ಕರ್ನಾಟಕ

karnataka

ದಿ. ಪುನೀತ್ ರಾಜಕುಮಾರ್ 50ನೇ ಜನ್ಮ ದಿನದಂದು ಸರಳ ವಿವಾಹವಾದ 9 ಜೋಡಿ

By ETV Bharat Karnataka Team

Published : Mar 17, 2024, 8:20 PM IST

ಮೈಸೂರಿನಲ್ಲಿ ಪುನೀತ್​ ರಾಜಕುಮಾರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಭಾವಚಿತ್ರ, ಕಟೌಟ್‌ಗೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ರಕ್ತದಾನ, ಸಸಿ ನೆಡುವುದು, ಸಾಮೂಹಿಕ ವಿವಾಹ, ಅನ್ನದಾನ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ನಡೆಸಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದರು.

ಸರಳ ವಿವಾಹ
ಸರಳ ವಿವಾಹ

ಮೈಸೂರು :ಸರಳ ಸಾಮೂಹಿಕ ವಿವಾಹ ನಡೆಸುವ ಮೂಲಕ ಕರ್ನಾಟಕ ರತ್ನ ದಿವಂಗತ ನಟ ಪುನೀತ್​ ರಾಜಕುಮಾರ್ ಅವರ 50ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಪುನೀತ್​ ರಾಜಕುಮಾರ್ ಸಮಾಜ ಸೇವಾ ಸಮಿತಿಯ ವತಿಯಿಂದ ನಡೆದ ಸಾಮೂಹಿಕ ವಿವಾಹದಲ್ಲಿ 9 ನೂತನ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ವೇದಿಕೆಯಲ್ಲಿ ಗಣ್ಯರ ಜೊತೆಯೇ ಅಷ್ಟೂ ಜೋಡಿಗಳು ಆಸೀನರಾಗಿ ವೇದಮಂತ್ರಗಳ ನಡುವೆ ಹಾರ ಬದಲಾಯಿಸಿಕೊಂಡರು. ಮಂಗಳ ಸೂತ್ರವನ್ನು ವರ ವಧುವಿಗೆ ಕಟ್ಟುತ್ತಿದ್ದಂತೆಯೇ ಅಕ್ಷತೆ ಕಾಳಿನ ಮೂಲಕ ಎಲ್ಲರೂ ದಂಪತಿಗಳನ್ನು ಆಶೀರ್ವದಿಸಿದರು.

ಶ್ರೀ ನಾರಾಯಣಗುರು ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಪರಸ್ಪರ ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಂಡು ಜೀವನ ಮಾಡಬೇಕು ಸಲಹೆ ನೀಡಿದರು. ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ, ನಮ್ಮ ಆಲೋಚನೆಗಳು, ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅಪ್ಪು ಅಜರಾಮರ ಎನ್ನುವಂತೆ ಅಪ್ಪು ಹೆಸರಿನಲ್ಲಿ ಹುಟ್ಟುಹಬ್ಬದಂದು ನಡೆಯುವ ಸಾಮಾಜಿಕ ಕಾರ್ಯಗಳಿಗೆ ಲೆಕ್ಕವಿಲ್ಲ ಎಂದು ಹೇಳಿದರು.

ನಟ ಚಿಕ್ಕಣ್ಣ ಮಾತನಾಡಿ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರು ಮನೆ ಬಳಿ ಬಂದ ಅಭಿಮಾನಿಗಳೆಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ, ಮನೆಯ ಕಾಂಪೌಂಡ್ ಒಳಗೆ ಕರೆದು ಫೋಟೋ ತೆಗೆದುಕೊಳ್ಳುತ್ತಿದ್ದಂತಹ ಏಕೈಕ ವ್ಯಕ್ತಿ. ತಮ್ಮ ಜೀವನವನ್ನು ಸಂಪೂರ್ಣ ಅಭಿಮಾನಿಗಳಿಗಾಗಿ ಮೀಸಲಿಟ್ಟಿದ್ದರು ಎಂದು ಹೇಳಿದರು.

ಶಾಸಕ ಟಿ.ಎಸ್ ಶ್ರೀವತ್ಸ ನೂತನ ಜೋಡಿಗಳಿಗೆ ಶುಭ ಹಾರೈಸಿದರು. ಈಡಿಗ ಸಮುದಾಯದ ಮುಖಂಡರಾದ ಸಾಧನಹಳ್ಳಿ ನಾರಾಯಣ್, ವಿದ್ಯಾಸಾಗರ್ ಕದಂಬ , ಕೆ.ಎಸ್. ಮುರುಳಿ, ನಾಗರಾಜು ಸರಗೂರು, ಸುರೇಶ್ , ಸಿದ್ದಪ್ಪ, ತಮ್ಮಣ್ಣೇಗೌಡ, ಸಿದ್ದಪ್ಪ ರಾಜೀವ್ ನಗರ, ಕೃಷ್ಣಮೂರ್ತಿ, ಎಸ್.ಎ. ಶ್ರೀನಿವಾಸ್, ನಿಧಿ ಚನ್ನಪ್ಪ ಮುಂತಾದವರು ಹಾಜರಿದ್ದರು.

ಗಿಡ ನೆಟ್ಟು ಆಚರಣೆ :ಇನ್ನೊಂದೆಡೆನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾ. ರಾಜಕುಮಾರ್ ಉದ್ಯಾನವನದಲ್ಲಿ ಭುವನೇಶ್ವರಿ ಸೇವಾ ಟ್ರಸ್ಟ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಸಹಯೋಗದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಸಿಹಿ ವಿತರಿಸಿ ಜನ್ಮ ದಿನಾಚರಣೆ ಆಚರಿಸಿದರು.

ಡಾ.ರಾಜಕುಮಾರ್ ಸಂಘದ ಸಂಸ್ಥಾಪಕ ಅಧ್ಯಕ್ಷ ರಾಮೇಗೌಡ ಮಾತನಾಡಿ, ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತವಾಗಿರುವಂತೆ ಬದುಕಬೇಕು. ಅಂಥ ಬದುಕು ಪುನೀತ್ ರಾಜ್‌ಕುಮಾರ್ ಅವರದ್ದಾಗಿತ್ತು. ಪುನೀತ್ ಅವರು ಸಾವಿರಾರು ಜನರಿಗೆ ಆಸರೆಯಾಗಿದ್ದರು. ಅನೇಕ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಧನ ಸಹಾಯ ಮಾಡಿದ್ದರು. ಪ್ರಚಾರ ಬಯಸದೇ ಕರ್ಣನ ರೀತಿಯಲ್ಲಿ ಕೊಡುಗೈ ದಾನಿಯಾಗಿದ್ದರು. ಸಂಬಂಧ ವಿಲ್ಲದವರು ಕೂಡ ಅವರ ಸಾವಿಗೆ ದುಃಖಪಟ್ಟಿದ್ದಾರೆ. ಶಾರೀರಿಕವಾಗಿ ನಮ್ಮನ್ನಗಲಿದರೂ ಅವರಿಗೆ ಸಾವಿಲ್ಲ, ಅವರು ಅಜರಾಮರ ಎಂದು ಹೇಳಿದರು.

ಜಾಕಿ ಚಿತ್ರ ಮರು ಬಿಡುಗಡೆ : ಅಪ್ಪು ಹುಟ್ಟು ಹಬ್ಬಕ್ಕೆ ಜಾಕಿ ಚಿತ್ರವನ್ನು ಮರು ಬಿಡುಗಡೆ ಮಾಡಿರುವ ಹಿನ್ನೆಲೆ ನಗರದ ಗಾಯತ್ರಿ ಚಿತ್ರ ಮಂದಿರದ ಎದುರು ಅಭಿಮಾನಿಗಳು ಜಮಾಯಿಸಿದ್ದರು. ನಾಲ್ಕು ಶೋಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇದನ್ನೂ ಓದಿ :ಅಪ್ಪು ನಿರ್ವಹಿಸಿದ ಪಾತ್ರಗಳೆಲ್ಲವೂ ವಿಭಿನ್ನ: ತೆರೆ ಮೇಲೆ ನಕ್ಷತ್ರದಂತೆ ಮಿಂಚಿ ಮರೆಯಾದ ನಟ

ABOUT THE AUTHOR

...view details