ಕರ್ನಾಟಕ

karnataka

ಒಂದು ವರ್ಷದ ಸಿದ್ಧತೆ, ಆಟಗಾರರ ಬದ್ಧತೆ ಆರ್‌ಸಿಬಿ ಯಶಸ್ಸಿಗೆ ಕಾರಣ: ಸ್ಮೃತಿ ಮಂಧಾನ

By ETV Bharat Karnataka Team

Published : Mar 19, 2024, 1:15 PM IST

ಕಪ್​ ಗೆಲ್ಲುವ ನಮ್ಮ ಹಾಗೂ ಆರ್​ಸಿಬಿ ಅಭಿಮಾನಿಗಳ ಹಲವು ವರ್ಷಗಳ ಕನಸು ನನಸಾಗಿಸಲು ನಮ್ಮ ತಂಡದ ಸಿದ್ಧತೆ ಪ್ರಮುಖ ಪಾತ್ರ ವಹಿಸಿತ್ತು ಎಂದು ಸ್ಮೃತಿ ಮಂಧಾನ ಹೇಳಿದರು.

smriti mandhana
ಸ್ಮೃತಿ ಮಂಧಾನ

ಬೆಂಗಳೂರು: "ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ(WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಕ್ಕ ವಿಜಯ, ನಮ್ಮ ಒಂದಿಡೀ ವರ್ಷ ಮೈದಾನದ ಹೊರಗೆ ಹಾಗೂ ಒಳಗಿನ ಕಾರ್ಯತಂತ್ರ ಹಾಗೂ ಯೋಜನೆ, ಅದರಲ್ಲೂ ಮುಖ್ಯವಾಗಿ ಆಟಗಾರರ ಸಿದ್ಧತೆ ಮತ್ತು ಬದ್ಧತೆಗೆ ಸಿಕ್ಕ ಪ್ರತಿಫಲ" ಎಂದು ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅಭಿಪ್ರಾಯಪಟ್ಟರು.

ಇತ್ತೀಚೆಗೆ ನಡೆದ WPL ಫೈನಲ್​ ಪಂದ್ಯದಲ್ಲಿ ಆರ್‌ಸಿಬಿ ಚೊಚ್ಚಲ ಬಾರಿಗೆ ಕಪ್​ ಎತ್ತಿ ಹಿಡಿದ ಖುಷಿ ಹಂಚಿಕೊಂಡ ಮಂಧಾನ, "ನಾವು ಬಯಸಿದಂತೆ ಸಿಕ್ಕ ಡ್ರೆಸ್ಸಿಂಗ್​ ರೂಮ್​ ಸಂಸ್ಕೃತಿ, ದೇಶೀಯ ಆಟಗಾರರಿಗಾಗಿ ಮೀಸಲಾದ ಅನೇಕ ಆಫ್​-ಸೀಸನ್​ ಕ್ಯಾಂಪ್​ಗಳಿಂದ ಹಿಡಿದು ಪ್ರತೀ ಅವಕಾಶಗಳನ್ನೂ ನಾವು ಸದುಪಯೋಗಪಡಿಸಿಕೊಂಡ ಪ್ರತಿಫಲವೇ ನೀವು ಭಾನುವಾರ ಗ್ರೌಂಡ್​ನಲ್ಲಿ ಕಂಡ ಅಂತಿಮ ವೈಭವ. ನಮ್ಮ ತಂಡದ ಪ್ರಮುಖ ಆಟಗಾರರು ತಮ್ಮ ಶ್ರೇಷ್ಠ ಪ್ರದರ್ಶನವನ್ನು ಅಂತಿಮ ಹಂತದಲ್ಲಿ ಪ್ರದರ್ಶಿಸಿದರು. ಇದರಿಂದ ಎದುರಾಳಿಯನ್ನು ಸಾಧಾರಣ ಮೊತ್ತಕ್ಕೆ ಸೀಮಿತಗೊಳಿಸಲು ಸಾಧ್ಯವಾಯಿತು. ಜೊತೆಗೆ ಬ್ಯಾಟಿಂಗ್​ನಲ್ಲೂ ನಮ್ಮವರು ಪರಾಕ್ರಮ ಪ್ರದರ್ಶಿಸಿದರು. ಆದ್ದರಿಂದಲೇ ಕೇವಲ ಎರಡು ವಿಕೆಟ್‌ಗಳ ನಷ್ಟದೊಂದಿಗೆ ಸಮರ್ಥವಾಗಿ ಗುರಿ ತಲುಪಿದೆವು."

ಸಿದ್ಧತೆಯ ಕುರಿತು ಮಾತನಾಡಿದ ಅವರು, "ಕಪ್​ ಗೆಲ್ಲುವ ನಮ್ಮ ಹಾಗೂ ಆರ್​ಸಿಬಿ ಅಭಿಮಾನಿಗಳ ಹಲವು ವರ್ಷಗಳ ಕನಸು ನನಸಾಗಿಸಲು ನಮ್ಮ ತಂಡದ ಸಿದ್ಧತೆ ಪ್ರಮುಖ ಪಾತ್ರ ವಹಿಸಿತ್ತು. ತಂಡದ ಮಾಲೀಕರು ಇದು ನಿಮ್ಮ ತಂಡ, ನಿಮಗೆ ಹೇಗೆ ಬೇಕೋ ಆ ರೀತಿಯಲ್ಲಿ ರೂಪಿಸಿಕೊಳ್ಳಿ ಎನ್ನುವ ಮಾತು ಹೇಳಿದ್ದರು. ಅದು ನನಗೆ ದೊಡ್ಡ ಬೂಸ್ಟರ್​ ಆಗಿತ್ತು. ತಂಡವನ್ನು ಖುಷಿಯಾಗಿಡುವುದರ ಜೊತೆಗೆ, ಸಕಾರಾತ್ಮಕವಾಗಿಯೂ ನಾವು ನಮ್ಮನ್ನು ರೂಪಿಸಿಕೊಂಡೆವು."

ಸ್ಮೃತಿ ಮಂಧಾನ

"ಕಳೆದ ವರ್ಷ ಗಾಯಗೊಂಡಿದ್ದ ಸೋಫಿ ಮೊಲಿನೆಕ್ಸ್‌ ಅವರಂಥ ಆಟಗಾರರನ್ನು ಗಮನದಲ್ಲಿರಿಸಿಕೊಂಡು ನಾವು ತಯಾರಿ ಪ್ರಾರಂಭಿಸಿದ್ದೆವು. ಗಾಯದ ಬಳಿಕ ಆಕೆಯ ಚೇತರಿಕೆಯನ್ನು ಟ್ರ್ಯಾಕ್ ಮಾಡಬೇಕಾಗಿತ್ತು. ಆ ಸಂದರ್ಭಗಳಲ್ಲಿ ನಮ್ಮ ಕೋಚ್ ಲ್ಯೂಕ್ ವಿಲಿಯಮ್ಸ್ ಆಸ್ಟ್ರೇಲಿಯಾದಿಂದ ತುಂಬಾ ಸಹಾಯ ಮಾಡಿದರು."

"ಆಟಕ್ಕಾಗಿ ಕಳೆದ ಒಂದು ವರ್ಷದಲ್ಲಿ ನಮ್ಮ ತಂಡದ ಬಲವರ್ಧನೆಗಾಗಿ ಹಲವಾರು ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಲಾಗಿತ್ತು. ಫಿಟ್ನೆಸ್​ ಶಿಬಿರಗಳು, ಬ್ಯಾಟಿಂಗ್​ ಮತ್ತು ಬೌಲಿಂಗ್​ಗಾಗಿ ನಿರ್ದಿಷ್ಟ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅವುಗಳಲ್ಲಿ ನಾವು ನೂರಕ್ಕೆ ನೂರರಷ್ಟು ಭಾಗವಹಿಸಿರುವುದು ನಮ್ಮ ತಂಡಕ್ಕೆ ಪ್ಲಸ್​ ಪಾಯಿಂಟ್​ ಆಯ್ತು. ಅದರಲ್ಲೂ ದೇಶೀಯ ಕ್ರಿಕೆಟಿಗರಿಗೆ ವೇದಿಕೆ ಕಲ್ಪಿಸಿ, ಈ ಮಟ್ಟಕ್ಕೆ ಸಂಪೂರ್ಣವಾಗಿ ಸಿದ್ಧರಾಗುವಂತೆ ಮಾಡುವುದು ನಮ್ಮ ಯೋಜನೆಯಾಗಿತ್ತು."

"ಕಳೆದೊಂದು ವರ್ಷದಲ್ಲಿ ನಾವು ಒಟ್ಟಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಹನ ನಡೆಸಿದ್ದೇವೆ. ನಮ್ಮ ದೇಶೀಯ ಆಟಗಾರರಿಗೆ ನಮ್ಮ ಅಗತ್ಯವಿದ್ದ ಸಂದರ್ಭದಲ್ಲಿ ಯಾವಾಗಲೂ ನಾವಲ್ಲಿರುತ್ತಿದ್ದೆವು. ನೀವು ಒಂದು ವರ್ಷ ಶ್ರದ್ಧೆಯಿಂದ ತಯಾರಿ ನಡೆಸುತ್ತಾ ಬಂದಲ್ಲಿ, ಸೀಸನ್​ ಬಂದಾಗ ನಿಮ್ಮ ಕೆಲಸ ಸುಲಭವಾಗುತ್ತದೆ. ಸೀಸನ್​ ಪ್ರಾರಂಭವಾಯಿತೆಂದರೆ, ಅವುಗಳ ಮಧ್ಯದಲ್ಲಿ ತಯಾರಿಯ ಕೆಲಸ ಕಷ್ಟ ಸಾಧ್ಯ. ಹಾಗಾಗಿ ನಮ್ಮ ಒಂದು ವರ್ಷದ ಪರಿಶ್ರಮ ಬಹಳಷ್ಟು ಪ್ರತಿಫಲ ನೀಡಿತು" ಎಂದು ಹೇಳಿದರು.

ಆರ್‌ಸಿಬಿ ಡಬ್ಲ್ಯುಪಿಎಲ್‌ನಲ್ಲಿ ಐತಿಹಾಸಿಕ ಮೊದಲ ಜಯ ಸಾಧಿಸುವುದರ ಜೊತೆಗೆ, ಫೇರ್ ಪ್ಲೇ ಪ್ರಶಸ್ತಿ, ಅತಿ ಹೆಚ್ಚು ರನ್‌ಗಳಿಗಾಗಿ ಆರೆಂಜ್ ಕ್ಯಾಪ್ (ಎಲ್ಲೀಸ್ ಪೆರ್ರಿ -347 ರನ್), ಹೆಚ್ಚಿನ ವಿಕೆಟ್‌ಗಳಿಗೆ ಪರ್ಪಲ್ ಕ್ಯಾಪ್ ಹಾಗೂ ಉದಯೋನ್ಮುಖ ಆಟಗಾರ್ತಿ (ಶ್ರೇಯಾಂಕ ಪಾಟೀಲ್ - 13 ವಿಕೆಟ್) ಪ್ರಶಸ್ತಿಗಳನ್ನೂ ಜಯಿಸಿದೆ.

ಇದನ್ನೂ ಓದಿ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಪ್ರಶಸ್ತಿ ; ಆರ್​ಸಿಬಿ ಹೆಣ್ಣುಮಕ್ಳೆ ಸ್ಟ್ರಾಂಗು​ ಗುರು

ABOUT THE AUTHOR

...view details