ಕರ್ನಾಟಕ

karnataka

ಮಧ್ಯರಾತ್ರಿ ಭೂಮಿಗೆ ಅಪ್ಪಳಿಸಿತೇ ಉಲ್ಕಾಶಿಲೆ? ರಾಜಸ್ಥಾನದ ಗಡಿ ಪ್ರದೇಶದಲ್ಲಿ ವಿಸ್ಮಯ - Astronomical Event In Barmer

By ETV Bharat Karnataka Team

Published : Apr 29, 2024, 4:51 PM IST

ರಾಜಸ್ಥಾನದ ಗಡಿ ಪ್ರದೇಶ ಬಾರ್ಮರ್‌ನಲ್ಲಿ ಉಲ್ಕಾಶಿಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾರ್ಮರ್(ರಾಜಸ್ಥಾನ):ಜಿಲ್ಲೆಯ ಗಡಿ ಪ್ರದೇಶಗಳಾದ ಚೌಹಾತಾನ್ ಮತ್ತು ಧೋರಿಮಣ್ಣಾ ಭಾಗಗಳಲ್ಲಿ ಭಾನುವಾರ ರಾತ್ರಿ ಭಾರೀ ಪ್ರಮಾಣದ ಸದ್ದಿನೊಂದಿಗೆ ಆಕಾಶದಿಂದ ಉಲ್ಕಾಶಿಲೆಯಂತಹ ನಿಗೂಢ ವಸ್ತು ಬಿದ್ದಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ವಿಸ್ಮಯ ಎಂಬಂತೆ ಈ ವೇಳೆ ಆಕಾಶದಲ್ಲಿ ಪ್ರಕಾಶಮಾನವಾದ ಬೆಳಕು ಗೋಚರಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವಿಚಿತ್ರ ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಆಕಾಶದಿಂದ ಬಿದ್ದಿರುವ ವಸ್ತು ಯಾವುದು?, ಯಾವ ಜಾಗದಲ್ಲಿ ಬಿದ್ದಿದೆ ಎಂಬಿತ್ಯಾದಿ ಮಾಹಿತಿ ಕಲೆಹಾಕುತ್ತಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ಜನರು ಈ ಗ್ರಾಮಗಳತ್ತ ಧಾವಿಸುತ್ತಿದ್ದಾರೆ.

''ಭಾನುವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ದೊಡ್ಡ ಶಬ್ದದೊಂದಿಗೆ ಯಾವುದೋ ವಸ್ತು ಆಕಾಶದಿಂದ ಭೂಮಿಗೆ ಬಿದ್ದಿದೆ. ಕೆಲಕಾಲ ಆಕಾಶದಲ್ಲಿ ಬೆಳಕು ಮೂಡಿತ್ತು. ಆದರೆ, ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಸದ್ದು ಕೇಳಿದರೆ ಅದು ಉಲ್ಕಾಶಿಲೆ ಇರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಇದುವರೆಗೂ ಈ ಪ್ರದೇಶದಲ್ಲೆಲ್ಲೂ ಅಹಿತಕರ ಘಟನೆಯಾಗಲಿ ಅಥವಾ ನಷ್ಟ ಸಂಭವಿಸಿದ ಸುದ್ದಿಯಾಗಲಿ ಇಲ್ಲ. ಸ್ಥಳೀಯರು ಹೇಳಿದಂತೆ ಉಲ್ಕಾಶಿಲೆಯಾಗಿರಬಹುದು ಅಥವಾ ಸಾಮಾನ್ಯ ದೈನಂದಿನ ಖಗೋಳ ವಿದ್ಯಮಾನವೂ ಆಗಿರಬಹುದು. ಆದರೆ, ತನಿಖೆಯ ನಂತರವಷ್ಟೇ ಈ ಬಗ್ಗೆ ನಿಖರ ಮಾಹಿತಿ ಗೊತ್ತಾಗಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ'' ಎಂದು ಚೌಹ್ತಾನ್ ಉಪವಿಭಾಗಾಧಿಕಾರಿ ಸೂರಜ್ಭಾನ್ ವಿಷ್ಣೋಯ್ ತಿಳಿಸಿದರು.

ಭಾರತ-ಪಾಕಿಸ್ತಾನ ಗಡಿ ಪ್ರದೇಶ ಇದಾಗಿದ್ದರಿಂದ ಹಲವು ಅನುಮಾನಗಳಿವೆ. ನಿಗೂಢ ವಸ್ತು ಭೂಮಿಗೆ ಅಪ್ಪಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:ಮಾಳಿಗೆ ಮೇಲೆ ನಿಂತಿದ್ದ ಮಹಿಳೆಗೆ ಅಪ್ಪಳಿಸಿದ ಉಲ್ಕಾಶಿಲೆ; ಫ್ರಾನ್ಸ್​ನಲ್ಲೊಂದು ಅಪರೂಪದ ಖಗೋಳ ವಿದ್ಯಮಾನ

ABOUT THE AUTHOR

...view details