ಕರ್ನಾಟಕ

karnataka

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಗೀತಾ ಶಿವರಾಜ್ ​​ಕುಮಾರ್​

By ETV Bharat Karnataka Team

Published : Mar 12, 2024, 7:36 AM IST

Updated : Mar 12, 2024, 10:31 AM IST

ಮುಂಬರಲಿರುವ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಜಿಲ್ಲೆಯಿಂದ ಟಿಕೆಟ್ ಪಡೆದಿರುವ ಗೀತಾ ಶಿವರಾಜ್ ಕುಮಾರ್ ಈ ಬಾರಿ ಗೆಲ್ಲುವ ಭರವಸೆ ನೀಡಿದ್ದಾರೆ.

ಗೀತಾ ಶಿವರಾಜ್ ​​ಕುಮಾರ್​
ಗೀತಾ ಶಿವರಾಜ್ ​​ಕುಮಾರ್​

ಗೀತಾ ಶಿವರಾಜ್ ​​ಕುಮಾರ್​

2024ನೇ ಲೋಕಸಭೆ ಚುನಾವಣೆಯ ಕಾವು ರಾಜ್ಯದಲ್ಲಿ ರಂಗೇರುತ್ತಿದೆ. ಈಗಾಗಲೇ ರಾಷ್ಟ್ರೀಯ ಪಕ್ಷ ಕಾಂಗ್ರೆಸ್​ನಿಂದ ಮೊದಲ ಅಭ್ಯರ್ಥಿಗಳ ಪಟ್ಟಿ​ ಅನೌನ್ಸ್ ಆಗಿದೆ. ಶಿವಮೊಗ್ಗ ಜಿಲ್ಲೆಯಿಂದ ನಟ ಶಿವರಾಜ್​ ಕುಮಾರ್​ ಪತ್ನಿ ಗೀತಾ ಶಿವರಾಜ್​ಕುಮಾರ್​​ ಟಿಕೆಟ್ ಪಡೆಯುವ ಮೂಲಕ ಅಖಾಡಕ್ಕೆ ಇಳಿಯುತ್ತಿದ್ದಾರೆ. ಸದ್ಯ ಪ್ರಚಾರಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಗೀತಾ ಶಿವರಾಜ್​ಕುಮಾರ್​​, ಈ ಬಾರಿ ಗೆದ್ದೇ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್​ ಚಿತ್ರದ ಸುದ್ದಿಗೋಷ್ಠಿಯನ್ನು ಅವರ ನಾಗವಾರದ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿತ್ತು. ಭೈರತಿ ರಣಗಲ್ ಚಿತ್ರದ ನಿರ್ಮಾಪಕಿಯಾಗಿರುವ ಗೀತಾ ಶಿವರಾಜ್ ಕುಮಾರ್ ಸುದ್ದಿಗೋಷ್ಠಿ ಬಳಿಕ ತಮ್ಮ ರಾಜಕೀಯ ಪ್ರಚಾರದ ಸಿದ್ಧತೆಯ ಬಗ್ಗೆ ಮಾತನಾಡಿದರು.

'ಚುನಾವಣೆಗೆ ತಯಾರಿ ಅಂತ ಏನು ಇಲ್ಲ. ಕಳೆದ ಕೆಲ ವರ್ಷಗಳ ಹಿಂದೆ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ. ಕೆಲ ಸಣ್ಣ ಪುಟ್ಟ ತಪ್ಪುಗಳು ಸೋಲಿಗೆ ಕಾರಣವಾಗಿತ್ತು. ಆದರೆ ಈ ಬಾರಿ ಆ ರೀತಿ ಆಗೋದಿಲ್ಲ' ಎಂದು ಗೀತಾ ಶಿವರಾಜ್​ಕುಮಾರ್​​ ವಿಶ್ವಾಸ ವ್ಯಕ್ತಪಡಿಸಿದರು. 'ನನಗೆ ಶಿವಮೊಗ್ಗ ಹೊಸದಲ್ಲ. ಮೊದಲಿನಿಂದಲೂ ನಾನು ಶಿವಮೊಗ್ಗಕ್ಕೆ ಹೋಗುತ್ತಾ ಇದ್ದೇನೆ. ಅಲ್ಲಿ ಯಾರೂ ಹೊಸಬರು ಇಲ್ಲ, ಎಲ್ಲಾ ನಮಗೆ ಗೊತ್ತಿರುವವರೆ. ನಾನು ಈ ಬಾರಿ ಗೆಲ್ಲುವ ಭರವಸೆ ಇದೆ. ಮಧು ಕೂಡ ತುಂಬಾ ಚೆನ್ನಾಗಿ ಕೆಲಸಗಳನ್ನು ಮಾಡುತ್ತಿದ್ದಾನೆ' ಎಂದರು.

ಶಿವಮೊಗ್ಗದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಗೀತಾ ಶಿವರಾಜ್​ ಕುಮಾರ್​,​ 'ಈ ಬಾರಿ ನಾವು ಎರಡು ಮನೆಗಳನ್ನು ಮಧು ಮನೆ ಪಕ್ಕದಲ್ಲೇ ಮಾಡಿದ್ದೇವೆ. ನಾನು ಶಿವಮೊಗ್ಗ ಅಲ್ಲದೆ ಸೊರಬ ಸೇರಿದಂತೆ ಬೇರೆ ಬೇರೆ ಹಳ್ಳಿಗೆ ಹೋಗುತ್ತಾ ಇರುತ್ತೇನೆ. ನನಗೆ 9 ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಜನರ ಜೊತೆ ಒಡನಾಟ ಇದೆ. ಈ ಬಾರಿಯ ಚುನಾವಣೆ ನನಗೆ ಚಾಲೆಂಜ್. ಸೋಲು ಗೆಲುವು ಆಮೇಲೆ. ನಾವು ಈ ಬಾರಿ ಜನರ ಪ್ರೀತಿ ವಿಶ್ವಾಸ ಗಳಿಸಿಕೊಳ್ಳುತ್ತೇನೆ' ಎಂದು ಹೇಳಿದರು.

ಮುಂದುವರೆದು, ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿದವರು ಬಂಗಾರಪ್ಪನವರು. ನೀವು ಅವರ ಮಗಳಾಗಿ ಅವರ ಯಾವ ತತ್ವಗಳನ್ನು ಪಾಲಿಸುತ್ತೀರಾ ಎಂಬ ಪ್ರಶ್ನೆಗೆ ಗೀತಾ ಶಿವರಾಜ್ ಕುಮಾರ್, 'ನನಗೆ ಎರಡು ವರ್ಷ ಇದ್ದಾಗ ನಮ್ಮ ತಂದೆ ಎಂಎಲ್​ಎ ಆಗಿದ್ದರು. ನಮ್ಮ ತಂದೆ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಮುಂದೆ ಬಂದವರು. ನಾನು ಚಿಕ್ಕ ವಯಸ್ಸಿನಿಂದಲೂ ಅವರ ಕೆಲಸಗಳನ್ನು ನೋಡುತ್ತಾ ಬಂದಿದ್ದೇನೆ. ನಮ್ಮ ತಂದೆ ದೊಡ್ಡ ರಾಜಕಾರಣಿ ಆದರೂ ಕೂಡ ತಮ್ಮ ಊರಿಗೆ ಬಂದಾಗ ಕಾರನ್ನು ನಿಲ್ಲಿಸಿ ಜನರನ್ನು ಮಾತನಾಡಿಸುತ್ತಿದ್ದರು. ತಂದೆಯಿಂದ ನಾನು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದನ್ನು, ನಂಬಿ ಬಂದವರಿಗೆ ಅವರ ಸಮಸ್ಯೆಗಳಿಗೆ ಪರಿಹಾರ ಕೊಡುವುದನ್ನು ಕಲಿತಿದ್ದೇನೆ. ಅವರ ನಿಸ್ವಾರ್ಥ ಸಾಮಾಜಿಕ ಸೇವೆಯಿಂದ ನಾನು ಕಲಿತಿದ್ದೇನೆ' ಎನ್ನುತ್ತಾ ಭಾವುಕರಾದರು.

ಇನ್ನು ಗೀತಾ ಶಿವರಾಜ್ ಕುಮಾರ್ ಪ್ರಚಾರ ಕುರಿತು ಮಾತನಾಡಿದ ಶಿವಣ್ಣ, 'ನನ್ನ ಸ್ನೇಹಕ್ಕೆ ಸೆಲೆಬ್ರೆಟಿಗಳು ಬರುತ್ತಾರೆ. ಆದರೆ ಈ ಬಾರಿ ಯಾರು ಯಾರು ಬರಲಿದ್ದಾರೆ ಎಂಬುದನ್ನು ಹೇಳಲು ಆಗುವುದಿಲ್ಲ. ಈ ಬಾರಿ ತುಂಬಾ ಬಿಸಿಲು ಇರುವುದರಿಂದ ಯಾರು ಬರಬಹುದು ಎಂಬುದನ್ನು ನಾವು ತೀರ್ಮಾನ ಮಾಡಿಲ್ಲ. ರಾಜಕೀಯ ಒಂದು ಪ್ರತಿಷ್ಠೆ ಪ್ರಶ್ನೆ. ಸಾಕಷ್ಟು ಏಳು ಬೀಳುಗಳನ್ನು ಎದುರಿಸಿದರೆ ತಾನೇ, ಮುಂದೆ ಗೆಲುವು ಸಿಗುವುದು. ರಾಜಕೀಯದಲ್ಲಿ ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀವಿ ಅನ್ನೋದು ಬಹಳ ಮುಖ್ಯ' ಎಂದು ತಿಳಿಸಿದರು.

ಇದನ್ನೂ ಓದಿ:ಅಖಾಡಕ್ಕೆ ಇಳಿದಿದ್ದೇವೆ ಬರುತ್ತೇವೆ, ಜಯಗಳಿಸುತ್ತೇವೆ: ನಟ ಶಿವರಾಜ್ ಕುಮಾರ್

Last Updated : Mar 12, 2024, 10:31 AM IST

ABOUT THE AUTHOR

...view details