ಕರ್ನಾಟಕ

karnataka

ಚಾಮರಾಜನಗರ: ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿಸೇವೆ - ಭರ್ಜರಿ ಮಾಂಸದೂಟ

By ETV Bharat Karnataka Team

Published : Jan 28, 2024, 7:48 PM IST

Updated : Jan 28, 2024, 8:16 PM IST

ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯ 4ನೇ ದಿನವಾದ ಇಂದು ಪಂಕ್ತಿಸೇವೆ ನಡೆಯಿತು.

kollegal-sri-siddappaji-temple-chikkalur-jatre-celebration
ಚಾಮರಾಜನಗರ: ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿಸೇವೆ - ಭರ್ಜರಿ ಮಾಂಸದೂಟ

ಚಿಕ್ಕಲ್ಲೂರು ಜಾತ್ರೆ

ಚಾಮರಾಜನಗರ:ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯ 4ನೇ ದಿನವಾದ ಭಾನುವಾರ ಪಂಕ್ತಿಸೇವೆ ನಿರ್ವಿಘ್ನದಿಂದ ನಡೆಯಿತು. ದೇಗುಲ ಆವರಣ ಬಿಟ್ಟು ಖಾಸಗಿ ಜಮೀನುಗಳಲ್ಲಿ ಬಿಡಾರ ಹೂಡಿದ್ದ ಭಕ್ತರು, ಮಾಂಸದ ಅಡುಗೆ ಮಾಡಿ ಪಂಕ್ತಿಸೇವೆ ನಡೆಸಿದರು.

ಚಿಕ್ಕಲ್ಲೂರು ಕ್ಷೇತ್ರದಲ್ಲಿ 5 ಹಗಲು, 5 ರಾತ್ರಿ ಜಾತ್ರೆ ನಡೆಯಲಿದ್ದು, 4ನೇ ದಿನದಂದು ಪಂಕ್ತಿಸೇವೆ ನಡೆಸಲಾಗುತ್ತದೆ. ಅದರಂತೆ, ಲಕ್ಷಾಂತರ ಮಂದಿ ಭಕ್ತರು ದೇವರಿಗೆ ಅನ್ನ, ಮುದ್ದೆ, ಮಾಂಸದ ಭಕ್ಷ್ಯಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿ ಸಹಪಂಕ್ತಿ ಭೋಜನ ಸವಿದಿದ್ದಾರೆ. ಐತಿಹಾಸಿಕ, ಭಕ್ತಿ ಪರಾಕಾಷ್ಠೆಯ ಜಾತ್ರೆ ಎಂದೇ ಜನಜನಿತವಾಗಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಪಂಕ್ತಿಸೇವೆ ಸಲ್ಲಿಸಿ ತಮ್ಮ ನಂಬಿಕೆ, ಭಕ್ತಿ ಅಚಲ ಎಂದು ಸಾರಿದರು.

ಮಾಂಸದ ಭಕ್ಷ್ಯ ತಯಾರಿಸಿ ದೇವರಿಗೆ ಎಡೆ ಇಟ್ಟು ಬಳಿಕ ಸಹಪಂಕ್ತಿ ಭೋಜನ ಮಾಡುವ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಿಸಿ ಹದ್ದಿನ ಕಣ್ಣಿಟ್ಟಿತ್ತು. ಆಚರಣೆಯನ್ನು ಬಿಡಲೊಪ್ಪದ ಜನರು ದೇವಾಲಯ ಆವರಣದಿಂದ ದೂರದ ಪ್ರದೇಶದಲ್ಲಿ ಮಾಂಸದ ಅಡುಗೆ ತಯಾರಿಸಿ ಶ್ರದ್ಧೆ-ಭಕ್ತಿಯಿಂದ ಎಡೆ ಅರ್ಪಿಸಿದ್ದಾರೆ. ಜಿಲ್ಲೆ ಹೊರ ಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ಮಾಂಸದೂಟ ತಯಾರಿಸಿ ನೀಲಗಾರರ ಸಂಪ್ರದಾಯಕ್ಕೆ ಅನುಗುಣವಾಗಿ ಎಡೆ ಅರ್ಪಿಸಿ ರಾಚಪ್ಪಾಜಿ, ಸಿದ್ದಾಪ್ಪಾಜಿ ದೇವರಿಗೆ ಮದ್ಯ- ಮಾಂಸ ಅರ್ಪಿಸಿ ಭಕ್ತಿ ಮೆರೆದರು.

ಜಾತ್ರೆಯಲ್ಲಿ ಮಹಿಳಾ ಶಕ್ತಿ ಪ್ರದರ್ಶನ: ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಉಚಿತ ಪ್ರಯಾಣ ಹಿನ್ನೆಲೆ ಜಾತ್ರೆಗೆ ಮಹಿಳಾ ಸಾಗರವೇ ಹರಿದುಬಂದಿತ್ತು. ಬಸ್ ಗಳಿಗೆ ಹತ್ತಲು ಮಹಿಳೆಯರು ನಾ ಮುಂದೆ- ತಾ ಮುಂದೆ ಎಂದು ಕಿಟಕಿ, ಚಾಲಕರ ಡೋರ್ ಗಳಲ್ಲಿ ಹತ್ತಿದರು. ಕಿಟಕಿಗಳಿಗೆ ಮಕ್ಕಳನ್ನು ತೂರಿಸಿ ಆಸನ ಹಿಡಿಯುವ ಸಾಹಸ ಮಾಡಿದರು.

ಜಾತ್ರೆಗೆ ಆಗಮಿಸಿದ ಭಕ್ತ ಚಿಕ್ಕಸ್ವಾಮಿ ಮಾತನಾಡಿ," ನಾವು ಪ್ರತಿ ವರ್ಷ ಜಾತ್ರೆಗೆ ಬರುತ್ತೇವೆ, ಇಂದು ಮಾಂಸದ ಅಡುಗೆ ಮಾಡಿ ದೇವರಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿದ್ದೇವೆ" ಎಂದರು. ಇದೇ ವೇಳೆ ಮತ್ತೊಬ್ಬ ಭಕ್ತ ಜವರನಾಯಕ ಮಾತನಾಡಿ, "ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಜಾತ್ರೆಯ ಮೂರನೇ ದಿನ ತುಪ್ಪದ ಕಜ್ಜಾಯ ಮಾಡುತ್ತೇವೆ. ನಾಲ್ಕನೇ ದಿನ ಪಂಕ್ತಿಸೇವೆಯಲ್ಲಿ ಮಾಂಸದ ಅಡುಗೆ ಮಾಡುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ:ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಭಕ್ತರನ್ನು ಸೆಳೆಯುತ್ತಿದೆ ಮಿರ್ಚಿ ಘಮಲು

Last Updated :Jan 28, 2024, 8:16 PM IST

ABOUT THE AUTHOR

...view details