ಜೀವನವೇ ಒಂದು ರಂಗಪ್ರಪಂಚ. ಅಲ್ಲಿ ಎಲ್ಲಾ ರೀತಿಯ ಏಳು-ಬೀಳುಗಳು, ಪಾತ್ರಧಾರಿಗಳು ಕಣ್ಣ ಮುಂದೆ ಹಾದು ಹೋಗುತ್ತಾರೆ. ಅಂತಹದ್ದೇ ಒಂದು ವಿಭಿನ್ನ ಕಥೆ ತೆರೆ ಮೇಲೆ ಬರಲಿದೆ. ಅಘೋರ್ ಮೋಶನ್ ಪಿಚ್ಚರ್ಸ್ ಅಡಿಯಲ್ಲಿ ಡಾ. ರೇವಣ್ಣ ನಿರ್ಮಾಣದ 'ರಂಗಸ್ಥಳ' ಎಂಬ ನೂತನ ಚಿತ್ರದ ಟೈಟಲ್ ಲಾಂಚ್ ಈವೆಂಟ್ ಜರುಗಿತು. ಈ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡ ಮಂಜುನಾಥ್, ಸಂತೋಷ್ ಸೇರಿದಂತೆ ಹಲವರು ಹಾಜರಿದ್ದರು. ಬಹುತೇಕ ಯುವ ಪ್ರತಿಭೆಗಳಿರುವ ಈ ಚಿತ್ರದ ಫಸ್ಟ್ ಲುಕ್ ಅನ್ನು ಅನಾವರಣ ಮಾಡಲಾಯಿತು.
ಈ ಚಿತ್ರವನ್ನು ನಿರ್ದೇಶಿಸುತ್ತಿರುವ ಯುವ ಪ್ರತಿಭೆ ಈಶ್ವರ್ ನಿತಿನ್ ಅವರಿಗಿದು ಪ್ರಥಮ ಪ್ರಯತ್ನ. ಡೆಂಟಲ್ ವಿದ್ಯಾರ್ಥಿ ಆಗಿದ್ದ ನಿತಿನ್, ಎಲ್.ವಿ ಪ್ರಸಾದ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದು ಒಂದಷ್ಟು ಕಿರುಚಿತ್ರ, ಆ್ಯಡ್ ಫಿಲಂನಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದು, ಇದೀಗ ಪೂರ್ಣ ಪ್ರಮಾಣದ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಇದೊಂದು ಗ್ರಾಮೀಣ ಸೊಗಡಿನ ಕಥೆಯಾಗಿದ್ದು, ನಮ್ಮ ಪುತ್ತೂರು, ಸುಳ್ಯ ಭಾಗದ ಭಾಷೆ, ಸೊಗಡು, ಆಚಾರ-ವಿಚಾರ, ಕಲೆ ಜೊತೆಗೆ ಬದುಕಿನ ಸುತ್ತಲಿನ ನೈಜಕ್ಕೆ ಪೂರಕ ಎನ್ನುವಂತಹ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಂಗಸ್ಥಳ ಎಂದರೆ ನನ್ನ ಪ್ರಕಾರ ಒಂದು ವೇದಿಕೆ. ರಂಗ ಕಲೆಗಳ ಪ್ರದರ್ಶನ ನಡೆಯುವ ಸ್ಥಳ. ಅದೇ ರೀತಿ ನನ್ನ ಕಥೆಗೆ ಬರುವ ಪಾತ್ರಧಾರಿಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಮನಸ್ಥಿತಿ. ಅದು ಹೇಗೆ? ಯಾವ ರೀತಿ? ಏನೆಲ್ಲಾ ತೊಂದರೆಗಳನ್ನು ನೀಡುತ್ತದೆ? ಈ ರಂಗಮಂಟಪದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ.
ಚಿತ್ರದ ನಾಯಕ ಒಬ್ಬ ಯಕ್ಷಗಾನ ಕಲಾವಿದ ಹಾಗೂ ನಾಯಕಿ ವೈಲ್ಡ್ ಲೈಫ್ ಫೋಟೋಗ್ರಾಫರ್. ಹಾಗೆಯೇ ಮಲಯಾಳಂನ ಖ್ಯಾತ ನಟ ಮನೋಜ್ ಕೆ ಜಯನ್ ಒಂದು ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹಳಷ್ಟು ಹೊಸಬರು ಹಾಗೂ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದು, ಈಗಾಗಲೇ 25 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಶೇ.40ರಷ್ಟು ಕೆಲಸ ಮುಗಿದಿದೆ. ಇಂದು ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದೇವೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡರು.
ನಾಯಕನಾಗಿ ಅಭಿನಯಿಸುತ್ತಿರುವ ವಿಲೋಕ್ ರಾಜ್ ಚಿತ್ರರಂಗದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ್ದು, ಸುಮಾರು 9 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರ್ಕಿ ಚಿತ್ರದ ನಂತರ ಈ 'ರಂಗಸ್ಥಳ' ವಿಲೋಕ್ ಚಿತ್ರಜೀವನಕ್ಕೆ ಒಂದು ತಿರುವು ನೀಡುವಂತಹ ಸಿನಿಮಾವಾಗಲಿದೆ ಅನ್ನೋದು ಒಂದು ನಂಬಿಕೆ. ಚಿತ್ರದಲ್ಲಿ ಯಕ್ಷಗಾನ ಕಲಾವಿದನಾಗಿ ಅಭಿನಯಿಸುತ್ತಿದ್ದು, ಇದಕ್ಕಾಗಿ ಮೂರು ತಿಂಗಳ ತರಬೇತಿಯನ್ನೂ ಪಡೆದಿದ್ದಾರೆ. ಹಾಗೆಯೇ ಭಾಷೆಯ ವಿಚಾರವಾಗಿಯೂ ಬಹಳ ಸೂಕ್ಷ್ಮವಾಗಿ ಗಮನಹರಿಸುತ್ತಿದ್ದು, ನಿರ್ದೇಶಕರು ಹೇಳಿದಂತೆ ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಿರ್ಮಾಪಕ ಡಾ. ರೇವಣ್ಣ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ. ನಾವು ಮೊದಲು ಸಣ್ಣ ಬಜೆಟ್ ಪ್ಲಾನ್ ಮಾಡಿಕೊಂಡಿದ್ದೆವು. ಆದರೆ ನಿರ್ಮಾಪಕರ ಪುತ್ರ ವಿನೋದ್ ಸಹಕಾರದೊಂದಿಗೆ ಈ ಚಿತ್ರ ಬೇರೆಯದ್ದೇ ರೂಪ ಪಡೆಯುತ್ತಿದೆ. ನಮ್ಮಂತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದು ಕೋರಿದರು.
ಇನ್ನೂ ಮಂಗಳೂರು ಬೆಡಗಿ ಶಿಲ್ಪ ಕಾಮತ್ ಶಾರ್ಟ್ ಮೂವೀಸ್ನಲ್ಲಿ ಅಭಿನಯಿಸಿದ್ದು, ಆಡಿಷನ್ ಮೂಲಕ ಈ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವೈಲ್ಡ್ ಲೈಫ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನೋಜ್ ಜೆಬೆ ಎಂಬ ಮಲಯಾಳಂ ಪ್ರತಿಭೆ ಕಾಮಿಡಿ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಗೇ ಮತ್ತೋರ್ವ ಪ್ರತಿಭೆ ಸಂಧ್ಯಾ ಅರ್ಕೆರೆ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.