ಕರ್ನಾಟಕ

karnataka

ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ 'ಫೈರ್ ಫ್ಲೈ' ಬಿಡುಗಡೆಗೆ ಸಿದ್ಧ

By ETV Bharat Karnataka Team

Published : Mar 11, 2024, 4:11 PM IST

ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ 'ಫೈರ್ ಫ್ಲೈ' ಬರುವ ದೀಪಾವಳಿಗೆ ಬಿಡುಗಡೆಯಾಗಲಿದೆ.

ಫೈರ್ ಫ್ಲೈ ಚಿತ್ರ ತಂಡ
ಫೈರ್ ಫ್ಲೈ ಚಿತ್ರ ತಂಡ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್​ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.‌ ನಿವೇದಿತಾ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಬ್ಯಾನರ್ ಮೂಲಕ ಮೂಡಿ ಬಂದಿರುವ 'ಫೈರ್ ಫ್ಲೈ' ಚಿತ್ರ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಗ್ಗೆ ಶಿವಣ್ಣನ ನಾಗವಾರ ನಿವಾಸದಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ವೇಳೆ, ಸೆಂಚುರಿ ಸ್ಟಾರ್​, ಗೀತಾ ಶಿವರಾಜ್ ಕುಮಾರ್ ಪುತ್ರಿಯ ಹೊಸ ಪ್ರಯತ್ನಕ್ಕೆ ಜೊತೆಯಾಗಿ ಸಾಥ್ ಕೊಟ್ಟರು.

ಫೈರ್ ಫ್ಲೈ ಚಿತ್ರ ತಂಡ

ಮೊದಲು ಮಾತನಾಡಿದ ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್, ವೆಬ್ ಸೀರಿಸ್ ಮಾಡಿದ‌ ಮೇಲೆ ಸಿನಿಮಾ ಮಾಡಬೇಕು ಅಂತಾ ತುಂಬಾ ಆಸಕ್ತಿ ಇತ್ತು. ವಂಶಿ ಅವರು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಒಳ್ಳೆ ಟೆಕ್ನಿಕಲ್ ಟೀಂ ತೆಗೆದುಕೊಂಡು ಮಾಡಬೇಕು ಎಂದು ಚಿತ್ರ ಮಾಡಿದ್ದೇವೆ. ಕಥೆ ತುಂಬಾ ಸರಳವಾಗಿದ್ದರೂ, ಅವರು ಕಥೆ ಹೇಳಿದ ರೀತಿ ತುಂಬಾ ಇಷ್ಟವಾಯ್ತು. ಹೊಸ ಪ್ರಯೋಗ ಮಾಡಿದ್ದೇನೆ. ಕೊನೆಯ ಹಂತದ ಚಿತ್ರೀಕರಣ ಶುರು ಮಾಡುತ್ತಿದ್ದೇವೆ. ದೀಪಾವಳಿಗೆ ಸಿನಿಮಾ ಬಿಡುಗಡೆಯಾಗಲಿದೆ ಎಂದರು.

ಪುತ್ರಿ ನಿವೇದಿತಾ ಜೊತೆ ಶಿವರಾಜ್ ಕುಮಾರ್

ನಟ ಕಂ ನಿರ್ದೇಶಕ ವಂಶಿ ಮಾತನಾಡಿ, ಎಲ್ಲರ ಜೀವನದಲ್ಲಿಯೂ ಒಂದು ಪಾಯಿಂಟ್ ಇರುತ್ತದೆ. ನಾವು ಡೆಡ್ ಎಂಡ್ ಅಂದುಕೊಂಡಿರುತ್ತೇವೆ. ಒಂದು ಹೋಪ್ ಹಾಗೂ ಮೊಟಿವೇಷನ್​ಗೆ ಕಾಯುತ್ತಾ ಇರುತ್ತೇವೆ. ಆ ಟೈಮ್​ನಲ್ಲಿ ಹೋಪ್ ಎಂಬ ಬೆಳಕು ಎಲ್ಲಿಂದಲೋ ಬರಲ್ಲ, ನಮ್ಮಿಂದಲೇ ಬರಬೇಕು ಎಂಬುದೇ ಫೈರ್ ಫ್ಲೈ. ಅದಕ್ಕೆ ಈ ಟೈಟಲ್ ಇಟ್ಟಿದ್ದೇವೆ. ನಿವೇದಿತಾ ಮೇಡಂಗೆ ಧನ್ಯವಾದ. ಇದಕ್ಕಿಂತ ಮೊದಲು ಎರಡು ಮೂರು ಕಥೆ ಚರ್ಚೆ ಮಾಡಿದ್ದೆವು. ಆದರೆ, ಅವರು ರಿಜೆಕ್ಟ್ ಮಾಡಿದರು. ಈ ಕಥೆ ಒಪ್ಪಿಕೊಂಡಿದ್ದಕ್ಕೆ ನನಗೆ ಖುಷಿಯಾಯ್ತು. ಯಾಕೆಂದರೆ ನನ್ನಲ್ಲಿ ಕೆಲ ಬದಲಾವಣೆ ಆಯ್ತು. ಟೆಕ್ನಿಕಲ್ ಸ್ಟ್ರಾಂಗ್ ಹಾಗೂ ಸಿಂಪಲ್ ಸಿನಿಮಾದೊಂದಿಗೆ ಬರುತ್ತಿದ್ದೇವೆ. ಇಡೀ ಸಿನಿಮಾದಲ್ಲಿ ನಾನು ಒಬ್ಬನೇ ಹೊಸಬ.‌ ಆದರೆ, ಆ ರೀತಿ ಫೀಲ್ ನನಗೆ ಬಂದೇ ಇಲ್ಲ. ಇಷ್ಟು ಜನ ಸಿಕ್ಕಿದ್ದು, ಶ್ರೀ‌ಮುತ್ತು ಸಿನಿ ಸರ್ವೀಸ್​ನಿಂದ. ನಾನು ಬೇರೆ ನಿರ್ಮಾಪಕರ‌ ಜೊತೆ ಕೈ ಜೋಡಿಸಿದ್ದರೇ ಡೇಟ್ಸ್ ಕೂಡ ಸಿಗುತ್ತಿರಲಿಲ್ಲ ಎಂದರು.

ಪುತ್ರಿ ನಿವೇದಿತಾ ಜೊತೆ ಶಿವರಾಜ್ ಕುಮಾರ್ ದಂಪತಿ

ಫೈರ್ ಫ್ಲೈ ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಪುನೀತ್ ರಾಜ್​ಕುಮಾರ್ ಅವರ ‘ಪಿಆರ್ಕೆ ಪ್ರೊಡಕ್ಷನ್ಸ್’ ನಿರ್ಮಾಣದ ಮಾಯಾಬಜಾರ್ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ, ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಿದ್ದರು. ಈಗ ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣ ಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

ಫೈರ್ ಫ್ಲೈ ಚಿತ್ರ ತಂಡ

ಶಿವರಾಜ್ ಕುಮಾರ್ ಅವರು ಯಾವಾಗಲೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರ ರೀತಿಯೇ ನಿವೇದಿತಾ ಶಿವರಾಜ್​​ಕುಮಾರ್ ಕೂಡ ಹೊಸಬರಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ‘ಶ್ರೀಮುತ್ತು ಸಿನಿ ಸರ್ವೀಸಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ‘ಫೈರ್ ಫ್ಲೈ’ ಚಿತ್ರಕ್ಕೆ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆಯ ಬರೆದಿದ್ದಾರೆ. ಕಂಪ್ಲೀಟ್ ಶೂಟಿಂಗ್ ಮುಗಿಸಿರೋ ಫೈರ್ ಪ್ಲೈ ಚಿತ್ರ ಬೆಳಕಿನ ಹಬ್ಬ ದೀಪಾವಳಿಗೆ ದರ್ಶನ ಕೊಡಲಿದೆ.

ಇದನ್ನೂ ಓದಿ:'ಫೋಟೋ' ಅಂತರಂಗ ಬಿಚ್ಚಿಟ್ಟ ಪ್ರಕಾಶ್ ರಾಜ್: ಕೋವಿಡ್ ದಿನಗಳ ನೆನಪಿಸುವ ಚಿತ್ರವಿದು

ABOUT THE AUTHOR

...view details