ಕರ್ನಾಟಕ

karnataka

ದಾವಣಗೆರೆ: ಬೇಸಿಗೆ ಮುನ್ನವೇ 126 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ

By ETV Bharat Karnataka Team

Published : Feb 23, 2024, 3:07 PM IST

ದಾವಣಗೆರೆ ಜಿಲ್ಲೆಯ 126 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಸಮಸ್ಯೆ ತೀವ್ರಗೊಂಡಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

avanagere  ದಾವಣಗೆರೆ  ಕುಡಿಯುವ ನೀರಿಗೆ ತತ್ವಾರ  Drinking water problem
ದಾವಣಗೆರೆ ಜಿಲ್ಲೆಯ 126 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ

ದಾವಣಗೆರೆ ಜಿಲ್ಲೆಯ 126 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ

ದಾವಣಗೆರೆ:ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೋರ್​ವೆಲ್​ಗಳನ್ನು ಕೊರೆಸಿದರೂ ಹನಿ ನೀರು ಲಭಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಬಿಸಿಲಿನ ಅಬ್ಬರಕ್ಕೆ ಜಿಲ್ಲೆಯಲ್ಲಿ ಒಟ್ಟು 126 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

19 ಗ್ರಾಮಗಳಿಗೆ ಖಾಸಗಿ ಬೋರ್​ವೆಲ್​ಗಳ ಮೂಲಕ ನೀರನ್ನು ಒದಗಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಜಿಲ್ಲಾಡಳಿತವು ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ. ಇನ್ನು ಪರಿಸ್ಥಿತಿ ಕೈಮೀರಿ ಹೋದರೆ ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಶೇ.90 ರಷ್ಟು ಮಳೆ ಅಭಾವ ಆಗಿದೆ. ಅಂತರ್ಜಲ ಮಟ್ಟ ಪಾತಾಳ ಕುಸಿದಿದ್ದು, ಇದರ ಪರಿಣಾಮ ಕುಡಿಯುವ ನೀರಿನ ಮೇಲೆ ಬೀರಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಎದುರಾಗಿದೆ. ಕುಡಿಯು ನೀರಿಗಾಗಿ ಜನರು ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು, ಕೊಡ ಹಿಡಿದು ಕಿಮೀಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್​ ಆಗಿ ಸುಮಾರು ದಿನಗಳೇ ಉರುಳಿವೆ.

ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಪ್ರತಿಕ್ರಿಯೆ:ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, 125 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದೆ. 125 ಗ್ರಾಮಗಳ ಪೈಕಿ 19 ಗ್ರಾಮಗಳಲ್ಲಿ ಖಾಸಗಿ ಬೋರ್​ವೆಲ್ ಮೂಲಕ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸೂಳೆಕೆರೆ ಹಾಗೂ ತುಂಗಭದ್ರಾ, ಭದ್ರಾ ಡ್ಯಾಂನಿಂದ ಕಾಲುವೆ ಮೂಲಕ ನೀರು ಹರಿಸಲಾಗಿದೆ. ದಾವಣಗೆರೆ, ಜಗಳೂರು, ಮಾಯಕೊಂಡ ಭಾಗದಲ್ಲಿ ಹೆಚ್ಚು ನೀರಿನ ಸಮಸ್ಯೆ ಇದೆ. ಇತ್ತ ಹೊನ್ನಳ್ಳಿ, ನ್ಯಾಮತಿ ಸೇರಿದ್ದಂತೆ ಹರಿಹರ ಚನ್ನಗಿರಿಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳ್ಲಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಕರೆಯಲಾಗುವುದು. ಜೊತೆಗೆ ನೀರಿನ ಸಮಸ್ಯೆ ಬಗೆಹರಿಸಲು ತಹಶೀಲ್ದಾರ್ ಹಾಗೂ ಪಿಡಓಗಳಿಗೆ ಸೂಚನೆ ನೀಡಲಾಗಿದೆ.

ಅಳಲು ತೋಡಿಕೊಂಡ ಗ್ರಾಮಸ್ಥ:ಈಟಿವಿ ಭಾರತ ಜೊತೆಗೆ ಗಾಂಧಿ ನಗರ ಗ್ರಾಮದ ಗ್ರಾಮಸ್ಥ ಹನುಮಂತಪ್ಪ ಪ್ರತಿಕ್ರಿಯಿಸಿ, ''ದಾವಣಗೆರೆ ತಾಲೂಕಿನ ಹುಲಿಕಟ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗಾಂಧಿ ನಗರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಇದೆ. ಬೇರೆ ಪಕ್ಕದ ಊರುಗಳಿಗೆ ಹೋಗಿ ನೀರು ಬೇಕಾದ ಪರಿಸ್ಥಿತಿ ಇದೆ. ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಶುದ್ಧೀಕರಿಸಿದ ನೀರು ಸಿಗುತ್ತಿಲ್ಲ. ದೂರದ ಅಣಜಿ ಕೆರೆಗೆ ನೀರು ತಂದು ಸೋಸಿ ಕುಡಿಯಬೇಕಾಗಿದೆ. 700 ರಿಂದ 800 ಅಡಿ ಬೋರ್​ವೆಲ್ ಕೊರೆಸಿದರೂ ಕೂಡ ನೀರು ಮಾತ್ರ ಸಿಗುತ್ತಿಲ್ಲ. ಇನ್ನು ನಮ್ಮ ಗ್ರಾಮದಲ್ಲಿರುವ ಎಲ್ಲ ಕೊಳವೆಬಾವಿಗಳು ಬತ್ತಿ ಹೋಗಿವೆ. ಈ ಭಾಗದ ಶಾಸಕರಾದ ಬಸವಂತಪ್ಪನವರು ನೀರಿನ ಸಮಸ್ಯೆ ಬಗ್ಗೆ ಯಾವುದೇ ರೀತಿ ಗಮನಹರಿಸಿಲ್ಲ. ಜಮ್ಮನಹಳ್ಳಿ, ಅಣಜಿ, ಹುಲಿಕಟ್ಟೆ, ಗಾಂಧಿನಗರ ಗ್ರಾಮಗಳಲ್ಲಿ ನೀರಿನ ತೊಂದರೆ ಬಹಳ ಇದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ'' ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ:ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ದ, ಫೆ.29ರೊಳಗೆ ಸರ್ಕಾರದ ಕೈ ಸೇರಲಿದೆ ವರದಿ: ಸಚಿವ ತಂಗಡಗಿ

ABOUT THE AUTHOR

...view details