ಕರ್ನಾಟಕ

karnataka

'ಭಾರತೀಯರು ನನ್ನನ್ನು ಅವರ ಹೃದಯದಲ್ಲಿಟ್ಟುಕೊಂಡಿದ್ದಾರೆ': ಶಾರುಖ್​​ ಖಾನ್​ ಕೃತಜ್ಞತೆ

By ETV Bharat Karnataka Team

Published : Jan 30, 2024, 1:57 PM IST

ಸೋಮವಾರದಂದು ಮುಂಬೈನಲ್ಲಿ ಎಸ್​ಆರ್​ಕೆ ಫ್ಯಾನ್ಸ್ ಗ್ರೀಟ್​ ಆ್ಯಂಡ್​ ಮೀಟ್​ ಈವೆಂಟ್​ ನಡೆಯಿತು. ತಮ್ಮ ಸಿನಿಮಾಗಳನ್ನು ಗೆಲ್ಲಿಸಿಕೊಟ್ಟ ಅಭಿಮಾನಿಗಳಿಗೆ ಎಸ್​ಆರ್​ಕೆ ತುಂಬುಹೃದಯದ ಧನ್ಯವಾದ ಅರ್ಪಿಸಿದ್ದಾರೆ.

Shah Rukh Khan
ಶಾರುಖ್​​ ಖಾನ್

ಲೆಜೆಂಡರಿ ಆ್ಯಕ್ಟರ್ ಶಾರುಖ್​ ಖಾನ್​ ಅವರಿಗೆ '2023' ಬಹಳ ವಿಶೇಷವಾದದ್ದು. ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಮೂರು ಸಿನಿಮಾಗಳೊಂದಿಗೆ ಬಂದ ನಟ ಭರ್ಜರಿ ಯಶಸ್ಸು ಕಂಡಿದ್ದಾರೆ. 2023ರಲ್ಲಿ ತೆರೆಕಂಡ ಪಠಾಣ್​​​, ಜವಾನ್ ಮತ್ತು ಡಂಕಿ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಎಸ್​ಆರ್​ಕೆ ಪುನರಾಗಮನವು ಭಾರತ ಮತ್ತು ಸಾಗರೋತ್ತರ ಪ್ರದೇಶಗಳ ಅಭಿಮಾನಿಗಳಿಂದ ಅತ್ಯುತ್ತಮ ಸಕಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದೆ.

2023ರ ಕೊನೆಗೆ ತೆರೆಗಪ್ಪಳಿಸಿದ 'ಡಂಕಿ' ಸಿನಿಮಾದ ಸಂಭ್ರಮಾಚರಣೆ ಮುಂಬೈನಲ್ಲಿ ನಡೆದಿದೆ. ಫ್ಯಾನ್ಸ್ ಗ್ರೀಟ್​ ಆ್ಯಂಡ್​ ಮೀಟ್​ ಈವೆಂಟ್​ನಲ್ಲಿ ಮಾತನಾಡಿದ ಶಾರುಖ್​​ ಖಾನ್, ತಮ್ಮ ಪುನರಾಗಮನದ ಪ್ರಯಾಣದ ಮೇಲೆ ಬೆಳಕು ಚೆಲ್ಲಿದರು. ಪಠಾಣ್‌ನೊಂದಿಗೆ 2023 ಪ್ರಾರಂಭವಾಯಿತು. ನಂತರ ಬಂದ ಜವಾನ್ ಕೂಡ ಬ್ಲಾಕ್​ಬಸ್ಟರ್ ಹಿಟ್ ಆಗಿ ಸಾವಿರ ಕೋಟಿ ರೂ.ನ ಕ್ಲಬ್​​ ಸೇರಿತು. ಡಂಕಿ ಸಹ ಯಶಸ್ಸು ಕಂಡಿದೆ. 33 ವರ್ಷಗಳನ್ನು ಸಿನಿಮಾಗೆ ಮೀಸಲಿಟ್ಟಿದ್ದ ಕಲಾವಿದನಿಗೆ ಲಾಂಗ್​​​ ಬ್ರೇಕ್​​ (4 ವರ್ಷ) ತೆಗೆದುಕೊಳ್ಳುವ ನಿರ್ಧಾರ ಒಂದು ವಿನೂತನ ಅನುಭವ ಎಂಬುದನ್ನು ಎಸ್​ಆರ್​ಕೆ ಈವೆಂಟ್​ನಲ್ಲಿ ಒಪ್ಪಿಕೊಂಡರು.

ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ಶಾರುಖ್ ಖಾನ್, ಪಠಾಣ್, ಜವಾನ್ ಮತ್ತು ಡಂಕಿಗಾಗಿ ತಾವು ಸ್ವೀಕರಿಸಿದ ಅಪಾರ ಪ್ರೀತಿ ಬಗ್ಗೆ ಈವೆಂಟ್​ನಲ್ಲಿ ಮಾತನಾಡಿದರು. ತಮ್ಮ ಸಿನಿಮಾ ಪ್ರಯಾಣವನ್ನು ರೂಪಿಸುವಲ್ಲಿ ಅಭಿಮಾನಿಗಳ ಅಚಲ ಬೆಂಬಲದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಹೆಚ್ಚು ಕಾಲ ಸಿನಿಮಾಗಳಿಂದ ದೂರವಿರಬಾರದು ಎಂಬ ಅಭಿಮಾನಿಗಳ ಮನವಿಯನ್ನೂ ಕೂಡ ನಟ ಸ್ವೀಕರಿಸಿದ್ದಾರೆ.

ಇದನ್ನೂ ಓದಿ:ಶಾರುಖ್​​ ಖಾನ್​ ಜೊತೆ ಯಶ್​ ಸಿನಿಮಾ? ರಾಕಿಂಗ್​​ ಸ್ಟಾರ್​​ ಆಪ್ತರು ಹೀಗಂತಾರೆ

"ಸಂಪೂರ್ಣ ದೇಶ ಮತ್ತು ಭಾರತದ ಹೊರಗಿನ ಪ್ರೇಕ್ಷಕರೂ ಕೂಡ ನನ್ನನ್ನು ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಹೃದಯಕ್ಕೆ ಕರೆದೊಯ್ದಿದ್ದಾರೆ. 'ನಾಲ್ಕು ವರ್ಷಗಳಷ್ಟು ವಿರಾಮ ತೆಗೆದುಕೊಳ್ಳಬೇಡಿ, ಎರಡರಿಂದ ನಾಲ್ಕು ತಿಂಗಳು ಸಾಕು' ಎಂದು ತಿಳಿಸಿದ್ದಾರೆ. ಹಾಗಾಗಿ, ನಾನು ಸಿನಿಮಾ ಮಾಡುತ್ತಿರಬೇಕೆಂದು ನನಗೆ ಅರಿವು ಮೂಡಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ, ಪ್ರೇಕ್ಷಕರು ಮತ್ತು ಇಡೀ ಜಗತ್ತಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸೋಮವಾರ ನಡೆದ ಈವೆಂಟ್​ನಲ್ಲಿ ಎಸ್‌ಆರ್‌ಕೆ ತಿಳಿಸಿದರು.

ಇದನ್ನೂ ಓದಿ:ಫೈಟರ್​​: ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 150 ಕೋಟಿಯತ್ತ ಹೃತಿಕ್​​-ದೀಪಿಕಾ ಸಿನಿಮಾ

ಜನಪ್ರಿಯ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಆ್ಯಕ್ಷನ್​ ಕಟ್​ ಹೇಳಿರುವ ಡಂಕಿ, ಜನರ ಅಕ್ರಮ ವಲಸೆಯಂಥ ಕಥಾಹಂದರವನ್ನು ಒಳಗೊಂಡಿದೆ. ಡಿಸೆಂಬರ್ ಕೊನೆಯಲ್ಲಿ ತೆರೆಕಂಡ ಈ ಸಿನಿಮಾ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದ್ದರೂ, ಯಶಸ್ವಿಯಾಗಿದೆ. ಹಿರಾನಿಯವರು ಕಥೆ ಹೇಳುವ ಶೈಲಿ ಮತ್ತು ಎಸ್​ಆರ್​ಕೆ ಸೇರಿದಂತೆ ಚಿತ್ರತಂಡದವರ ನಟನೆ ಶ್ಲಾಘನೆಗೆ ಪಾತ್ರವಾಗಿದೆ. ಬಾಕ್ಸ್ ಆಫೀಸ್​ ವಿಚಾರದಲ್ಲೂ ಕೂಡ ಸಿನಿಮಾ ಗೆದ್ದಿದೆ.

ABOUT THE AUTHOR

...view details