ಕರ್ನಾಟಕ

karnataka

ಜಲಿಯನ್​ ವಾಲಾಬಾಗ್​ ಹತ್ಯಾಕಾಂಡಕ್ಕೆ 105 ವರ್ಷ: ಹುತಾತ್ಮರಿಗೆ ರಾಷ್ಟ್ರಪತಿ, ಪ್ರಧಾನಿ ನಮನ - jallianwala bagh

By ETV Bharat Karnataka Team

Published : Apr 13, 2024, 1:37 PM IST

ಅದು 1919, ಏಪ್ರಿಲ್​ 13. ಪಂಜಾಬ್​ನ ಅಮೃತಸರದ ಜಲಿಯನ್​ ವಾಲಾಬಾಗ್​. ಅಲ್ಲಿ ಬ್ರಿಟಿಷರು ನಡೆಸಿದ ಹತ್ಯಾಕಾಂಡ ಇತಿಹಾಸದ ಪುಟಗಳಲ್ಲಿ ಕರಾಳ ಕತೆಯಾಗಿ ಉಳಿದಿದೆ. ನಿರಾಯುಧ ಭಾರತೀಯರ ಮೇಲೆ ಬ್ರಿಟಿಷ್​ ಸೇನೆ ಗುಂಡಿನ ಸುರಿಮಳೆಯನ್ನೇ ಹರಿಸಿತ್ತು. ಇದರಿಂದ ನೂರಾರು ಸ್ವಾತಂತ್ರ್ಯ ಹೋರಾಟಗಾರರು ಮಡಿದಿದ್ದರು.

ಜಲಿಯನ್​ ವಾಲಾಬಾಗ್​ ಹತ್ಯಾಕಾಂಡ
ಜಲಿಯನ್​ ವಾಲಾಬಾಗ್​ ಹತ್ಯಾಕಾಂಡ

ನವದೆಹಲಿ:ಪಂಜಾಬ್​ನ ಅಮೃತಸರದ ಜಲಿಯನ್​ ವಾಲಾಬಾಗ್​ನಲ್ಲಿ 1919ರ ಏಪ್ರಿಲ್​ 13 ರಂದು ನಡೆದ ಮಾರಣಹೋಮದಲ್ಲಿ ಮಡಿದ ಹುತಾತ್ಮರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಈ ಘೋರ ಹತ್ಯಾಕಾಂಡಕ್ಕೆ ಇಂದಿಗೆ 105 ವರ್ಷ. ಹುತಾತ್ಮರ ದೇಶಭಕ್ತಿಯು ಮುಂದಿನ ಪೀಳಿಗೆಗೆ ಸ್ಫೂರ್ತಿ ಎಂದು ಅವರು ಪ್ರತಿಪಾದಿಸಿದ್ದಾರೆ.

ಜಲಿಯನ್‌ವಾಲಾಬಾಗ್‌ನಲ್ಲಿ ಮಾತೃಭೂಮಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ನೀಡಿದ ಎಲ್ಲಾ ಮಹಾನ್ ಚೇತನಗಳಿಗೆ ದೇಶವಾಸಿಗಳು ಎಂದಿಗೂ ಋಣಿಯಾಗಿರುತ್ತಾರೆ. ಅವರ ದೇಶಪ್ರೇಮವು ಮುಂದಿನ ಎಲ್ಲ ಪೀಳಿಗೆಗೆ ಸ್ಪೂರ್ತಿಯಾಗಿರಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

"ದೇಶದ ನನ್ನ ಕುಟುಂಬದ ಸದಸ್ಯರ ಪರವಾಗಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಎಲ್ಲ ವೀರ ಹುತಾತ್ಮರಿಗೆ ನನ್ನ ಮನದಾಳದ ಗೌರವವನ್ನು ಸಲ್ಲಿಸುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸ್ವಾತಂತ್ರ್ಯದ ಕಿಚ್ಚಿಗೆ 'ರಕ್ತ' ಸುರಿದ ಮೈಕೆಲ್​ ಡಯರ್​:ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಸತ್ಯಪಾಲ್ ಮತ್ತು ಡಾ.ಸೈಫುದ್ದೀನ್ ಅವರ ಬಂಧನವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟಿಸಲು ಪಂಜಾಬ್‌ನ ಅಮೃತಸರದಲ್ಲಿ ಆರರಿಂದ ಏಳು ಎಕರೆಗಳಷ್ಟು ವಿಸ್ತಾರವಾದ ಉದ್ಯಾನವನ ಜಲಿಯನ್‌ವಾಲಾ ಬಾಗ್‌ನಲ್ಲಿ ಸುಮಾರು 20,000 ಜನರು ಜಮಾಯಿಸಿದ್ದರು. ಸೇನಾಧಿಕಾರಿ ಜನರಲ್ ಆರ್ ಡಯರ್ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಕರೆ ನೀಡಿದ್ದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಒಂದು ದಿನದ ಮೊದಲು ಅಮೃತಸರದಲ್ಲಿ ಕರ್ಫ್ಯೂ ಘೋಷಿಸಲಾಗಿತ್ತು.

ಈ ಮಾಹಿತಿಯ ಕೊರತೆಯಿಂದಾಗಿ, ಜನರು ಜಲಿಯನ್ ವಾಲಾಬಾಗ್‌ನಲ್ಲಿ ಜಮಾಯಿಸಿದ್ದರು. ಬ್ರಿಟಿಷರ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಖುಷ್ಹಾಲ್ ಸಿಂಗ್, ಮೊಹಮ್ಮದ್ ಪೆಹಲ್ವಾನ್ ಮತ್ತು ಮೀರ್ ರಿಯಾಜ್-ಉಲ್-ಹಸನ್ ಅವರು ಈ ಬಗ್ಗೆ ಜನರಲ್​ ಡಯರ್​ಗೆ ಮಾಹಿತಿ ರವಾನಿಸಿದ್ದರು.

4:30 ಕ್ಕೆ ನಿಗದಿಯಾಗಿದ್ದ ಸಭೆ ಅಪಾರ ಜನರು ನೆರೆದ ಪರಿಣಾಮ ಮಧ್ಯಾಹ್ನ 3 ಗಂಟೆಗೆ ಆರಂಭವಾಗಿತ್ತು. 5:15 ಕ್ಕೆ ಜನರಲ್ ಡಯರ್ 25 ಸೈನಿಕರ 4 ತುಕಡಿಗಳೊಂದಿಗೆ ಜಲಿಯನ್ ವಾಲಾಬಾಗ್​ಗೆ ತಲುಪಿದ್ದ. ಗೂರ್ಖಾ ರೆಜಿಮೆಂಟ್‌ ಮತ್ತು ಅಫ್ಘಾನ್ ರೆಜಿಮೆಂಟ್​ನ 50 ಸೈನಿಕರೊಂದಿಗೆ ಬಂದಿದ್ದ ಜನರಲ್ ಡಯರ್ ವಾಲಾಬಾಗ್​ನಲ್ಲಿ ಸೇರಿದ್ದ ಸಾವಿರಾರು ಭಾರತೀಯರ ಮೇಲೆ ಗುಂಡಿನ ಸುರಿಮಳೆ ಸುರಿಸಿದ್ದ.

ಇದರಿಂದ ಸ್ಥಳದಲ್ಲೇ ನೂರಾರು ಹೋರಾಟಗಾರರು ಸಾವಿಗೀಡಾದರೆ, ಗಾಯಗೊಂಡವರು ಅನ್ನ, ನೀರಿಲ್ಲದೇ ಬಳಲಿ ಮೃತಪಟ್ಟಿದ್ದರು. ಸಕಾಲಕ್ಕೆ ನೀರು ಅಥವಾ ವೈದ್ಯಕೀಯ ಸಹಾಯ ಸಿಕ್ಕಿದ್ದರೆ ಅನೇಕ ಜೀವಗಳನ್ನು ಉಳಿಸಬಹುದಿತ್ತು. ಇದು ಸ್ವಾತಂತ್ರ್ಯ ಹೋರಾಟ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿತು. ಭಾರತೀಯರ ಆಕ್ರೋಶದ ನಂತರ, ಬ್ರಿಟನ್‌ಗೆ ಮರಳಿದ್ದ ಜನರಲ್ ಡಯರ್​ನನ್ನು ಅಮಾನತು ಮಾಡಲಾಗಿತ್ತು. ವೀರ ಸ್ವಾತಂತ್ರ್ಯ ಹೋರಾಟಗಾರ ಉಧಮ್ ಸಿಂಗ್ ಅವರು ಮಾರ್ಚ್ 13, 1940 ರಂದು ಲಂಡನ್‌ನಲ್ಲಿ ಮೈಕೆಲ್ ಡಯರ್​ನನ್ನು ಗುಂಡಿಕ್ಕಿ ಸೇಡು ತೀರಿಸಿಕೊಂಡಿದ್ದ.

1961 ರಲ್ಲಿ ಅಗಲಿದ ಹುತಾತ್ಮರಿಗೆ ಗೌರವ ಸಲ್ಲಿಸಲು ಭಾರತ ಸರ್ಕಾರವು ಸ್ಮಾರಕವನ್ನು ನಿರ್ಮಿಸಿತು. ಇದನ್ನು ಮಾಜಿ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು.

ಇದನ್ನೂ ಓದಿ:ಗಾಂಧೀಜಿಯ ಹೋರಾಟದ ಸ್ವರೂಪ ಬದಲಿಸಿತು ಕರುನಾಡ ಈ ಹತ್ಯಾಕಾಂಡ.. ವಿದುರಾಶ್ವತ್ಥ-ಜಲಿಯನ್ ವಾಲಾಬಾಗ್‌ ಸಾಮ್ಯತೆ..

ABOUT THE AUTHOR

...view details