ಕರ್ನಾಟಕ

karnataka

ಲಗೇಜ್​ ಬಿಟ್ಟು ಬೆಳಗಾವಿಗೆ ಬಂದಿಳಿದ ವಿಮಾನ: ಪ್ರಯಾಣಿಕರ ಪರದಾಟ, ಪ್ರತಿಭಟನೆ - flight left passenger bags

By ETV Bharat Karnataka Team

Published : Apr 21, 2024, 10:24 PM IST

ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ಬಂದಿಳಿದ ವಿಮಾನದಲ್ಲಿ ಪ್ರಯಾಣಿಸಿದ 22ಕ್ಕೂ ಅಧಿಕ ಪ್ರಯಾಣಿಕರ ಲಗೇಜ್‌ಗಳನ್ನು ಬೆಂಗಳೂರಿನಲ್ಲೇ ಬಿಟ್ಟು ಬಂದಿರುವ ಘಟನೆ ನಡೆದಿದೆ.

ಬ್ಯಾಗ್ ಬಿಟ್ಟು ಬೆಳಗಾವಿಗೆ ಬಂದಿಳಿದ ಇಂಡಿಗೋ ವಿಮಾನ: ಪ್ರಯಾಣಿಕರ ಪರದಾಟ, ಪ್ರತಿಭಟನೆ
ಬ್ಯಾಗ್ ಬಿಟ್ಟು ಬೆಳಗಾವಿಗೆ ಬಂದಿಳಿದ ಇಂಡಿಗೋ ವಿಮಾನ: ಪ್ರಯಾಣಿಕರ ಪರದಾಟ, ಪ್ರತಿಭಟನೆ

ಬೆಳಗಾವಿ:ಬೆಂಗಳೂರಿನಿಂದ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ಬಂದಿಳಿದ ಇಂಡಿಗೋ ವಿಮಾನ ಸಿಬ್ಬಂದಿ ಸುಮಾರು 22ಕ್ಕೂ ಹೆಚ್ಚು ಪ್ರಯಾಣಿಕರ ಲಗೇಜ್ ಅನ್ನು ಬೆಂಗಳೂರಿನಲ್ಲೇ ಬಿಟ್ಟು ಬಂದಿರುವ ಘಟನೆ ನಡೆದಿದೆ. ಇದರಿಂದಾಗಿ ಬೆಳಗಾವಿ ಸೇರಿದಂತೆ ವಿವಿಧ ಪ್ರದೇಶಗಳ ಪ್ರಯಾಣಿಕರು ಪರದಾಡುವಂತಾಗಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಇದೇ ವಿಮಾನದಲ್ಲಿ ಆಗಮಿಸಿದ್ದು, ಅವರ ಬ್ಯಾಗ್ ಕೂಡ ಮಿಸ್ಸಿಂಗ್ ಆಗಿದೆ. ಬೆಳಗಾವಿಗೆ ಬಂದು ಇಳಿಯುವವರೆಗೆ ಬ್ಯಾಗ್ ಬಾರದಿರುವ ಕುರಿತು ಯಾರಿಗೂ ಮಾಹಿತಿ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.

ಭಾನುವಾರ ಸಂಜೆ 5.55ಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ವಿಮಾನ ಹೊರಟಿದೆ. ವಿಮಾನದಲ್ಲಿ ಮಲೇಷಿಯನ್ ವಿದ್ಯಾರ್ಥಿಗಳು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು. ವಿಮಾನ ರಾತ್ರಿ 7.30ಕ್ಕೆ ಬೆಳಗಾವಿಗೆ ಬಂದಿಳಿಯುತ್ತಿದ್ದಂತೆ ಪ್ರಯಾಣಿಕರಿಗೆ ಬಿಗ್ ಶಾಕ್ ಕಾದಿತ್ತು. ಸುಮಾರು 22ಕ್ಕೂ ಹೆಚ್ಚು ಪ್ರಯಾಣಿಕರ ಬ್ಯಾಗ್​ಗಳು ಬಂದಿರಲಿಲ್ಲ. ಈ ಕುರಿತು ಸಿಬ್ಬಂದಿಗಳನ್ನು ಪ್ರಯಾಣಿಕರು ವಿಚಾರಿಸಿದರೆ, ಮಲೇಷಿಯನ್ ವಿದ್ಯಾರ್ಥಿಗಳ ಬ್ಯಾಗ್​ಗಳು ಬಹಳ ದೊಡ್ಡದಿದ್ದವು. ಹಾಗಾಗಿ ಬೇರೆ ಪ್ರಯಾಣಿಕರ ಬ್ಯಾಗ್​ಗಳನ್ನು ತರಲು ಸಾಧ್ಯವಾಗಿಲ್ಲ. ನಿಮ್ಮ ಬ್ಯಾಗ್​ಗಳನ್ನು ನಾಳೆ ತರಿಸಿಕೊಡುತ್ತೇವೆ ಎಂದು ಉತ್ತರಿಸಿದ್ದಾರೆ. ಇದರಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗೆ ಮುಂದಾದರು.

ಮಲೇಷಿಯನ್ ವಿದ್ಯಾರ್ಥಿಗಳ ಬ್ಯಾಗ್ ದೊಡ್ಡದಿದ್ದರೆ ಅವರ ಬ್ಯಾಗ್ ಬಿಡಬಹುದಿತ್ತು ಅಥವಾ ನಮಗೆ ಮೊದಲೇ ಮಾಹಿತಿ ನೀಡಬೇಕಿತ್ತು. ನಮ್ಮಲ್ಲಿ ಹಲವರು ಸೀನಿಯರ್ ಸಿಟಿಜನ್ಸ್ ಇದ್ದಾರೆ, ಬೇರೆ ಊರಿನ ಪ್ರಯಾಣಿಕರಿದ್ದಾರೆ. ಅನೇಕರ ಮೆಡಿಸಿನ್ಸ್ ಸೇರಿದಂತೆ ಅಗತ್ಯ ವಸ್ತುಗಳು ಬ್ಯಾಗ್ ನಲ್ಲಿವೆ. ಅಂತವರು ಈಗ ಏನು ಮಾಡಬೇಕು ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ತೂಕ ಸೇರಿದಂತೆ ಎಲ್ಲ ರೀತಿ ಪರಿಶೀಲನೆ ಮಾಡಿದ ಬಳಿಕವೇ ಲಗೇಜ್ ಪಡೆದು, ವಿಮಾನಕ್ಕೆ ಹಾಕಲಾಗುತ್ತದೆ. ಆದರೂ ಈ ರೀತಿಯ ಅಚಾತುರ್ಯ ಹೇಗಾಯಿತು?. ಇದಕ್ಕೆ ಯಾರು ಹೊಣೆ ಎಂದು ಸಿಬ್ಬಂದಿಗಳನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡರು.

ಪ್ರಯಾಣಿಕರ ಪ್ರತಿಭಟನೆ ಮುಂದುವರಿದಿದ್ದು, ವಿಮಾನ ಸಿಬ್ಬಂದಿ ಯಡವಟ್ಟಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೇರೆ ಊರಿಗೆ ಹೋಗಬೇಕಿರುವ ಮತ್ತು ಬೇರೆ ಊರಿನಿಂದ ಬಂದಿರುವ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಇದನ್ನೂ ಓದಿ:ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಮಂದಿ ಸಾವು; ದಾಂಡೇಲಿಯಲ್ಲಿ ದುರಂತ - Kali River Tragedy

ABOUT THE AUTHOR

...view details