ಕರ್ನಾಟಕ

karnataka

ಚುನಾವಣಾ ಬಾಂಡ್‌ ಅಕ್ರಮದ ರೂವಾರಿ ಮೋದಿಯನ್ನು ಬಂಧಿಸಿ: ಮುಖ್ಯಮಂತ್ರಿ ಚಂದ್ರು - AAP Hunger Strike

By ETV Bharat Karnataka Team

Published : Apr 7, 2024, 3:46 PM IST

ಅರವಿಂದ್ ಕೇಜ್ರಿವಾಲ್‌ ಬಂಧನ ಖಂಡಿಸಿ ಆಮ್‌ ಆದ್ಮಿ ಪಾರ್ಟಿ ಸದಸ್ಯರು ಇಂದು ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

AAP hunger strike in Bengaluru
ಆಮ್‌ ಆದ್ಮಿ ಪಾರ್ಟಿ ಉಪವಾಸ ಸತ್ಯಾಗ್ರಹ

ಆಮ್‌ ಆದ್ಮಿ ಪಾರ್ಟಿ ಉಪವಾಸ ಸತ್ಯಾಗ್ರಹ

ಬೆಂಗಳೂರು: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಓರ್ವ ಹೇಡಿ ಎನ್ನುವುದು ಗೊತ್ತಾಗಿದೆ. ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದ ಅರವಿಂದ್ ಕೇಜ್ರಿವಾಲ್‌ ಅವರನ್ನು ನೇರವಾಗಿ ಎದುರಿಸಲಾಗದೇ ಪಿತೂರಿ ನಡೆಸಿ ಬಂಧನಕ್ಕೆ ಒಳಗಾಗುವಂತೆ ಮಾಡಿದ್ದಾರೆ. ಹೇಡಿಗಳಷ್ಟೇ ಕುತಂತ್ರ, ಪಿತೂರಿ, ವಾಮ ಮಾರ್ಗಗಳನ್ನು ಅನುಸರಿಸುತ್ತಾರೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಬಂಧನ ವಿರೋಧಿಸಿ ಎಎಪಿ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಅಧಿಕಾರದಿಂದ ಕಿತ್ತೆಸೆಯುತ್ತಾರೆ ಎನ್ನುವುದನ್ನು ಅರಿತ ಮೋದಿ ಸರ್ಕಾರ ಹೇಗಾದರೂ ಮಾಡಿ ಮತ್ತೆ ಅಧಿಕಾರ ಹಿಡಿಯಬೇಕೆಂಬ ಕಾರಣಕ್ಕೆ ವಾಮಮಾರ್ಗಗಳನ್ನು ಅನುಸರಿಸುತ್ತಿದೆ. ಮೊದಲು ಚುನಾವಣಾ ಬಾಂಡ್‌ ಮೂಲಕ ಅತಿದೊಡ್ಡ ಹಗರಣ ನಡೆಸಿರುವ ನರೇಂದ್ರ ಮೋದಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಲಿ ಎಂದು ಆಗ್ರಹಿಸಿದರು.

ಪ್ರಕರಣಕ್ಕೂ ಕೇಜ್ರಿವಾಲ್​ಗೂ ಸಂಬಂಧವೇ ಇಲ್ಲ. ಪ್ರಮುಖ ಆರೋಪಿ ಶರತ್‌ ಚಂದ್ರ ರೆಡ್ಡಿ ಅವರ ಒಂದು ಹೇಳಿಕೆ ಆಧರಿಸಿ ಅವರನ್ನು ಬಂಧಿಸಲಾಗಿದೆ. ಕೇಜ್ರಿವಾಲ್‌ ವಿರುದ್ಧ ಹೇಳಿಕೆ ನೀಡಿದರೆ, ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ದೇಣಿಗೆ ನೀಡಿದರೆ ಬಂಧಮುಕ್ತಗೊಳಿಸುವುದಾಗಿ ಪುಸಲಾಯಿಸಿ ಶರತ್‌ ಚಂದ್ರ ರೆಡ್ಡಿರನ್ನು ಸಾಕ್ಷಿಧಾರನನ್ನಾಗಿಸಲಾಗಿದೆ. ಡೀಲ್‌ ಪ್ರಕಾರ ಶರತ್‌ ಚಂದ್ರ ರೆಡ್ಡಿ ಒಡೆತನದ ಕಂಪನಿ ಬಿಜೆಪಿಗೆ ಚುನಾವಣಾ ಬಾಂಡ್‌ ಮೂಲಕ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದೆ. ನಂತರ ಬೆನ್ನು ನೋವು ಎಂಬ ಕಾರಣಕ್ಕೆ ಪ್ರಮುಖ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ. ಈ ಅವ್ಯವಹಾರದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿ ನಾಯಕರನ್ನು ಏಕೆ ಬಂಧಿಸಲಾಗಿಲ್ಲ, ಇದರ ರೂವಾರಿ ನರೇಂದ್ರ ಮೋದಿ ಅವರನ್ನು ಸಹ ಬಂಧಿಸಬೇಕಲ್ಲವೇ ಎಂದು ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.

ಇದೇ ವೇಳೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ಲೋಕಸಭಾ ಚುನಾವಣೆ ಮುಗಿಯುವವರೆಗೆ ಹೇಗಾದರೂ ಮಾಡಿ ಕೇಜ್ರಿವಾಲ್‌ ಅವರನ್ನು ಜೈಲಿನಲ್ಲಿಟ್ಟರೆ ಗೆಲ್ಲಬಹುದು ಎಂಬುದು ನರೇಂದ್ರ ಮೋದಿ ಅವರ ದುರುದ್ದೇಶವಾಗಿದೆ ಎಂದರು.

ಆಮ್‌ ಆದ್ಮಿ ಪಾರ್ಟಿ ಉಪವಾಸ ಸತ್ಯಾಗ್ರಹ

ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳಿಲ್ಲದೇ ಸಂಜಯ್‌ ಸಿಂಗ್‌ ಅವರನ್ನು ಬಂಧನದಲ್ಲಿಟ್ಟಿರುವ ಬಗ್ಗೆ ನ್ಯಾಯಾಲಯ ಛೀಮಾರಿ ಹಾಕಿದ ಬಳಿಕ ಬಿಡುಗಡೆ ಮಾಡಲಾಗಿದೆ. ಮನೀಷ್‌ ಸಿಸೋಡಿಯಾ, ಸತ್ಯೇಂದ್ರ ಜೈನ್‌ ಅವರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಅಕ್ರಮವಾಗಿ ಬಂಧಿಸಲಾಗಿದೆ. ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ನಿಷ್ಕ್ರಿಯಗೊಳಿಸಲು ಕಳೆದ 2 ವರ್ಷಗಳಿಂದ ಹುನ್ನಾರ ನಡೆದಿದೆ. ಪ್ರಕರಣದಲ್ಲಿ ಸಿಕ್ಕಿಸುವ ಪ್ರಯತ್ನಗಳು ಎಗ್ಗಿಲ್ಲದೇ ನಡೆಯುತ್ತಿವೆ. ಆದರೆ ಇದುವರೆಗೆ ಒಂದೇ ಒಂದು ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ನಡೆದಿರದ ಅಕ್ರಮವನ್ನು ಎಷ್ಟು ಅಗೆದರೂ ಏನೂ ಸಿಗುವುದಿಲ್ಲ. ಇದೆಲ್ಲವೂ ಮೋದಿ ಸರ್ಕಾರದ ಕೃಪಾಪೋಷಿತ ಕಾರ್ಯಾಚರಣೆ ಎಂಬುದನ್ನು ವಿವರಿಸಬೇಕಿಲ್ಲ ಎಂದು ಪೃಥ್ವಿ ರೆಡ್ಡಿ ಟೀಕಿಸಿದರು.

ಇದನ್ನೂ ಓದಿ:ಭೀಕರ ಬರಗಾಲ: ಬರಿದಾದ ಹೇಮಾವತಿ ಒಡಲು, ಕಾಫಿನಾಡಿನ ಜನರಲ್ಲಿ ಆತಂಕ - Hemavati River

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್‌ ದಾಸರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ.ಸತೀಶ್‌ ಕುಮಾರ್‌ ಸೇರಿದಂತೆ ಎಎಪಿ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.

ABOUT THE AUTHOR

...view details