ದಾವಣಗೆರೆ:ಎರಡನೇ ಹಂತದ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತದಾನಕ್ಕೆ ಕೇವಲ ಒಂದು ವಾರ ಮಾತ್ರವೇ ಬಾಕಿ ಇದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಮಾಡ್ತಿದ್ದಾರೆ. ಚನ್ನಗಿರಿ, ಹರಿಹರ, ಮಾಯಕೊಂಡ, ಹೊನ್ನಾಳಿ, ಜಗಳೂರು, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಪೂರ್ಣಗೊಳಿಸಿದ್ದಾರೆ. ಇಂದು ಮಾಯಕೊಂಡ ಲೋಕಸಭಾ ಕ್ಷೇತ್ರದ ಕೊಡಗನೂರಿನಿಂದ ಮತ್ತೆ ಮತಬೇಟೆ ಮಾಡಿದ್ರು, ಶಾಸಕ ಕೆಎಸ್ ಬಸವಂತಪ್ಪ ನೇತೃತ್ವದಲ್ಲಿ ಗ್ಯಾರಂಟಿಗಳ ಬಗ್ಗೆ ಮತದಾರರಿಗೆ ತಿಳಿ ಹೇಳ್ತಾ ವೋಟ್ ಕೇಳಿದರು.
ಈ ವೇಳೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಗ್ಯಾರಂಟಿಗಳಿಂದ ಎಲ್ಲ ರೀತಿಯ ವರ್ಕೌಟ್ ಆಗುತ್ತದೆ. ಹಾಲಿ ಸಂಸದರ ಅಭಿವೃದ್ಧಿ ಕೆಲಸದ ಬಗ್ಗೆ ಅಸಮಾಧಾನ ಇದೆ. ನಾವು ಕಾರ್ಯಕರ್ತರು, ಮುಖಂಡರು ಕೆಲಸ ಮಾಡ್ತಿದ್ದು, ಜನ ಸ್ಪಂದಿಸುತ್ತಿದ್ದಾರೆ. ಯುವಕರು, ರೈತರು, ಮಹಿಳೆಯರ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಅನ್ನಭಾಗ್ಯ ಕೊಟ್ಟಿದ್ದೇವೆ. ನಮಗೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದರೆ ಗೋದಾಮಿನಲ್ಲಿ ಅಕ್ಕಿ ಕೊಳೆತರೂ ಕೂಡ ರಾಜ್ಯಕ್ಕೆ ಕೊಡಲಿಲ್ಲ. ಹಸಿವು ಮುಕ್ತ ಕರ್ನಾಟಕ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆ ತಂದಿದ್ದಾರೆ. ಜನರ ಕಷ್ಟಕ್ಕೆ ನೆರವಾಗುವಂತಹ ಸಂಸದರು ಬೇಕಾಗಿದ್ದಾರೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡ್ತಿದ್ದೇನೆ ಎಂದರು.