ಕರ್ನಾಟಕ

karnataka

ವಿಚ್ಛೇದನ ಪ್ರಕರಣಗಳಲ್ಲಿ ಪತಿಯ ಆದಾಯದ ಶೇ.10ರಷ್ಟನ್ನು ಪತ್ನಿಗೆ ಜೀವನಾಂಶ ನೀಡಿದರೆ ಹೆಚ್ಚಾಗುವುದಿಲ್ಲ : ಹೈಕೋರ್ಟ್

By ETV Bharat Karnataka Team

Published : Jan 31, 2024, 5:02 PM IST

ವಿಚ್ಛೇದನ ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್​ ಎತ್ತಿ ಹಿಡಿದಿದೆ.

high-court-order-regarding-maintenance-to-wife-in-divorce-case
ವಿಚ್ಚೇದನ ಪ್ರಕರಣಗಳಲ್ಲಿ ಪತಿಯ ಆದಾಯದ ಶೇ.10ರಷ್ಟು ಪತ್ನಿಗೆ ಜೀವನಾಂಶ ನೀಡಿದರೆ ಹೆಚ್ಚಾಗುವುದಿಲ್ಲ : ಹೈಕೋರ್ಟ್

ಬೆಂಗಳೂರು : ವಿಚ್ಛೇದನ ಪ್ರಕರಣಗಳಲ್ಲಿ ಪತಿಯ ಆದಾಯದಲ್ಲಿ ಶೇಕಡಾ 10ರಷ್ಟನ್ನು ಪತ್ನಿಗೆ ಜೀವನಾಂಶ ನೀಡುವುದು ಹೆಚ್ಚಿನ ಪ್ರಮಾಣ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿಚ್ಛೇದಿತ ಪತ್ನಿಗೆ ಮಾಸಿಕ 60 ಸಾವಿರ ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪತಿಯ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಪತಿಗೆ ಮಾಸಿಕ 7 ಲಕ್ಷ ರೂ.ಗಳಿದ್ದಾಗ ಗೃಹಿಣಿಯಾದ ಪತ್ನಿಗೆ 60 ಸಾವಿರ ರೂ.ಗಳ ಜೀವನಾಂಶ ನೀಡುವುದು ಶೇ.10ರಷ್ಟು ಮಾತ್ರ ಆಗಲಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದು ಅನಗತ್ಯ ಎಂದು ನ್ಯಾಯಪೀಠ ತಿಳಿಸಿದೆ.

ಪತಿ ತನ್ನ ಅಫಿಡವಿಟ್ ಪ್ರಕಾರ, ವಾರ್ಷಿಕ 87 ಲಕ್ಷ ರೂ.ಗಳನ್ನು ಸಂಪಾದಿಸುತ್ತಾರೆ. ಇದು ಸುಮಾರು ತಿಂಗಳಿಗೆ 7 ಲಕ್ಷ ರೂ.ಗಳಷ್ಟಿರುತ್ತದೆ ಮತ್ತು ಹೆಂಡತಿಯು ಗೃಹಿಣಿಯಾಗಿ ಇರುವುದರಿಂದ ಯಾವುದೇ ಸ್ವತಂತ್ರ ಆದಾಯವನ್ನು ಹೊಂದಿಲ್ಲ ಎಂಬ ಅಂಶವನ್ನು ಕುಟುಂಬ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಜೊತೆಗೆ, ಪತ್ನಿಯ ಮಾನಸಿಕ ಸ್ಥಿತಿಗೆ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಬೇಕಾಗಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶ ನ್ಯಾಯಸಮ್ಮತವಾಗಿದೆ ಎಂದು ತಿಳಿಸಿದೆ.

ಅಲ್ಲದೆ, ಹೆಂಡತಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಮತ್ತು ಅವಳ ಖಿನ್ನತೆಗೆ ಚಿಕಿತ್ಸೆ ಅಗತ್ಯವಿದೆ. ಹೆಂಡತಿಗೆ ಅಗತ್ಯವಿರುವ ಜೀವನಾಂಶ ಪಾವತಿಸುವುದು ಗಂಡನ ಕರ್ತವ್ಯವಾಗಿದೆ. ಪ್ರಸ್ತುತ ಪ್ರಕರಣ ಪತಿಯ ಗಳಿಕೆಯು ತಿಂಗಳಿಗೆ 7 ಲಕ್ಷ ರೂ.ಗಳಾಗಿದೆ, ಪತಿಯು ಹೆಂಡತಿಗೆ ಜೀವನಾಂಶ ಪಾವತಿಸಲಾಗದ ಸ್ಥಿತಿಯಲ್ಲಿ ಇಲ್ಲವೆಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:ದಂಪತಿಯು ಏಪ್ರಿಲ್ 2002ರಲ್ಲಿ ವಿವಾಹವಾಗಿದ್ದು, 14 ವರ್ಷಗಳ ನಂತರ, ಅವರ ಸಂಬಂಧವು ಹಳಸಿತು. ಪತ್ನಿ 2016ರಲ್ಲಿ ಖಿನ್ನತೆಗೆ ಒಳಗಾದರು. ಮತ್ತು ಅವರ ಮಾನಸಿಕ ಕಾಯಿಲೆಗೆ ಮನೋವೈದ್ಯರಿಂದ ಚಿಕಿತ್ಸೆ ಪಡೆಯಬೇಕಾಗಿತ್ತು. ಈ ನಡುವೆ 2022ರಲ್ಲಿ, ಅರ್ಜಿದಾರರು (ಪತಿ) ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದರು. ಅಂತೆಯೇ, ಅದೇ ವರ್ಷ, ಪತ್ನಿ ಕುಟುಂಬ ನ್ಯಾಯಾಲಯದಲ್ಲಿ ವಿವಾಹವನ್ನು ಅಸಿಂಧುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದರು. ಅರ್ಜಿಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಿದ್ದ ಪತಿ ತನ್ನ ಆಸ್ತಿ ಮತ್ತು ವಾರ್ಷಿಕ ಆದಾಯ 83 ಲಕ್ಷ ರೂ.ಗಳವರೆಗೂ ಇದೆ ಎಂದು ವಿವರಿಸಿದ್ದರು.

ಜೊತೆಗೆ, ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 24ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಪತ್ನಿ, ತನ್ನ ಪತಿಗೆ ಅಪಾರ ಪ್ರಮಾಣದ ಆಸ್ತಿ ಇದೆ. ತಿಂಗಳಿಗೆ 5 ಲಕ್ಷ ರೂ.ಗಳ ವರೆಗೂ ಆದಾಯವಿದೆ. ಹೀಗಾಗಿ ಮಾಸಿಕ 1.5 ಲಕ್ಷ ರೂ.ಗಳ ಜೀವನಾಂಶ ನೀಡಬೇಕು ಎಂದು ಕೋರಿದ್ದರು. ಪ್ರಕರಣದ ವಾದ, ಪ್ರತಿವಾದ ಆಲಿಸಿದ್ದ ವಿಚಾರಣಾ ನ್ಯಾಯಾಲಯ ಪ್ರತಿ ತಿಂಗಳ 7ರಂದು ಪತ್ನಿಗೆ 60 ಸಾವಿರ ರೂ. ಜೀವನಾಂಶ ಪಾವತಿಸಲು ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೊರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ (ಪತಿ) ಪರ ವಕೀಲರು, ವಿಚಾರಣಾ ನ್ಯಾಯಾಲಯ ನೀಡಿರುವ ಜೀವನಾಂಶ ಹೆಚ್ಚಿನ ಮಟ್ಟದಲ್ಲಿದೆ ಮತ್ತು ತನ್ನ ಹೆಂಡತಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ, ಹಣವನ್ನು ಹೆಂಡತಿ ಅಥವಾ ಹೆಂಡತಿಗೆ ಬಳಸಲಾಗುವುದಿಲ್ಲ. ಆದರೆ ಇತರರು ಆ ಹಣವನ್ನು ಉಪಯೋಗಿಸುತ್ತಾರೆ. ಆದ್ದರಿಂದ ಈ ಮೊತ್ತವನ್ನು 30 ಸಾವಿರ ರೂ.ಗೆ ಇಳಿಸುವಂತೆ ಕೋರಿದ್ದರು.

ಇದನ್ನೂ ಓದಿ:ಡಿಕೆಶಿ ಪ್ರಕರಣದ ತನಿಖೆಗೆ ನೀಡಿದ್ದ ಅನುಮೋದನೆ ಹಿಂಪಡೆದ ಸರ್ಕಾರ: ಸಿಬಿಐ, ಯತ್ನಾಳ್​ ಅರ್ಜಿ ವಿಚಾರಣೆ ಮುಂದೂಡಿಕೆ

ABOUT THE AUTHOR

...view details