ಕರ್ನಾಟಕ

karnataka

ನೇಹಾ ವಿಚಾರವಾಗಿ ಬಿಜೆಪಿಯಿಂದ ರಾಜಕೀಯ: ಗೃಹ ಸಚಿವ ಪರಮೇಶ್ವರ್ - G Parameshwar

By ETV Bharat Karnataka Team

Published : Apr 22, 2024, 6:48 PM IST

ಬಿಜೆಪಿಯವರು ನೇಹಾ ವಿಚಾರವನ್ನು ರಾಜಕೀಯಕ್ಕೆ ತಿರುಗಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಆರೋಪಿಸಿದರು.

BJP HAS TURNED  NEHA MURDER CASE  TUMKUR
ಗೃಹ ಸಚಿವ ಪರಮೇಶ್ವರ್

ಗೃಹ ಸಚಿವ ಪರಮೇಶ್ವರ್ ಹೇಳಿಕೆ

ತುಮಕೂರು: ಬಿಜೆಪಿಯವರು ನೇಹಾ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ನನ್ನ ಮಾತಿನಿಂದ ಹೆಣ್ಣು ಮಗುವಿನ ತಂದೆಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನನ್ನ ಮತ್ತು ಮುಖ್ಯಮಂತ್ರಿ ಹೇಳಿಕೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ಅವರಿಗೆ ಬಹಳ ನಿರಾಸೆಯಾಗಿದೆ. ಹಾಗಾಗಿ ಈ ಘಟನೆಯನ್ನು ರಾಜಕೀಯಕ್ಕೆ ತರುತ್ತಿದ್ದಾರೆ. ಸರ್ಕಾರ ಪ್ರಕರಣವನ್ನು ಸಿಒಡಿಗೆ ಕೊಡೋಕೆ ತೀರ್ಮಾನಿಸಿದೆ. ಮುಖ್ಯಮಂತ್ರಿ ಹಾಗೂ ನಾನು ತೀರ್ಮಾನಿಸಿ ಆದೇಶಿಸಿದ್ದೇವೆ. ಸಿಒಡಿ ಟೀಂ ಇವತ್ತು ಹುಬ್ಬಳ್ಳಿಗೆ ಹೋಗಿ ಪ್ರಕರಣವನ್ನು ಟೇಕ್ ಓವರ್ ಮಾಡ್ತಾರೆ ಎಂದರು.

ಈ ಕೊಲೆ ಹಿಂದೆ ಇನ್ನೂ ನಾಲ್ಕು ಜನ ಇದ್ದಾರೆ ಎಂದು ನೇಹಾ ತಂದೆ ಆರೋಪಿಸಿದ್ದಾರೆ. ಏನೇ ಇದ್ರೂ ಸಿಒಡಿಯವರು ಹತ್ತು ದಿನದೊಳಗೆ ವರದಿ ಕೊಡುವಂತೆ ಸೂಚಿಸಿದ್ದೇನೆ. ಆದೇಶ ಈಗಾಗಲೇ ಹೊರಡಿಸಲಾಗಿದೆ. ನೇಹಾ ಪೋಷಕರಿಗೆ ನ್ಯಾಯ ಸಿಗುತ್ತೆ. ಸತ್ಯ ಹೊರಬರುತ್ತೆ ಎಂದು ಹೇಳಿದರು.

ನಾಳೆ ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ನಮ್ಮೂರಿಗೆ ಬರೋರಿದ್ದಾರೆ. ಚಿತ್ರದುರ್ಗಕ್ಕೆ ಪ್ರಿಯಾಂಕಾ ವಾದ್ರಾ ಬರ್ತಾರೆ. ಯಲ್ಲಾಪುರದಲ್ಲಿ ಸಭೆ ಆಯೋಜನೆ ಮಾಡಿದ್ದೇವೆ. 40ರಿಂದ 50 ಸಾವಿರ ಜನ ಬರುವ ನಿರೀಕ್ಷೆ ಇದೆ. ತುಮಕೂರು, ಗ್ರಾಮಾಂತರ ಮಧುಗಿರಿ, ಕುಣಿಗಲ್ ಜನರು ಬರಲಿದ್ದಾರೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಮತದಾನ ನಡೆದಿರುವ ಕ್ಷೇತ್ರಗಳ ಬಗ್ಗೆ ಪ್ರತಿಕ್ರಿಯಿಸಿ, 110 ಕ್ಷೇತ್ರಗಳಲ್ಲಿ ಮತದಾನ ಆಗಿದೆ. ಕೆಲವು ಮಾಧ್ಯಮದವರು ವಿಶ್ಲೇಷಣೆ ಮಾಡಿದ್ದಾರೆ. ಫೀಲ್ಡ್ ಸರ್ವೆ ಮಾಡಿರುವ ಹಾಗಿದೆ. ಆ ಆಧಾರದ ಮೇಲೆ ನಮ್ಮ ಇಂಡಿಯಾ ಮಿತ್ರಕೂಟಕ್ಕೆ ಹೆಚ್ಚು ಸೀಟ್ ಬರುತ್ತೆ ಎಂದಿದ್ದಾರೆ. ಏಪ್ರಿಲ್‌ 26ರಂದು ಕ್ಷೇತ್ರದಲ್ಲಿ ಮೊದಲ ಹಂತದ ಚುನಾವಣೆಗೆ ಹೋಗ್ತಿದ್ದೇವೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸೀಟ್‌ಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದರು.

ಸುರೇಶ್ ಬಾಬು ಇಂಡಿಯಾ ಮಿತ್ರ ಪಕ್ಷ ಹೊರಗಿಟ್ಟ ವಿಚಾರಕ್ಕೆ, ಸುರೇಶ್ ನಮ್ಮ ಜೊತೆಯಲ್ಲೇ ಗುರುತಿಸಿಕೊಂಡಿದ್ರು. ಜಾತ್ಯತೀತ ಸಿದ್ದಾಂತ ಹೇಳ್ತೀರಿ, ನಮ್ಮ ಜೊತೆಗಿರಿ ಅಂತಾ ಹೇಳಿದ್ವಿ. ದೇವೇಗೌಡ್ರು ನಮ್ಮ ಜೊತೆ ಸ್ಪರ್ಧೆ ಮಾಡಿದ್ರು‌. ಅವರ ಜೊತೆ ಸರ್ಕಾರ ಸಹ ಮಾಡಿದ್ವಿ ಎಂದರು.
ಅವರಾಗಿ ಅವರೇ ಹೋಗಿರೋದು. ಅವರು ಬರ್ತೀವಿ ಅಂದಿದ್ರೆ ನಾವು ಬೇಡ ಅಂತಿರಲಿಲ್ಲ‌. ನಾವು ಎಲ್ಲರಿಗೂ ಆಹ್ವಾನ ಕೊಟ್ಟಿದ್ವಿ. ಜಾತ್ಯತೀತ ಹಾಗೂ ಸಂವಿಧಾನದಲ್ಲಿ ನಂಬಿಕೆ ಇರೋರು ಬನ್ನಿ ಎಂದು ಕರೆಕೊಟ್ಟಿದ್ವಿ.ಅವರು ಬರಲಿಲ್ಲ. ಙಾಗಾಗಿ ನಾವು ತಿರಸ್ಕಾರ ಮಾಡಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ನೇಹಾ ಕೊಲೆ ಪ್ರಕರಣ ರಾಜಕೀಯ ಆಗಬಾರದಿತ್ತು, ಕಾನೂನು ಎಲ್ಲರಿಗೂ ಒಂದೇ: ಗೃಹ ಸಚಿವ ಡಾ. ಜಿ. ಪರಮೇಶ್ವರ್ - Neha Murder Case

ABOUT THE AUTHOR

...view details