ಬೆಂಗಳೂರು: ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ಇಸ್ಕಾನ್ ಬುಧವಾರ ಬ್ರಹ್ಮರಥೋತ್ಸವ ಆಚರಿಸಿತು. ಇಂದು ಹರೇ ಕೃಷ್ಣಗಿರಿಯ ಮೇಲೆ ವಿಗ್ರಹಗಳ ಪ್ರತಿಷ್ಠಾಪನೆಯ ದಿನವೂ ಕೂಡ ಆಗಿದ್ದು, ರಾಧಾ ಕೃಷ್ಣಚಂದ್ರ, ಕೃಷ್ಣ ಬಲರಾಮ ಮತ್ತು ನಿತಾಯ್ ಗೌರಂಗ ವಿಗ್ರಹಗಳನ್ನು ಬ್ರಹ್ಮರಥದಲ್ಲಿ ದೇವಾಲಯದ ಸುತ್ತಲೂ ಮೆರವಣಿಗೆ ಮಾಡಲಾಯಿತು.
ಬ್ರಹ್ಮೋತ್ಸವ ಇಸ್ಕಾನ್ ಬೆಂಗಳೂರಿನ ಪ್ರಮುಖ ಉತ್ಸವ. ಈ ದಿನವೇ ಹರೇ ಕೃಷ್ಣಗಿರಿಯ ಮೇಲೆ ದೇವಾಲಯದ ಎಲ್ಲಾ ವಿಗ್ರಹಗಳನ್ನು 1997ರಲ್ಲಿ ಚೈತ್ರ ಮಾಸದ ಪೂರ್ವಾಷಾಢ ನಕ್ಷತ್ರದ ಅಷ್ಟಮಿ ದಿನ ಪ್ರತಿಷ್ಠಾಪಿಸಲಾಗಿತ್ತು. ದೇವಾಲಯದ ರಜತ ಮಹೋತ್ಸವದ ನೆನಪಿಗಾಗಿ ಈ ವರ್ಷ ಬ್ರಹ್ಮೋತ್ಸವವನ್ನು ಬಹಳ ವೈಭವದಿಂದ ಆಚರಿಸಲಾಗಿದೆ.
13 ದಿನಗಳ ಕಾರ್ಯಕ್ರಮದಲ್ಲಿ ಭಾರತದಾದ್ಯಂತ ಆಧ್ಯಾತ್ಮಿಕ ನಾಯಕರು, ಅತಿಥಿಗಳು ಮತ್ತು ಲಕ್ಷಾಂತರ ಭಕ್ತರು ಭಾಗವಹಿಸಿದ್ದಾರೆ. ಏ.21ರಂದು ಧ್ವಜಾರೋಹಣ ಅಥವಾ ಗರುಡ ಪಟ ಆರೋಹಣದೊಂದಿಗೆ ರಥೋತ್ಸವ ಪ್ರಾರಂಭವಾಗಿತ್ತು. ಪ್ರತಿದಿನ ಸಂಜೆ ರಾಧಾ ಕೃಷ್ಣಚಂದ್ರರರ ಉತ್ಸವ ಮೂರ್ತಿಗಳನ್ನು ವಿಶೇಷ ಅಲಂಕಾರದಲ್ಲಿ ಅಲಂಕರಿಸಿ ವಿವಿಧ ವಾಹನಗಳಲ್ಲಿ ದೇವಾಲಯದ ಸುತ್ತಲೂ ಮೆರವಣಿಗೆ ಮಾಡಲಾಗಿತ್ತು. ಭಗವಂತನ ಪ್ರಸನ್ನತೆಗಾಗಿ ಪ್ರಸಿದ್ಧ ಕಲಾವಿದರಿಂದ ನೃತ್ಯ ಸೇವೆ ಮತ್ತು ಸಂಗೀತ ಸೇವೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರ ನಂತರ, ವಿಗ್ರಹಗಳಿಗೆ ಡೋಲೋತ್ಸವ ಸೇವೆಯ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ದೇವರನ್ನು ಭಜನೆಗಳೊಂದಿಗೆ ಉಯ್ಯಾಲೆಯಲ್ಲಿ ತೂಗಲಾಯಿತು.