ಕರ್ನಾಟಕ

karnataka

ಗ್ಯಾರಂಟಿ ಪದಕ್ಕೆ ಅಪ್ಪ-ಅಮ್ಮ ನಾವೇ ಎಂಬಂತೆ ಕಾಂಗ್ರೆಸ್​​ನವರ ವರ್ತನೆ: ಸಿ.ಟಿ.ರವಿ - C T Ravi

By ETV Bharat Karnataka Team

Published : Apr 29, 2024, 5:36 PM IST

ನಮ್ಮದು ಮೋದಿ ಗ್ಯಾರಂಟಿ. ಬಡವರ ಬದುಕು ಹಸನುಗೊಳಿಸುವ ಗ್ಯಾರಂಟಿ ಎಂದು ಸಿ.ಟಿ.ರವಿ ತಿಳಿಸಿದರು. ಇದೇ ವೇಳೆ ಅವರು ಕಾಂಗ್ರೆಸ್‌ ಗ್ಯಾರಂಟಿಗಳನ್ನು ಟೀಕಿಸಿದರು.

Former minister CT Ravi spoke at the press conference.
ಮಾಜಿ ಸಚಿವ ಸಿ ಟಿ ರವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹುಬ್ಬಳ್ಳಿ:ಬಿಜೆಪಿ ಎಂದಿಗೂ ಓಲೈಕೆ, ತಾರತಮ್ಯ ರಾಜಕಾರಣ ಮಾಡಿಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸಕ್ಕಾಗಿ ಕೆಲಸ ಮಾಡಿದ್ದೇವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ನೀತಿ, ನೇತೃತ್ವ, ನಿಯತ್ತು ಎಂಬ ಮೂರು ಅಂಶಗಳನ್ನು ಇಟ್ಟುಕೊಂಡು ಮತದಾರರಲ್ಲಿ ಮತ ಕೇಳುತ್ತಿದೆ. ನಮಗೆ ದೇಶ ಮೊದಲು. ದೇಶದ ಹಿತಾಸಕ್ತಿಯಲ್ಲಿ ಯಾವತ್ತೂ ರಾಜಿಯಿಲ್ಲ. ನಮ್ಮ ಯೋಜನೆಗಳು ಜಾತಿಗಳನ್ನು ಕೇಳುವುದಿಲ್ಲ. ಬಡವರು, ರೈತರು, ಮಹಿಳೆಯರು ಮತ್ತು ಯುವಕರೆಂಬ ಈ ನಾಲ್ಕು ಜಾತಿ ಆಧರಿಸಿ ನಾವು ರಾಜಕಾರಣ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್​​ನವರು ಗ್ಯಾರಂಟಿ ಪದವನ್ನು ತಾವು ಪೇಮೆಂಟ್ ಮಾಡಿಕೊಂಡವರಂತೆ ವರ್ತಿಸುತ್ತಿದ್ದಾರೆ. ಗ್ಯಾರಂಟಿ ಪದಕ್ಕೆ ಅಪ್ಪ-ಅಮ್ಮ ಅವರೇ ಎಂಬಂತೆ ಹೇಳಿಕೊಳ್ಳುತ್ತಿದ್ದಾರೆ. ಆದರೆ ನಮ್ಮದು ಮೋದಿ ಗ್ಯಾರಂಟಿ. ಬಡವರ ಬದುಕು ಹಸನುಗೊಳಿಸುವ ಗ್ಯಾರಂಟಿ. ಸ್ವಾವಲಂಬಿ, ಸ್ವಾಭಿಮಾನಪೂರಕ ಯೋಜನೆಗಳನ್ನು ಕೊಡುವ ಗ್ಯಾರಂಟಿ. ನಮ್ಮ ಗ್ಯಾರಂಟಿಗಳ ಗುರಿ ಸದೃಢ, ಸಮರ್ಥ, ವಿಶ್ವಗುರು ಭಾರತ. ಆದರೆ ಕಾಂಗ್ರೆಸ್ ಗ್ಯಾರಂಟಿಗಳು ಕೇವಲ ಮತ ಬ್ಯಾಂಕ್ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದೆ. ಮಹಾವಂಚನೆಯ ರಾಜಕೀಯ ಕುತಂತ್ರದಿಂದ ಕೂಡಿದ ಗ್ಯಾರಂಟಿಗಳಾಗಿವೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 9 ತಿಂಗಳಾಗಿದ್ದು, ಈವರೆಗೂ ಬದುಕು ಬದಲಾಯಿಸುವ ಯಾವೊಂದು ಯೋಜನೆಯನ್ನೂ ರೂಪಿಸಿಲ್ಲ. ಆದರೆ ಕೇಂದ್ರದಿಂದ ನಮಗೆ ಪ್ರತಿಯೊಂದು ವಿಷಯದಲ್ಲೂ ಮೋಸವಾಗಿದೆ ಎಂದು ಅಪನಂಬಿಕೆ ಹುಟ್ಟು ಹಾಕುವ ತಂತ್ರ ಮಾಡುತ್ತಿದ್ದಾರೆ. ಪೊಳ್ಳು ಮಾತು, ಸುಳ್ಳಿನ ಸಮರ್ಥನೆಗೆ ಕಾಂಗ್ರೆಸ್ ಸೀಮಿತವಾಗಿದೆ ಎಂದು ಹರಿಹಾಯ್ದರು.

ನೇಹಾ ಪ್ರಕರಣದಲ್ಲಿ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನಡೆದುಕೊಂಡಿದ್ದು ಖಂಡನಾರ್ಹ. ಕಾಂಗ್ರೆಸ್​ನವರಿಗೆ ಬದ್ಧತೆ ಇದ್ದರೆ ಇಂತಹ ಕೃತ್ಯ ನಡೆಸುವವರಿಗೆ ಯೋಗಿ ಮಾದರಿ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ. ಕಾಂಗ್ರೆಸ್‌ನವರಂತೆ ನಾವು ಯಾರನ್ನೂ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆ ತಿಳಿಯಲು ಎಸ್ಐಟಿ ರಚನೆ ಮಾಡಲಾಗಿದೆ. ಈ ಪ್ರಕರಣ ಚುನಾವಣೆಯ ಮೇಲೆ ಕೆಲವು ನಕಾರಾತ್ಮಕ ಪರಿಣಾಮ ಬೀರಬಹುದು. ಆದರೆ ಮೈತ್ರಿ ಅಭ್ಯರ್ಥಿಗಳ ಮತಗಳಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಇದನ್ನೂಓದಿ:ಸಿದ್ದರಾಮಯ್ಯನವರು ಜೀವನದಲ್ಲಿ ಯಾವತ್ತೂ ನಿಜ ಹೇಳಿಲ್ಲ: ವಿ. ಸೋಮಣ್ಣ - Lok Sabha Election 2024

ABOUT THE AUTHOR

...view details