ ಬೇರೆ-ಬೇರೆ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ನಿರಂತರವಾಗಿ ನೀಡುತ್ತ ಬಂದಿದೆ ಎಂದು ಹೇಳಿದರು.

ಏ.1ರಿಂದ ನಾಮಪತ್ರ ಸಲ್ಲಿಕೆ: ನಾಮಪತ್ರ ಸಲ್ಲಿಕೆ ಕಾರ್ಯಕ್ರಮವೇ ಮತದಾರರಿಗೆ ಒಂದು ಸ್ಪಷ್ಟ ಸಂದೇಶ ಕೊಡಬೇಕು. ಅದು ವಿಜಯದ ನಾಮಪತ್ರವಾಗಿ ಪರಿವರ್ತನೆ ಆಗಬೇಕೆಂಬ ಪರಿಕಲ್ಪನೆ ನಮ್ಮದು. ಏಪ್ರಿಲ್ 1 ರಿಂದ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. 14 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಹಲವು ಜನ ಹಿರಿಯರು ಹಾಗೂ ಜೆಡಿಎಸ್ ಪ್ರಮುಖರ ತಂಡ ಭಾಗವಹಿಸಲಿದೆ. ಅದಕ್ಕಾಗಿ 2 ಪಕ್ಷಗಳ ವಿವಿಧ ತಂಡಗಳನ್ನು ಕಳುಹಿಸಲಾಗುತ್ತಿದೆ ಎಂದು ವಿವರಿಸಿದರು.

ಏಪ್ರಿಲ್ 1ರಂದು ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ನಾಮಪತ್ರ ಸಲ್ಲಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್​ ಜೋಶಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು. ಬನ್ನಪ್ಪ ಪಾರ್ಕಿನಿಂದ ಬಿಬಿಎಂಪಿ ತನಕ ರೋಡ್ ಶೋ ನಡೆಯಲಿದೆ ಎಂದರು.

ಏ.3ರಂದು ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ ಕೃಷ್ಣರಾಜ ಒಡೆಯರ್ ಹಾಗೂ ಚಾಮರಾಜನಗರದ ಅಭ್ಯರ್ಥಿ ಎಸ್.ಬಾಲರಾಜ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಹಾಗೆಯೇ, ತುಮಕೂರಿನ ನಮ್ಮ ಅಭ್ಯರ್ಥಿ ಸೋಮಣ್ಣ ಹಾಗೂ ಬೆಂಗಳೂರು ಉತ್ತರದ ನಮ್ಮ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಏ.4ರಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಗಳೂರಿನ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಬೆಂಗಳೂರು ಗ್ರಾಮಾಂತರದ ಡಾ.ಸಿ.ಎನ್.ಮಂಜುನಾಥ್, ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ, ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಹಾಗೂ ಚಿಕ್ಕಬಳ್ಳಾಪುರದ ಅಭ್ಯರ್ಥಿ ಡಾ. ಸುಧಾಕರ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್: ಯಾರ ವಿರುದ್ಧ ಯಾರು ಅಖಾಡದಲ್ಲಿದ್ದಾರೆ, ಇಲ್ಲಿದೆ ಸಂಪೂರ್ಣ ಮಾಹಿತಿ - Lok Sabha election 2024

ABOUT THE AUTHOR

...view details