ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಪ್ರಚಾರಕ್ಕೆ ಬರುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನನ್ನ ಕನಸು ಎಂದು ಬಾಗಲಕೋಟೆ ಕ್ಷೇತ್ರದಿಂದ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ನಿಮ್ಮ ಚುನಾವಣಾ ಪ್ರಚಾರ ಹೇಗಿದೆ?:ಭರ್ಜರಿಯಾಗಿ ನಡೆಯುತ್ತಿದೆ. ಜಿಲ್ಲಾ ಪಂಚಾಯಿತಿ ಮಟ್ಟದ ಸಭೆಯಿಂದ ಹಿಡಿದು ಸಾರ್ವಜನಿಕ ಸಭೆ-ಸಮಾರಂಭಗಳೂ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದಿವೆ. ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮುಖಂಡರು ಹಾಗೂ ಸ್ಥಳೀಯರನ್ನು ಭೇಟಿ ಮಾಡಿದ್ದೇನೆ. ಮಹಿಳಾ ಮುಖಂಡರನ್ನೂ ಭೇಟಿ ಮಾಡಿದ್ದೇನೆ. ಎಲ್ಲರೂ ಪ್ರಚಾರದಲ್ಲಿ ತೊಡಗಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದ್ದಾರೆ.
ಜನಾಭಿಪ್ರಾಯ ಹೇಗಿದೆ?, ಕ್ಷೇತ್ರದ ಜನ ನಿಮಗೇಕೆ ಮತ ಹಾಕಬೇಕು?:ಜನರ ಅಭಿಪ್ರಾಯ ಉತ್ತಮವಾಗಿದೆ. ನೂರಕ್ಕೆ ನೂರರಷ್ಟು ಗೆಲುವಿನ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ಜನರಿಗಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಕಾರಣ. ರಾಜ್ಯದಲ್ಲಿ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಇದಕ್ಕೆ ಮತ್ತೊಂದು ಉದಾಹರಣೆ. ಯುಕೆಸಿ ಪ್ರಾಜೆಕ್ಟ್, ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ಅಭಿವೃದ್ಧಿ, ಯುವ ಸಮುದಾಯಕ್ಕೆ ಉದ್ಯೋಗ ನೀಡುವಂತಹ ಕೈಗಾರಿಕೆಗಳನ್ನು ತರುವುದು, ಕಳಸಾ ಬಂಡೂರಿ ಸೇರಿದಂತೆ ಹಲವು ಅಭಿವೃದ್ಧಿ ಕಾಯಕ ಆಗಬೇಕಿದೆ. ಈ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯಬೇಕು ಎಂಬ ನಿಟ್ಟಿನಲ್ಲಿ ಮತ ಕೇಳುವೆ. ಇದಕ್ಕೆ ಕ್ಷೇತ್ರದ ಜನ ನನ್ನೊಟ್ಟಿಗಿರಲಿದ್ದಾರೆ ಎಂಬ ಭರವಸೆ ಇದೆ.
ಸ್ವಪಕ್ಷೀಯರಾದ ವೀಣಾ ಕಾಶಪ್ಪನವರ ಭಿನ್ನಾಭಿಪ್ರಾಯವನ್ನು ಹೇಗೆ ಶಮನ ಮಾಡಿದ್ದೀರಿ?:ಅವರು ನಮ್ಮ ಪಕ್ಷದ ಒಂದು ಭಾಗ. ಕಾಂಗ್ರೆಸ್ ಪರಿವಾರದ ಓರ್ವ ಸದಸ್ಯರು ಕೂಡ ಹೌದು. ಹಾಗಾಗಿ ಈ ವಿಚಾರದಲ್ಲಿ ವೀಣಾ ಕಾಶಪ್ಪನವರ್ ನಮ್ಮ ಪ್ರಚಾರ ಕಾರ್ಯದಲ್ಲಿ ತೊಡಗುತ್ತಾರೆ ಎಂಬ ವಿಶ್ವಾಸ ಇದೆ. ಅವರ ಮನವೊಲಿಕೆ ಮಾಡುವ ಎಲ್ಲ ಪ್ರಯತ್ನಗಳು ನಡೆದಿದ್ದು, ಫಲಪ್ರದ ಆಗಲಿದೆ ಎಂಬ ನಂಬಿಕೆ ಕೂಡ ಇದೆ. ಪಕ್ಷದ ಹಿರಿಯರ ಸಮ್ಮುಖದಲ್ಲಿ ಅವರನ್ನು ಪ್ರಚಾರ ಕಾರ್ಯಕ್ಕೆ ಕರೆತರುವ ಕೆಲಸ ನಡೆದಿದೆ.
ಹೊರಗಿನವರು ಎಂಬ ಮಾತಿದೆ, ಹೇಗೆ ನಿಭಾಯಿಸುತ್ತೀರಿ?:ನಾನು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದವಳು. ಬಾಗಲಕೋಟೆಯಲ್ಲಿರುವ ಎಲ್ಲ ಕಾರ್ಯಕರ್ತರು ನಮ್ಮವರು. ಇತ್ತೀಚೆಗೆ ಜಿಟಿ ಪಾಟೀಲ್ ಸಾಹೇಬರ ಮನೆಯಲ್ಲಿ ಸಭೆ ನಡೆಸಿದೆವು. ಈ ವೇಳೆ ಪಾಟೀಲರು ನನ್ನನ್ನು ದತ್ತು ಪುತ್ರಿ ಎಂದು ಸಂಭೋಧಿಸಿದರು. ಅವರ ಹೇಳಿಕೆಯಿಂದ ನಾನು ಬೀಳಗಿ ತಾಲೂಕಿನ ಮಗಳಾಗಿದ್ದೇನೆ. ಆರ್ಬಿ ತಿಮ್ಮಾಪೂರ್ ನನ್ನನ್ನು ಸಹೋದರಿ ಅಂದರು. ಅವರ ಹೇಳಿಕೆಯಿಂದ ನಾನು ಮುಧೋಳದ ಸಹೋದರಿ ಆದೆ. ಆನಂದ್ ನ್ಯಾಮಗೌಡ ನನಗೆ ಆಪ್ತರು, ಎಸ್ಆರ್ ಪಾಟೀಲ್, ಎಚ್ವೈ ಮೇಟಿ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಪಕ್ಷದ ಎಲ್ಲ ಮುಖಂಡರ ಮನೆ ಸದಸ್ಯೆ ಆಗಿದ್ದೇನೆ. ವಿಜಯಪುರದಿಂದ ಬಂದಿರಹುದು. ಆದರೆ, ಬಾಗಲಕೋಟೆಯೇ ನನ್ನ ಮನೆ.