ಕರ್ನಾಟಕ

karnataka

"ಹತ್ಯೆ ಉದ್ದೇಶವಲ್ಲ, ಬೆದರಿಸುವ ತಂತ್ರ": ಸತ್ಯ ಬಾಯ್ಬಿಟ್ಟ ಸಲ್ಮಾನ್​ ಖಾನ್​ ಮನೆ ಮೇಲಿನ ದಾಳಿಕೋರರು - salman khan

By ETV Bharat Karnataka Team

Published : Apr 18, 2024, 9:43 AM IST

ನಟ ಸಲ್ಮಾನ್​ ಖಾನ್​ ಮನೆ ಮೇಲೆ ನಡೆದ ದಾಳಿಯ ಬಗ್ಗೆ ಮುಂಬೈ ಅಪರಾಧ ವಿಭಾಗದ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಟ ಸಲ್ಮಾನ್​ ಖಾನ್
ನಟ ಸಲ್ಮಾನ್​ ಖಾನ್

ಹೈದರಾಬಾದ್:ಬಾಲಿವುಡ್​ ನಟ ಸಲ್ಮಾನ್​ ಖಾನ್​ ಮನೆ ಮೇಲೆ ಗುಂಡಿನ ದಾಳಿ ಮಾಡಿದ ಪ್ರಕರಣದ ಬಗ್ಗೆ ಪೊಲೀಸರು ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಸಲ್ಮಾನ್​ರನ್ನು ಹೆದರಿಸುವ ತಂತ್ರ ಇದಾಗಿತ್ತು. ಇದರ ಹಿಂದೆ ಹತ್ಯೆ ಮಾಡುವ ಉದ್ದೇಶ ಇರಲಿಲ್ಲ" ಎಂದು ತಿಳಿಸಿದ್ದಾರೆ.

ನಟನ ಮನೆ ಮೇಲೆ 6 ಸುತ್ತಿನ ಗುಂಡು ಹಾರಿಸಲಾಗಿತ್ತು. ಇದು ಕುಟುಂಬಸ್ಥರು ಸೇರಿ ಅಭಿಮಾನಿಗಳಲ್ಲಿ ಭಾರೀ ಆತಂಕವನ್ನು ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಾಳಿಯ ವೇಳೆ ನಟನ ಹತ್ಯೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೆದರಿಸುವ ಪ್ರಯತ್ನ ನಮ್ಮದಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಶಂಕಿತರ ವಿಚಾರಣೆ:ಆರೋಪಿಗಳು ಬಿಹಾರ ಮೂಲದವರಾಗಿದ್ದು, ಅವರ ಕುಟುಂಬಸ್ಥರು ಸೇರಿ ಹೆಚ್ಚಿನ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಯ ಪ್ರಕಾರ, ಹೆಚ್ಚಿನ ವಿಚಾರಣೆಗಾಗಿ ಹರಿಯಾಣ ಮತ್ತು ಇತರ ರಾಜ್ಯಗಳಿಂದ 7 ಜನರನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ, ನಟ ಸಲ್ಮಾನ್ ಖಾನ್ ಹೇಳಿಕೆಯನ್ನು ಮುಂಬೈ ಕ್ರೈಂ ಬ್ರಾಂಚ್ ಪ್ರಕರಣದಲ್ಲಿ ಸಾಕ್ಷಿಯಾಗಿ ದಾಖಲಿಸಿಕೊಂಡಿದ್ದಾರೆ. ಗುಂಡಿನ ದಾಳಿಯ ನಂತರ ಮುಂಬೈ ಪೊಲೀಸ್ ಅಧಿಕಾರಿಗಳು ಸಲ್ಮಾನ್​ ಮನೆಗೆ ಬಂದಾಗ ಅವರು ಕೋಪ ಮತ್ತು ಕುಟುಂಬದ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಪೊಲೀಸರು ನೀಡಿದ ರಕ್ಷಣೆಯ ಮಟ್ಟವನ್ನು ಅವರು ಪ್ರಶ್ನಿಸಿದ್ದಾರೆ. ಮನೆಗೆ ಸಾಕಷ್ಟು ಭದ್ರತಾ ವ್ಯವಸ್ಥೆ, ಸಿಬ್ಬಂದಿ ಇದ್ದರೂ ಘಟನೆ ಸಂಭವಿಸಿರುವುದು ಅಚ್ಚರಿ ಉಂಟು ಮಾಡಿದ್ದಾಗಿ ಅವರು ಹೇಳಿದ್ದಾರೆ.

ಘಟನೆಯ ನಂತರ ಫೇಸ್‌ಬುಕ್‌ನಲ್ಲಿ ಮತ್ತೊಮ್ಮೆ ಬೆದರಿಕೆ ಪೋಸ್ಟ್​ ಹಂಚಿಕೊಂಡಿದ್ದಕ್ಕಾಗಿ ಮುಂಬೈ ಪೊಲೀಸರು ಅನ್ಮೋಲ್ ಬಿಷ್ಣೋಯ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರನಾಗಿರುವ ಅನ್ಮೋಲ್‌ ವಿರುದ್ಧ ಲುಕ್ ಔಟ್ ನೋಟಿಸ್​ (ಎಲ್‌ಒಸಿ) ಜಾರಿ ಮಾಡಲಾಗಿದೆ.

ದಾಳಿ ಒಪ್ಪಿಕೊಂಡ ಲಾರೆನ್ಸ್​ ಗ್ಯಾಂಗ್:ದಾಳಿಯನ್ನು ಗ್ಯಾಂಗ್​​ಸ್ಟರ್​ ಲಾರೆನ್​ ಬಿಷ್ಣೋಯ್​ ಅವರ ತಂಡ ಮಾಡಿದೆ ಎಂದು ಒಪ್ಪಿಕೊಂಡಿದೆ. ಲಾರೆನ್ಸ್​ ಬಿಷ್ಣೋಯ್​ ಸಹೋದರ ಅನ್ಮೋಲ್​ ಬಿಷ್ಣೋಯ್​ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ದಾಳಿ ನಡೆಸಿದ್ದನ್ನು ಒಪ್ಪಿಕೊಳ್ಳಲಾಗಿದೆ. ಇದು ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ. ಮುಂದಿನ ದಾಳಿಯು ಗುರಿ ತಪ್ಪುವುದಿಲ್ಲ ಎಂದು ಸಲ್ಮಾನ್​ ಖಾನ್​ಗೆ ಮತ್ತೊಂದು ಬೆದರಿಕೆ ಹಾಕಲಾಗಿದೆ.

ಇದು ಟ್ರೈಲರ್​ ಆಗಿದ್ದು, ಮುಂದಿನ ಟಾರ್ಗೆಟ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ನಡೆಯುವ ದಾಳಿಗಳು ಖಾಲಿ ಬೆದರಿಕೆಗಳಾಗಿ ಇರುವುದಿಲ್ಲ. ಸಲ್ಮಾನ್ ಖಾನ್, ಇದು ನಿಮಗೆ ಟ್ರೇಲರ್ ಮಾತ್ರ. ನಮ್ಮ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಬೇಡಿ. ಇದು ನಿಮಗೆ ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ. ಮುಂದಿನ ಬಾರಿ ಗೋಡೆಗಳ ಮೇಲೆ ಗುಂಡುಗಳನ್ನು ಹಾರಿಸುವುದಿಲ್ಲ ಎಂದು ಬೆದರಿಕೆಯಲ್ಲಿದೆ.

ಇದನ್ನೂ ಓದಿ:ಸಲ್ಮಾನ್​ ಖಾನ್​ ಮನೆ ಮೇಲೆ ದಾಳಿ ಮಾಡಿದ್ದ ಆರೋಪಿಗಳು ಗುಜರಾತ್​​ನಲ್ಲಿ ಅಂದರ್​ - salman khan

ABOUT THE AUTHOR

...view details