ಕರ್ನಾಟಕ

karnataka

ಶೆಟ್ಟರ್ ಮತ್ತೆ ಬಿಜೆಪಿಗೆ ಸೇರಿ ನಮ್ಮ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ: ಡಿಸಿಎಂ ಡಿಕೆಶಿ ಬೇಸರ

By ETV Bharat Karnataka Team

Published : Jan 25, 2024, 3:01 PM IST

Updated : Jan 25, 2024, 7:29 PM IST

ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಅವರಿಗೆ ನಾವು ವಿಧಾನ ಪರಿಷತ್​ನಲ್ಲಿ ಸ್ಥಾನ ನೀಡಿದ್ದೆವು. ಆದರೆ, ಈಗ ಮತ್ತೆ ಬಿಜೆಪಿಗೆ ತೆರಳಿ ನಮ್ಮ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ಬೇಸರ ವ್ಯಕ್ತಪಡಿಸಿದ್ದಾರೆ.

DCM D K Shivakumar
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​

ಡಿಸಿಎಂ ಡಿ ಕೆ ಶಿವಕುಮಾರ್​ ಪ್ರತಿಕ್ರಿಯೆ

ಬೆಂಗಳೂರು: ನಾವು ಕಾಂಗ್ರೆಸ್​ ಪಕ್ಷ ಜಗದೀಶ್​ ಶೆಟ್ಟರ್​ ಅವರು ಒಬ್ಬ ಹಿರಿಯ ನಾಯಕರೆಂದು ಗೌರವ, ವಿಶ್ವಾಸ ತೋರಿಸಿದ್ದೆವು. ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಅವರಿಗೆ ವಿಧಾನ ಪರಿಷತ್​ನಲ್ಲಿ ಸ್ಥಾನ ನೀಡಿದ್ದೆವು. ಆದರೆ ಈಗ ನಾವು ಅವರ ಮೇಲೆ ಇಟ್ಟ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,"ಜಗದೀಶ್​ ಶೆಟ್ಟರ್ ನನ್ನ ಬಳಿ, ಮತ್ತೆ ಬಿಜೆಪಿಗೆ ಬರುವಂತೆ ಮನವಿ ಮಾಡುತ್ತಿದ್ದಾರೆ. ಲೋಕಸಭೆ ಹಾಗೂ ವಿಧಾನಸಭೆಯಿಂದ ​ನನ್ನ ಬಳಿ ಮಾತನಾಡಲು ಜನರನ್ನು ಕಳುಹಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಆ ಬಗ್ಗೆ ನಿನ್ನೆ ಬೆಳಗ್ಗೆ ಕೂಡ ನಾನು ಜಗದೀಶ್​ ಶೆಟ್ಟರ್​ ಅವರ ಬಳಿ ಮಾತನಾಡಿದ್ದೆ. ಆಗ ಅವರು ನಾನು ಅಂತಹ ಕೆಲಸ ಮಾಡುವುದಿಲ್ಲ. ನಾನು ಮರಳಿ ಬಿಜೆಪಿಗೆ ಹೋಗುವುದಿಲ್ಲ. ರಾಜಕಾರಣಕ್ಕೆ ಹಾಗೂ ನನಗೆ ಕಾಂಗ್ರೆಸ್​ ಪಕ್ಷ ಮರುಜೀವ ಕೊಟ್ಟಿದೆ. ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. ಅದನ್ನೇ ನಾನು ಗಮನದಲ್ಲಿಟ್ಟುಕೊಂಡು, ಮೈಸೂರಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಆದರೆ ಈಗ ಜಗದೀಶ್​ ಶೆಟ್ಟರ್​ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ" ಎಂದು ಹೇಳಿದರು.

ಜಗದೀಶ್​ ಶೆಟ್ಟರ್​ ಅವರೇ ಹೇಳಿದ್ದಾರೆ ಆ ಪಕ್ಷ ಒಳ್ಳೇದಲ್ಲ. ಹಾಗೂ ರಾಮ ಮಂದಿರ ಹಾಗೂ ಬೇರೆ ಬೇರೆ ವಿಚಾರಗಳನ್ನು ಬಿಜೆಪಿ ಯಾವ ರೀತಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದರ ಹಲವಾರು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಆದರೆ ಈಗ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವ ಪತ್ರವನ್ನು ಇ-ಮೇಲ್​ ಮೂಲಕ ಕಳುಹಿಸುವುದಾಗಿ ಸ್ಪೀಕರ್​ಗೆ ಹೇಳಿದ್ದಾರೆ ಎನ್ನುವ ಮಾಹಿತಿ ನಮ್ಮ ಕಚೇರಿಯಿಂದ ಸಿಕ್ಕಿದೆ. ಅವರು ಯಾವುದಾದರು ಒತ್ತಡದಿಂದ ಈ ನಿರ್ಧಾರ ತೆಗೆದುಕೊಂಡರೋ? ಅವರನ್ನು ಬಲವಂತವಾಗಿ ಕರೆದುಕೊಂಡು ಹೋದರೋ? ಈ ಬಗ್ಗೆ ಅವರು ಮೊದಲು ಹೇಳಿಕೆ ಕೊಡಲಿ. ಅದಾದ ಮೇಲೆ ನಾವು ಮಾತನಾಡುತ್ತೇವೆ" ಎಂದರು.

ದೇಶದ ಹಿತಕ್ಕಾಗಿ ಮತ್ತೆ ಬಿಜೆಪಿಗೆ ಬಂದಿದ್ದೇನೆ ಎನ್ನುವ ಶೆಟ್ಟರ್​ ಹೇಳಿಕೆ ಬಗ್ಗೆ ಮಾತನಾಡಿ, "ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸೀಟ್​ ತಪ್ಪಿಸುವಾಗ ದೇಶದ ಹಿತ ಗೊತ್ತಿರಲಿಲ್ವಾ? ಕಾಂಗ್ರೆಸ್​ ಐದು ವರ್ಷಗಳ ಅವಧಿಯ ಎಂಎಲ್​ಸಿ ಸ್ಥಾನವನ್ನು ಗೌರವದಿಂದ ನೀಡುವಾಗ ದೇಶದ ಹಿತ ಗೊತ್ತಿರಲಿಲ್ವಾ? ಅವರು ಮಾತನಾಡಲಿ ಮೊದಲು, ನಂತರ ನಾನು ಪ್ರತಿಕ್ರಿಯಿಸುತ್ತೇನೆ. ಕಾಂಗ್ರೆಸ್​ ಅಧ್ಯಕ್ಷನಾಗಿ ಈವರೆಗೆ ನನಗೆ ರಾಜೀನಾಮೆ ಪತ್ರ ತಲುಪಿಲ್ಲ." ಎಂದು ಹೇಳಿದರು.

"ಅವರು ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ. ಅವರು ವಿಧಾನಸಭೆ ಚುನಾವಣೆಯಲ್ಲಿ 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಆಗಲೂ ನಾವು ಗೌರವದಿಂದ ಅವರನ್ನು ಎಂಎಲ್​ಸಿ ಆಗಿ ಮಾಡಿದ್ದೇವೆ. ಇವಾಗ ಯಾವ ಕಾರಣಕ್ಕೆ ಹೋಗಿದ್ದಾರೆ?" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲಕ್ಷ್ಮಣ ಸವದಿ ಕಾಂಗ್ರೆಸ್ ತೊರೆಯುವ ಕುರಿತು ಪ್ರತಿಕ್ರಿಯಿಸಿ, "ಶೆಟ್ಟರ್ ವಿಚಾರ ಬೇರೆ, ಇನ್ನು ಬೇರೆಯವರ ವಿಚಾರ ಬೇರೆ. ಯಾರು ಕಾಂಗ್ರೆಸ್ ಬಿಡಲ್ಲ, ಯಾರೂ ಬಿಜೆಪಿಗೆ ಹೋಗಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸಂತೋಷ್​ ಲಾಡ್​ ಪ್ರಿಕ್ರಿಯೆ

ಶೆಟ್ಟರ್ ಮರಳಿ ಬಿಜೆಪಿ ಸೇರಿದ್ದು ಬಹಳ ಖುಷಿಯಾಗಿದೆ ಎಂದ ಸಚಿವ ಸಂತೋಷ್​ ಲಾಡ್: ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರಿದ್ದು ಬಹಳ ಖುಷಿಯಾಗಿದೆ ಎಂದು ಧಾರವಾಡದಲ್ಲಿ ಸಚಿವ ಸಂತೋಷ್​ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಅವರು ಯಾತಕ್ಕಾಗಿ ಬಂದು ಯಾತಕ್ಕಾಗಿ ಹೋದರು ಎಂಬುದರ ಬಗ್ಗೆ ಅವರನ್ನೇ ಕೇಳಬೇಕು. ಆದರೆ ಅವರು ಬಿಜೆಪಿಗೆ ಹೋಗಿದ್ದು ನನಗೆ ವೈಯಕ್ತಿಕವಾಗಿ ಖುಷಿಯಾಗಿದೆ. ಬರುವಾಗ ಒಂದು ಹೇಳಿದ್ದರು. ಈಗ ಹೋಗುವಾಗ ಒಂದು ಹೇಳಿದ್ದಾರೆ. ಇದೆಲ್ಲಾ ರಾಜಕಾರಣದಲ್ಲಿ ಸಾಮಾನ್ಯವಾಗಿದೆ" ಎಂದರು.

"ಜಗದೀಶ ಶೆಟ್ಟರ್ ಬಿಜೆಪಿ ಬಿಟ್ಟು ಬಂದಾಗ ಅವರು ಮಾತನಾಡಿದ್ದನ್ನು ನೀವೇ ಕೇಳಿದ್ದೀರಿ. ಕಾಂಗ್ರೆಸ್ ಅವರಿಗೆ ಗೌರವ ಕೊಟ್ಟು ಎಂಎಲ್ಸಿ ಮಾಡಿತ್ತು. ಎಲ್ಲಾ ಸಭೆಯಲ್ಲಿ ಗೌರವ ಕೊಟ್ಟಿದ್ದೇವೆ, ಈಗ ದಿಢೀರ್ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಅವರು ಬಿಜೆಪಿ ಸೇರುತ್ತಾರೆ ಎಂಬ ಸುಳಿವು ಸಿಕ್ಕಿತ್ತು. ಅವರೊಬ್ಬ ಮಾಜಿ ಸಿಎಂ, ಅವರಿಗೆ ಒಂದು ಸಿಸ್ಟಮ್ ಇರಬೇಕು.‌ ಅವರು ಹೋಗಿದ್ದಕ್ಕೆ ನಮಗೇನು ನಷ್ಟ ಇಲ್ಲ. ನಮ್ಮದು ಎರಡು ಬಾಗಿಲು ಇರುವ ಪಾರ್ಟಿ, ಸಿಟಿ ಬಸ್ ಇದ್ದಂತೆ ಯಾರಾದರೂ ಹತ್ತಬಹುದು, ಯಾರಾದರು ಇಳಿದುಕೊಳ್ಳಬಹುದು. ನಮ್ಮ ಪಾರ್ಟಿಗೆ ಶಾಸಕರು ಸೇರ್ಪಡೆಯಾಗುವವರಿದ್ದಾರೆ. ಮುಂದೆ ನಮ್ಮ ಪಾರ್ಟಿಗೆ ಸೇರುತ್ತಾರೆ. ಸಮಯ ಬಂದಾಗ ಹೇಳುತ್ತೇವೆ" ಎಂದರು.

ಇದನ್ನೂ ಓದಿ:ನವದೆಹಲಿ: ಬಿಜೆಪಿಗೆ ಮರಳಿದ ಬಳಿಕ ಶೆಟ್ಟರ್ ಹೇಳಿದ್ದೇನು?

Last Updated :Jan 25, 2024, 7:29 PM IST

ABOUT THE AUTHOR

...view details