ಕರ್ನಾಟಕ

karnataka

'ಈಶ್ವರಪ್ಪನವರು ಯಾರು ಅಂತಾನೇ ಗೊತ್ತಿಲ್ಲ': ಬಿಜೆಪಿ ರಾಜ್ಯ ಉಸ್ತುವಾರಿ ಅಗರ್ವಾಲ್ - Radha Mohan Das Agarwal

By ETV Bharat Karnataka Team

Published : Apr 16, 2024, 4:35 PM IST

ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಗರಂ ಆಗಿದ್ದಾರೆ.

ಬಿಜೆಪಿ ಉಸ್ತುವಾರಿ ಅಗರ್ವಾಲ್
ಬಿಜೆಪಿ ಉಸ್ತುವಾರಿ ಅಗರ್ವಾಲ್

ಬಿಜೆಪಿ ಉಸ್ತುವಾರಿ ಅಗರ್ವಾಲ್

ಬಾಗಲಕೋಟೆ: ಈಶ್ವರಪ್ಪನವರು ಯಾರು ಅಂತಾನೇ ನನಗೆ ಗೊತ್ತಿಲ್ಲ. ಅವರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದರು.

ನವನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಪಕ್ಷಕ್ಕೆ ದುಡಿದ ಹಿರಿಯ ನಾಯಕನ ಬಗ್ಗೆ ಗೊತ್ತಿಲ್ಲ ಅಂದ್ರೆ, ಇದು ಅವರಿಗೆ ಮಾಡಿದ ಅಪಮಾನವಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ವ್ಯಕ್ತಿ ಅಪಮಾನ ಅವರ ಹೆಸರಿನಿಂದ ಆಗುವುದಿಲ್ಲ, ಬದಲಾಗಿ ಅವರು ಮಾಡಿದ ಕಾರ್ಯದಿಂದ ಆಗುತ್ತದೆ. ಬಿಜೆಪಿಯ ಕಾರ್ಯಕರ್ತ ಎಂತಹ ಪರಿಸ್ಥಿತಿಯಲ್ಲೂ ಬಿಜೆಪಿ ಪಕ್ಷದೊಂದಿಗೇ ಇರುತ್ತಾನೆ. ಇದಿಷ್ಟನ್ನು ಬಿಟ್ಟು ಅವರ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ ಎಂದು ತಿಳಿಸಿದರು.

ಪ್ರಚಾರದಲ್ಲಿ ಈಶ್ವರಪ್ಪನವರು ಮೋದಿಯವರ ಫೋಟೊ ಬಳಸುತ್ತಿರುವ ವಿಚಾರಕ್ಕೆ, ಕ್ರಮ ತೆಗೆದುಕೊಳುವುದು ಚುನಾವಣಾ ಆಯೋಗದ ಕೆಲಸ. ಚುನಾವಣೆಯಲ್ಲಿ ಅಕ್ರಮ ನಡೆಯುವುದಿಲ್ಲ. ಜನರನ್ನು ವಂಚಿಸಿ ಜನರನ್ನು ಮೋಸ ಮಾಡಿ ಕರ್ನಾಟಕದಂತಹ ವಿದ್ಯಾವಂತರ ನಾಡಲ್ಲಿ ಜನರ ಮತ ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಸುಶಿಕ್ಷಿತ, ವಿಕಸಿತವಾದ ಆಧುನಿಕ ಪ್ರದೇಶ. ಇಲ್ಲಿ ಮೋಸ ನಡೆಯದು. ಮೋದಿ ಅವರ ಫೋಟೊ ಬಳಸಿ ಪ್ರಚಾರ ಮಾಡುತ್ತಿರುವ ವಿಚಾರ ಕೇಳಿ ನಗು ಬರುತ್ತದೆ ಎಂದರು.

ಪ್ರಧಾನಿ ಮೋದಿ ಯಾರಿಗೆ ಟಿಕೆಟ್ ನೀಡಿದ್ದಾರೋ ಅವರು ಮಾತ್ರ ಬಳಸಲಿ ಎಂದು ಸಲಹೆ ನೀಡಿದ ಅವರು, ಚುನಾವಣೆ ಸಂದರ್ಭದಲ್ಲಿ ಚುನಾವಣೆ‌ ನಿಯಮಗಳನ್ನು ಪಾಲಿಸಬೇಕು. ವಂಚನೆ ಮಾಡಿದ್ರೆ ಇಂಡಿಯನ್ ಪಿನಲ್ ಕೋಡ್​ ಪ್ರಕಾರ 420 ಎನ್ನುವ ಸೆಕ್ಷನ್ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಈಶ್ವರಪ್ಪನವರಿಗೆ ಟಾಂಗ್ ಕೊಟ್ಟರು.

ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಬಂಡಾಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅಗರ್ವಾಲ್, ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗೆದ್ದು ಬರಲಿದ್ದಾರೆ. ಕಳೆದ ಚುನಾವಣೆಗಿಂತ ಹೆಚ್ಚು ಮತಗಳನ್ನು ಪಡೆಯಲಿದ್ದಾರೆ. ಜೋಶಿಯವರ ಹೋರಾಟ ಸ್ವತಃ ಜೋಶಿ ವಿರುದ್ಧ ಇದೆ. ಸ್ವಾಮೀಜಿ ಬಗ್ಗೆ ಮಾತನಾಡುವುದು ನನಗೆ ಶೋಭೆ ತರುವುದಿಲ್ಲ ಎಂದರು.

ಬಾಗಲಕೋಟೆ ಜಿಲ್ಲೆಯಲ್ಲಿ ನಾಲ್ಕು ಬಾರಿ ಜಯಗಳಿಸಿರುವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅಜಾತಶತ್ರು. ಅವರ ಗೆಲುವು ಖಚಿತ. ನಾಲ್ಕು ಸಲ ಸಂಸದರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಏಪ್ರಿಲ್ 19ರಂದು ಬೃಹತ್ ಮೆರವಣಿಗೆ ಮೂಲಕ ಪಿ.ಸಿ.ಗದ್ದಿಗೌಡರ ನಾಮಪತ್ರ ಸಲ್ಲಿಸಲಿದ್ದು ರಾಜ್ಯ ಮಟ್ಟದ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಸ್ಮಶಾನದಲ್ಲಿ ಹೊಸ ಕಾರು ಪೂಜೆ ಮಾಡುತ್ತಿದ್ದವರು ಈಗೀಗ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ: ಯತ್ನಾಳ್ ಲೇವಡಿ - Basanagowda Yatnal

ABOUT THE AUTHOR

...view details