ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳನ್ನು ಪ್ರೇಕ್ಷಕರೆದುರು ತಂದು ನಿಲ್ಲಿಸುವ ನಿರ್ದೇಶಕರ ಸಾಲಿನಲ್ಲಿ ಹೇಮಂತ್ ಎಂ.ರಾವ್ ಕೂಡ ಪ್ರಮುಖರು. ಮನು, ಸುರಭಿ ಹಾಗೂ ಪ್ರಿಯಾಳ ಪ್ರೇಮಕಥೆ ಹೇಳಿ ಗೆದ್ದಿದ್ದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ನಿರ್ದೇಶಕ ಹೇಮಂತ್ ಇದೀಗ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.
ಈಗಾಗಲೇ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ನಂತರ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಹೇಮಂತ್ ರಾವ್ ಹೊಸ ಅಲೆ ಎಬ್ಬಿಸಿದವರು. ಇತ್ತ ಕನ್ನಡ ಚಿತ್ರರಂಗದ ನಿರ್ಮಾಪಕರ ಅಚ್ಚುಮೆಚ್ಚಿನ ನಟರೆಂದೇ ಕರೆಯಿಸಿಕೊಂಡಿರುವ ಶಿವಣ್ಣರೊಂದಿಗೆ ಹೊಸ ಸಿನಿಮಾ ಮಾಡಲು ಕೈ ಜೋಡಿಸಿರುವುದು ಎಲ್ಲೆಡೆ ಭಾರೀ ಸುದ್ದಿಯಾಗಿದೆ. ಕೆಲ ದಿನಗಳಿಂದ ಹೇಮಂತ್ ರಾವ್ ಅವರು ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ವಿಚಾರ ಹರಿದಾಡುತ್ತಿತ್ತು. ಈ ಬಗ್ಗೆ ಇದೀಗ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ. ಆದರೆ ಶೀರ್ಷಿಕೆ ಅನೌನ್ಸ್ ಮಾಡಿಲ್ಲ.