ಕರ್ನಾಟಕ

karnataka

ಆಯುಷ್ ಚಿಕಿತ್ಸಾಲಯಗಳಲ್ಲಿ ದಿನಕ್ಕೆ ಎರಡು ಬಾರಿ ಉಚಿತ ಯೋಗ ತರಬೇತಿ ಜಾರಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

By ETV Bharat Karnataka Team

Published : Feb 18, 2024, 8:11 PM IST

ಸೂರ್ಯ ನಮಸ್ಕಾರದ ಅಭ್ಯಾಸದಿಂದ ಶರೀರ ಮತ್ತು ಮನಸ್ಸಿಗೆ ನವ ಚೈತನ್ಯ ಸಿಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.

ಯೋಗ ಮತ್ತು 108 ಸೂರ್ಯ ನಮಸ್ಕಾರ ಕಾರ್ಯಕ್ರಮ
ಯೋಗ ಮತ್ತು 108 ಸೂರ್ಯ ನಮಸ್ಕಾರ ಕಾರ್ಯಕ್ರಮ

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆಯುಷ್ ಚಿಕಿತ್ಸಾಲಯಗಳಲ್ಲಿ ಆಯುಷ್ಮಾನ್ ಮಂದಿರಗಳ ಮೂಲಕ ನುರಿತ ಯೋಗ ತರಬೇತುದಾರರಿಂದ ದಿನಕ್ಕೆ ಎರಡು ಬಾರಿ ಉಚಿತ ಯೋಗ ತರಬೇತಿ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಭಾನುವಾರ ವಿಧಾನಸೌಧದ ಮುಂಭಾಗದಲ್ಲಿ ಆಯುಷ್ ಇಲಾಖೆ ಮತ್ತು ಯೋಗ ಗಂಗೋತ್ರಿ ಟ್ರಸ್ಟ್ ಸಹಯೋಗದೊಂದಿಗೆ ರಥಸಪ್ತಮಿ ಅಂಗವಾಗಿ ಆಯೋಜಿಸಲಾಗಿದ್ದ ಯೋಗ ಮತ್ತು 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೂರ್ಯನಮಸ್ಕಾರ ಮಾಡುವುದರಿಂದ ಉತ್ತಮ ಶಾರೀರಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಸಮೃದ್ಧಿಸಿಕೊಳ್ಳಬಹುದು ಎಂದು ಹೇಳಿದರು.

ದೇಹ, ಮನಸ್ಸು ಚುರುಕುಗೊಳ್ಳುತ್ತದೆ : ಸೂರ್ಯ ನಮಸ್ಕಾರದ ಅಭ್ಯಾಸದಿಂದ ಶರೀರ ಮತ್ತು ಮನಸ್ಸಿಗೆ ನವ ಚೈತನ್ಯ ಸಿಗುತ್ತದೆ. ಸೂರ್ಯ ನಮಸ್ಕಾರ, ಇನ್ನಿತರೆ ಆಸನಗಳು, ಪ್ರಾಣಾಯಾಮ ಹಾಗೂ ಧ್ಯಾನ ಇನ್ನಿತರೆ ಅಭ್ಯಾಸಗಳಿಂದ ದೇಹ, ಮನಸ್ಸು ಚುರುಕುಗೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆಧುನಿಕ ಜಗತ್ತಿನ ಬದಲಾದ ಜೀವನ ಶೈಲಿಯಿಂದ ಉಂಟಾಗುವ ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಸೂರ್ಯ ನಮಸ್ಕಾರದಂತಹ ಯೋಗಾಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ದಿನದ ಪ್ರಮುಖ ಅಗತ್ಯಗಳಲ್ಲಿ ಒಂದು ಎಂದು ಸಲಹೆ ನೀಡಿದರು.

ಯೋಗ ಮತ್ತು 108 ಸೂರ್ಯ ನಮಸ್ಕಾರ ಕಾರ್ಯಕ್ರಮ

ಆರೋಗ್ಯವಂತ ಜೀವನ ನಡೆಸಬೇಕು : ಭಾರತೀಯ ಸಂಸ್ಕೃತಿಯಲ್ಲಿ ಉತ್ತಮ ಆರೋಗ್ಯ, ಸುಖ- ಸಮೃದ್ಧಿಗಾಗಿ ನಿತ್ಯವೂ ಸೂರ್ಯನಿಗೆ ಪೂಜೆ ಸಲ್ಲಿಸಲಾಗುತ್ತದೆ. ಸೂರ್ಯನಿಲ್ಲದೆ ದಿನಗಳನ್ನು ಊಹಿಸಲು ಕೂಡ ಅಸಾಧ್ಯ. ಸೂರ್ಯನ ಕಿರಣಗಳು ಮನುಷ್ಯನ ಆರೋಗ್ಯಕ್ಕೆ ಎಷ್ಟು ಪ್ರಮುಖವಾದದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಜನರ ಉತ್ತಮ ಆರೋಗ್ಯಕ್ಕಾಗಿ ಸರ್ಕಾರವು ಜಾರಿಗೊಳಿಸಿರುವ ಉಚಿತ ಯೋಗ ತರಬೇತಿಯ ಪ್ರಯೋಜನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ಆರೋಗ್ಯವಂತ ಜೀವನ ನಡೆಸಬೇಕು ಎಂದರು.

ಸದೃಢವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು : ವಿಧಾನ ಪರಿಷತ್ ಸದಸ್ಯ ಟಿ. ಎ ಶರವಣ ಈ ಸಂದರ್ಭದಲ್ಲಿ ಮಾತನಾಡಿ, ಮನಸ್ಸು ಮತ್ತು ಆರೋಗ್ಯ ಚೆನ್ನಾಗಿರಬೇಕೆಂದರೆ ಯೋಗ ಅಭ್ಯಾಸ ಅತ್ಯವಶ್ಯಕವಾಗಿದೆ. ನಾನು ಸಹ ಕಳೆದ ವರ್ಷಗಳಿಂದ ಯೋಗಭ್ಯಾಸ ಮಾಡುತ್ತಿರುವುದರಿಂದ ಬಹಳಷ್ಟು ಬದಲಾವಣೆಯನ್ನು ಹೊಂದಿದ್ದೇನೆ. ಸೂರ್ಯ ನಮಸ್ಕಾರ ಮಾಡುವುದು ಸ್ವಲ್ಪ ಕಷ್ಟವಾದರೂ, ಇದರಿಂದ ಸದೃಢವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದ್ದರಿಂದ ಎಲ್ಲರೂ ಯೋಗಭ್ಯಾಸ ಮತ್ತು ಸೂರ್ಯ ನಮಸ್ಕಾರ ಮಾಡುವುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಆಯುಕ್ತ ಶ್ರೀನಿವಾಸಲು, ಯೋಗ ಗಂಗೋತ್ರಿ ಸಂಸ್ಥೆಯ ಪ್ರಮುಖರಾದ ಡಾ. ಆರಾಧ್ಯ ಗುರುರಾಜ, ಆಯುಷ್ ಇಲಾಖೆಯ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಸ್ತನ, ಓರಲ್ ಕ್ಯಾನ್ಸರ್​ನ ಉಚಿತ ತಪಾಸಣೆಗೆ ಆರೋಗ್ಯ ಇಲಾಖೆಯಿಂದ ಸಹಕಾರ: ದಿನೇಶ್ ಗುಂಡೂರಾವ್

ABOUT THE AUTHOR

...view details