ಕರ್ನಾಟಕ

karnataka

ಹುಲಿ ಉಗುರಿನ ವಿವಾದದ ಕುರಿತು ಮಾತನಾಡಿದ್ದ ಜಗ್ಗೇಶ್​​ಗೆ ಬೆದರಿಕೆ ಆರೋಪ: ಎಫ್ಐಆರ್ ದಾಖಲು

By ETV Bharat Karnataka Team

Published : Feb 20, 2024, 10:31 AM IST

Updated : Feb 20, 2024, 10:37 AM IST

ಹುಲಿ ಉಗುರು ವಿವಾದದ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್ ಅವರಿಗೆ ಬೆದರಿಕೆಗಳು ಬರುತ್ತಿವೆ ಎಂಬ ಆರೋಪಗಳಿವೆ.

actor Jaggesh Threat case
ಜಗ್ಗೇಶ್​​ಗೆ ಬೆದರಿಕೆ ಆರೋಪ

ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ನಟ ಜಗ್ಗೇಶ್ ಮಲ್ಲೇಶ್ವರಂ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನನ್ವಯ, ನಾರಾಯಣಸ್ವಾಮಿ ಹಾಗೂ ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಫೆಬ್ರುವರಿ 15ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದಿದ್ದ ರಂಗನಾಯಕ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಗ್ಗೇಶ್, ಹುಲಿ ಉಗುರಿನ ಪೆಂಡೆಂಟ್ ವಿವಾದದ ಕುರಿತು ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಗ್ರಾಮೀಣ ಭಾಷೆಯಲ್ಲಿ ತಾವು ಮಾತನಾಡಿರುವುದನ್ನ ತಪ್ಪಾಗಿ ಗ್ರಹಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜಾತಿ ನಿಂದನೆ, ಅವಾಚ್ಯ ಶಬ್ದಗಳ ಬಳಕೆ, ಮುಖಕ್ಕೆ ಮಸಿ ಬಳಿಯುವ ಬೆದರಿಕೆಯೊಡ್ಡಲಾಗುತ್ತಿದೆ. ಹಾಗಾಗಿ ತಪ್ಪು ಸಂದೇಶ ಕೊಟ್ಟು ಜಾತಿ ಗಲಭೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಅದರನ್ವಯ ನಾರಾಯಣಸ್ವಾಮಿ ಎಂಬ ವ್ಯಕ್ತಿ ಸೇರಿದಂತೆ ಮೂವರ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ‌‌.

ಅಭಿನಯ ಚಕ್ರವರ್ತಿ ಸುದೀಪ್​ ನಿರೂಪಣೆಯಲ್ಲಿ ಮೂಡಿಬರುವ ಕನ್ನಡದ ಅತ್ಯಂತ ಜನಪ್ರಿಯ ಕಾರ್ಯಕ್ರಮ ''ಬಿಗ್​ ಬಾಸ್​​ ಸೀಸನ್ 10'' ಇತ್ತೀಚೆಗಷ್ಟೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಾರ್ತಿಕ್​ ಮಹೇಶ್​​ ವಿಜೇತರಾದರೆ, ಪ್ರತಾಪ್​ ರನ್ನರ್​ ಅಪ್​ ಆಗಿ ಹೊರಹೊಮ್ಮಿದ್ದರು. ಫಿನಾಲೆ ತಲುಪಿದ ಆರು ಮಂದಿ ಪೈಕಿ, ವರ್ತೂರ್​ ಸಂತೋಷ್​ ಕೂಡ ಒಬ್ಬರು. ಆದ್ರೆ ಕಾರ್ಯಕ್ರಮ ಆರಂಭಗೊಂಡ ಕೆಲ ದಿನಗಳಲ್ಲಿ, ಮನೆಯಿಂದ ಹೊರನಡೆಯುವುದಾಗಿ ತಿಳಿಸಿದ್ದರು. ಅದಕ್ಕೆ ಕಾರಣವಾಗಿದ್ದೇ ಹುಲಿ ಉಗುರು ಪೆಂಡೆಂಟ್​ ಪ್ರಕರಣ.

ಇದನ್ನೂ ಓದಿ:ರಾಕುಲ್ ​ - ಜಾಕಿ ಮದುವೆಯಲ್ಲಿ ಶಿಲ್ಪಾ ಶೆಟ್ಟಿ- ರಾಜ್​ ಕುಂದ್ರಾ ಡ್ಯಾನ್ಸ್: ಮ್ಯಾರೇಜ್​ ಲೊಕೇಶನ್​ನಿಂದ ಫೋಟೋಗಳು ವೈರಲ್

ಹೌದು, ಮನೆಯ ಇತರ ಸದಸ್ಯರಿಗೆ ನಿಖರ ಮಾಹಿತಿ ಕೊಡದೇ ವರ್ತೂರ್​ ಸಂತೋಷ್​ ಅವರನ್ನು ಮನೆಯಿಂದ ಹೊರ ಕರೆದುಕೊಂಡು ಹೋಗಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿ, ಮತ್ತೆ ಮನೆಯೊಳಗೆ ಬಂದಿದ್ದರು. ಆ ಸಂದರ್ಭ ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ರಾಜ್ಯಸಭಾ ಸದಸ್ಯನಾಗಿ ಗುರುತಿಸಿಕೊಂಡಿದ್ದ ನಟ ಜಗ್ಗೇಶ್ ಅವರಿಗೂ ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್​ ಬಂದ ಒಂದು ತಾಸಿನಲ್ಲೇ ಅವರ ಮನೆಯ ಶೋಧ ಕಾರ್ಯವನ್ನೂ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗ್ಗೇಶ್​ ಕಾನೂನು ಹೋರಾಟ ನಡೆಸಿದ್ದರು. ಕಳೆದ ಗುರುವಾರ ಕಾರ್ಯಕ್ರಮವೊಂದರಲ್ಲಿ ಈ ಪ್ರಕರಣವನ್ನು ಪ್ರಸ್ತಾಪಿಸಿದ್ದರು. ನಟನ ವಿಡಿಯೋ ಆನ್​ಲೈನ್​ನಲ್ಲಿ ಶರವೇಗದಲ್ಲಿ ವೈರಲ್​ ಆಗಿ, ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಇದನ್ನೂ ಓದಿ:ರಶ್ಮಿಕಾ ಬೆನ್ನಲ್ಲೇ ಅಪಾಯದಿಂದ ಪಾರಾದ 'ಮಾರ್ಟಿನ್'​ ಚಿತ್ರತಂಡ: ಧ್ರುವ ಸರ್ಜಾ ಹೇಳಿದ್ದಿಷ್ಟು!

Last Updated :Feb 20, 2024, 10:37 AM IST

ABOUT THE AUTHOR

...view details