ಕರ್ನಾಟಕ

karnataka

'ನನ್ನ ತಂದೆ, ಯುವರಾಜ್,​ ​ಲಾರಾಗೆ ವಿಶೇಷ ಧನ್ಯವಾದಗಳು': ಅಭಿಷೇಕ್ ಶರ್ಮಾ - Abhishek Sharma

By PTI

Published : Apr 6, 2024, 11:15 AM IST

'ನನ್ನ ಕಠಿಣ ಪರಿಶ್ರಮದ ಫಲ ಇದಾಗಿದೆ' ಎಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸನ್‌ರೈಸರ್ಸ್ ಹೈದರಾಬಾದ್​​ ಬ್ಯಾಟರ್​ ಅಭಿಷೇಕ್ ಶರ್ಮಾ ಹೇಳಿದ್ದಾರೆ.

Abhishek Sharma
ಅಭಿಷೇಕ್ ಶರ್ಮಾ

ಹೈದರಾಬಾದ್:ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್​​ನ ಯಶಸ್ವಿ ರನ್ ಚೇಸ್​ಗೆ​ ಭದ್ರ ಬುನಾದಿ ಹಾಕಿಕೊಟ್ಟ ಯುವ ಬ್ಯಾಟರ್​​ ಅಭಿಷೇಕ್ ಶರ್ಮಾ ತಮ್ಮ ಯಶಸ್ಸಿನ ಹಿಂದಿನ ಶಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಕ್ರಿಕೆಟರ್​ಗಳಾದ ಯುವರಾಜ್​ ಸಿಂಗ್​ ಹಾಗೂ ಬ್ರಿಯಾನ್​ ಲಾರಾ ಅವರ ನೆರವಿನೊಂದಿಗೆ ಐಪಿಎಲ್​ ಆರಂಭಕ್ಕೂ ಮುನ್ನ ಹಾಕಿದ ಕಠಿಣ ಪರಿಶ್ರಮವೇ ಈ ಸಾಧನೆಗೆ ಕಾರಣ ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ 23ರ ಹರೆಯದ ಅಭಿಷೇಕ್ 308.33 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 12 ಎಸೆತಗಳಲ್ಲೇ 37 ರನ್​ ಸಿಡಿಸಿದ್ದರು. ಮುಕೇಶ್​ ಚೌಧರಿ ಎಸೆದ ಪಂದ್ಯದ ಎರಡನೇ ಓವರ್​ನಲ್ಲಿ ಶರ್ಮಾ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 27ರನ್​​ ಚಚ್ಚಿದ್ದರು. ಇದೇ ಆರಂಭವನ್ನು ಮುಂದುವರೆಸಿದ ಸನ್​ರೈಸರ್ಸ್ ಮಾರ್ಕ್ರಮ್​ (50) ಅರ್ಧಶತಕದ ಬಲದೊಂದಿಗೆ ಚೆನ್ನೈ ವಿರುದ್ಧ​ ಸುಲಭದ ಜಯ ದಾಖಲಿಸಿತು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಅಭಿಷೇಕ್ ಶರ್ಮಾ, ''ನಾನು ಈ ಹಿಂದೆ ಮಾಡಿದ ಎಲ್ಲ ಪರಿಶ್ರಮದ ಫಲ ಇದಾಗಿದೆ. ನನ್ನ ತಂದೆ, ಯುವಿ ಪಾಜಿ ಹಾಗೂ​ ಬ್ರಿಯಾನ್ ಲಾರಾ ಅವರಿಗೆ ವಿಶೇಷ ಧನ್ಯವಾದಗಳು" ಎಂದು ಹೇಳಿದರು.

"ನಾವು ಬೌಲಿಂಗ್ ಮಾಡುವಾಗ, ನಿಧಾನಗತಿಯ ಪಿಚ್​ ಎಂಬುದು ತಿಳಿದುಬಂತು. ಹೀಗಾಗಿ, ನಾವು ಪವರ್‌ಪ್ಲೇಯಲ್ಲೇ ಬಿರುಸಿನ ಆಟಕ್ಕೆ ಮೊರೆ ಹೋಗಲು ಬಯಸಿದ್ದೆವು. ನಾವು ಬೌಲರ್​ಗಳ ಮೇಲೆ ಸವಾರಿ ಮಾಡುವ ಅಗತ್ಯತೆಯ ಅರಿವಿತ್ತು. ಇದರಿಂದ ಬೌಲರ್‌ಗಳಿಗೂ ಕಷ್ಟವಾಗುತ್ತದೆ. ನಮಗೆ ಐಪಿಎಲ್‌ಗೂ ಮುನ್ನ ತಯಾರಿಗೆ ಸಾಕಷ್ಟು ಸಮಯಾವಕಾಶ ಸಿಕ್ಕಿತ್ತು" ಎಂದರು.

ಹೆಚ್ಚಿನ ಸ್ಟ್ರೈಕ್ ರೇಟ್ ಮತ್ತು ದೊಡ್ಡ ಮೊತ್ತಗಳಲ್ಲಿ ಯಾವುದಕ್ಕೆ ಆದ್ಯತೆ ನೀಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ದೊಡ್ಡ ಸ್ಕೋರ್‌ಗಳು ಮುಖ್ಯ, ಆದರೆ, ನಾನು ಇಂದು ಎಂದಿನಂತೆ ಬ್ಯಾಟಿಂಗ್​ ಮಾಡಿದೆ. ನಾನು ಮುಂದಿನ ಸಲ ಕೊನೆಯವನಾಗಿ ಔಟ್ ಆಗಲು ಬಯಸುತ್ತೇನೆ" ಎಂದು ಅಭಿಷೇಕ್ ತಿಳಿಸಿದರು.

ಇದೇ ವೇಳೆ ಮಾತನಾಡಿದ ಎಸ್​ಆರ್​ಹೆಚ್​ ನಾಯಕ ಪ್ಯಾಟ್ ಕಮ್ಮಿನ್ಸ್, ನಾನು ಅಭಿಷೇಕ್‌ಗೆ ಬೌಲಿಂಗ್ ಮಾಡಲು ಬಯಸುವುದಿಲ್ಲ ಎಂದು ತಮಾಷೆ ಮಾಡಿದರು. "ನಾನು ಅವರಿಗೆ ಬೌಲಿಂಗ್ ಮಾಡಲು ಬಯಸಲ್ಲ. ಪಿಚ್​ ವಿಭಿನ್ನ ಮಣ್ಣಿನಿಂದಾಗಿ ಆಟ ಸಾಗಿದಂತೆ ನಿಧಾನವಾಯಿತು. ನಮ್ಮಲ್ಲಿ ಸಾಕಷ್ಟು ವೇಗದ ಬೌಲರ್‌ಗಳಿದ್ದಾರೆ. ಶಿವಂ ಸ್ಪಿನ್ನರ್‌ಗಳನ್ನು ದಂಡಿಸುತ್ತಿದ್ದರು. ಆದ್ದರಿಂದ ನಮ್ಮ ವೇಗದ ಬೌಲರ್‌ಗಳು ಕಟ್ಟರ್‌ ಎಸೆತಗಳನ್ನು ಪ್ರಯೋಗಿಸಿದೆವು'' ಎಂದು ಕಮ್ಮಿನ್ಸ್ ಹೇಳಿದರು.

ತವರಿನ ಪ್ರೇಕ್ಷಕರ ಬಗ್ಗೆ ಪ್ರತಿಕ್ರಿಯಿಸಿದ ಕಮ್ಮಿನ್ಸ್, "ಇಂದು ರಾತ್ರಿ ಪ್ರೇಕ್ಷಕರು ಕ್ರೇಜಿಯಾಗಿದ್ದರು. ವಿಶೇಷವಾಗಿ ಎಂಎಸ್ ಧೋನಿ ಹೊರಬಂದಾಗ. ನಾವು ಇಲ್ಲಿ ಆಡಲು ಬಹಳ ಇಷ್ಟಪಡುತ್ತೇವೆ'' ಎಂದರು.

ಇದನ್ನೂ ಓದಿ:ತವರಿನಲ್ಲಿ ಹೈದರಾಬಾದ್​ಗೆ ಗೆಲುವಿನ ನಗೆ: ಅರ್ಧಶತಕ ಸಿಡಿಸಿ ಸಂಭ್ರಮಿಸಿದ ಮಾರ್ಕ್ರಮ್

ABOUT THE AUTHOR

...view details