ಕರ್ನಾಟಕ

karnataka

ಮಂಡ್ಯ: ಹೆಂಡತಿ, ಮಕ್ಕಳಿಗೆ ವಿಷವುಣಿಸಿ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ಪತಿ - Husband Killed Wife and Children

By ETV Bharat Karnataka Team

Published : Apr 18, 2024, 9:57 PM IST

ಪತಿ ತನ್ನ ಹೆಂಡತಿ, ಮಕ್ಕಳಿಗೆ ವಿಷವುಣಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಹೆಂಡತಿ ಮಕ್ಕಳಿಗೆ ವಿಷವುಣಿಸಿ ಹತ್ಯೆಗೈದ ಪತಿ ತಾನೂ ಆತ್ಮಹತ್ಯೆಗೆ ಯತ್ನ
ಹೆಂಡತಿ ಮಕ್ಕಳಿಗೆ ವಿಷವುಣಿಸಿ ಹತ್ಯೆಗೈದ ಪತಿ ತಾನೂ ಆತ್ಮಹತ್ಯೆಗೆ ಯತ್ನ

ಮಂಡ್ಯ: ಸಾಲದ ಸುಳಿಗೆ ಸಿಲುಕಿದ್ದ ಪತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಾಗಮಂಗಲ ಪಟ್ಟಣದಲ್ಲಿ ಇಂದು ನಡೆದಿದೆ. ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ಮತ್ತು ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಪತಿ ನರಸಿಂಹ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ತೆಂಗಿನಭಾಗ ಗ್ರಾಮದ ನರಸಿಂಹ ಕಟಿಂಗ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದಾನೆ. ಮಂಡ್ಯ ತಾಲೂಕಿನ ಬಸರಾಳು ಸಮೀಪದ ಕಂಬದಹಳ್ಳಿ ಗ್ರಾಮದ ಕೀರ್ತನ ಎಂಬವರನ್ನು ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದರು. ಕ್ರಿಕೆಟ್​ ಬೆಟ್ಟಿಂಗ್​ ಆಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ನರಸಿಂಹ, ಪತ್ನಿಗೆ ಹಣ ತರುವಂತೆ ಪೀಡಿಸುತ್ತಿದ್ದ. ಬಳಿಕ ನ್ಯಾಯ ಪಂಚಾಯಿತಿ ನಡೆಸಿ ಹಣವನ್ನೂ ನೀಡಲಾಗಿತ್ತು. ಆದರೂ ಸಹ ಬದಲಾಗಿರಲಿಲ್ಲ. ಐಪಿಎಲ್ ಪಂದ್ಯಾವಳಿ ಆರಂಭಗೊಂಡ ನಂತರ ಬೆಟ್ಟಿಂಗ್​ನಲ್ಲಿ ಹೆಚ್ಚು ಹಣ ಕಳೆದುಕೊಂಡಿದ್ದ.

ಸುಮಾರು 8 ಲಕ್ಷ ರೂ ಸಾಲದ ಹೊರೆ ಈತನ ಮೇಲಿತ್ತು. ಸಾಲಗಾರರ ಕಿರುಕುಳಕ್ಕೆ ಒಳಗಾಗಿದ್ದ ಈತ ಸಾಲ ತೀರಿಸುವ ಮಾರ್ಗ ಕಾಣದೇ ಪತ್ನಿ ಜೊತೆ ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದ. ಇಂದು ಪತ್ನಿ ಕೀರ್ತನ ಮತ್ತು ಇಬ್ಬರು ಮಕ್ಕಳಿಗೆ ವಿಷವುಣಿಸಿದ್ದಾನೆ. ನಂತರ ಅವರು ಸಾವನ್ನಪ್ಪಿರುವುದನ್ನು ಖಚಿತ ಮಾಡಿಕೊಂಡು ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಧ್ಯಾಹ್ನದ ವೇಳೆ ಮನೆಯವರು ಹೋಗಿ ನೋಡಿದಾಗ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮೃತ ಕೀರ್ತನ ಅವರ ತಂದೆ ಶಿವನಂಜು ಮಾತನಾಡಿ, ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. 8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡು ನ್ಯಾಯ ಪಂಚಾಯತಿ ಎಲ್ಲವೂ ನಡೆದಿದ್ದವು. ಆದರೂ ಕೂಡ ನಾನು ಹಣ ನೀಡಿದ್ದೆ ಎಂದು ಹೇಳಿದರು. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್​ನಲ್ಲಿ ಯುವತಿಯ ಭೀಕರ ಕೊಲೆ; ಯುವಕನ ಬಂಧನ - Corporator Daughter Murder

ABOUT THE AUTHOR

...view details