ಕರ್ನಾಟಕ

karnataka

ರಾಜ್ಯಸಭೆ ಚುನಾವಣೆ: 15 ಸ್ಥಾನಗಳ ಪೈಕಿ ಬಿಜೆಪಿಗೆ 10, ಕಾಂಗ್ರೆಸ್​ 3, ಎಸ್​ಪಿ 2 ರಲ್ಲಿ ಗೆಲುವು

By ETV Bharat Karnataka Team

Published : Feb 28, 2024, 7:28 AM IST

ಮೂರು ರಾಜ್ಯಗಳಲ್ಲಿ ರಾಜ್ಯಸಭೆಯ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.

ರಾಜ್ಯಸಭೆ ಚುನಾವಣೆ
ರಾಜ್ಯಸಭೆ ಚುನಾವಣೆ

ನವದೆಹಲಿ:ಕರ್ನಾಟಕ, ಹಿಮಾಚಲಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನದ ನಡುವೆಯೂ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. 15 ಸ್ಥಾನಗಳಲ್ಲಿ ಬಿಜೆಪಿ 10, ಕಾಂಗ್ರೆಸ್​ 3, ಸಮಾಜವಾದಿ ಪಕ್ಷ (ಎಸ್​ಪಿ) 2 ಸ್ಥಾನಗಳನ್ನು ಗೆದ್ದಿವೆ.

ಕರ್ನಾಟಕ, ಉತ್ತರಪ್ರದೇಶದಲ್ಲಿ ನಿರೀಕ್ಷಿತ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಹಿಮಾಚಲಪ್ರದೇಶದಲ್ಲಿ ರಾಜಕೀಯ ತಂತ್ರದಿಂದ ಜಯ ಸಾಧಿಸಿದೆ. ಕರ್ನಾಟಕದಲ್ಲಿ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲು ಅನುಭವಿಸಿದರು. ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಪರವಾಗಿ ಅಡ್ಡ ಮತ ಚಲಾಯಿಸಿದರು. ಶಾಸಕ ಶಿವರಾಂ ಹೆಬ್ಬಾರ್​ ಮತದಾನದಿಂದ ದೂರ ಉಳಿದರು.

ಹಿಮಾಚಲದಲ್ಲಿ ಬಿಜೆಪಿಗೆ 'ಲಾಟ್ರಿ':ಬಿಜೆಪಿಯ ರಾಜಕೀಯ ತಂತ್ರ ಹಿಮಾಚಲಪ್ರದೇಶದಲ್ಲಿ ಫಲ ನೀಡಿದರೆ, ಕಾಂಗ್ರೆಸ್​ ಶಾಕ್​ ಅನುಭವಿಸಿದೆ. ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 6 ಕಾಂಗ್ರೆಸ್​ ಮತ್ತು ಮೂವರು ಪಕ್ಷೇತರ ಶಾಸಕರ ಅಡ್ಡಮತದಾನದಿಂದ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್​ ಮಹಾಜನ್​ ಅವರು ಗೆಲುವು ಸಾಧಿಸಿದ್ದಾರೆ. ಸುಲಭ ಗೆಲುವು ಪಡೆಯಬೇಕಿದ್ದ ಕಾಂಗ್ರೆಸ್​ನ ಅಭಿಷೇಕ್ ಮನು ಸಿಂಘ್ವಿ ಸೋಲು ಅನುಭವಿಸಿದ್ದಾರೆ.

ಬಿಜೆಪಿ ಕೇವಲ 25 ಶಾಸಕರ ಬಲ ಹೊಂದಿದ್ದರೂ ರಾಜ್ಯಸಭೆ ಸ್ಥಾನಕ್ಕೆ ಸ್ಪರ್ಧಿಸಿತ್ತು. ಕಾಂಗ್ರೆಸ್​ 43 ಶಾಸಕರನ್ನು ಹೊಂದಿದ್ದು, ಸುಲಭವಾಗಿ ಗೆಲ್ಲಬಹುದಿತ್ತು. ಆದರೆ, 6 ಕೈ ಪಕ್ಷದ ಮತ್ತು 3 ಪಕ್ಷೇತರ ಶಾಸಕರು ಬಿಜೆಪಿ ಪರ ಅಡ್ಡ ಮತದಾನ ಮಾಡಿದ್ದಾರೆ. ಇದರಿಂದ ತಲಾ 34 ಮತಗಳು ಬಂದವು. ಲಾಟ್ರಿ ಮೂಲಕ ನಡೆದ ಆಯ್ಕೆಯಲ್ಲಿ ಬಿಜೆಪಿಯ ಹರ್ಷವರ್ಧನ್​ ಗೆಲುವು ಸಾಧಿಸಿದರು. ಇದು ರಾಜ್ಯ ಸರ್ಕಾರವನ್ನೂ ಅಲುಗಾಡಿಸಿದೆ. ಶಾಸಕರು ಅಡ್ಡ ಮತದಾನ ಮಾಡಿದ್ದು, ಸಿಎಂ ಸುಖವಿಂದರ್​ ಸಿಂಗ್​ ಸುಖು ವಿಶ್ವಾಸಮತ ಯಾಚನೆ ಮೊರೆ ಹೋಗುವ ಸಾಧ್ಯತೆ ಇದೆ.

ಉತ್ತರಪ್ರದೇಶದಲ್ಲಿ ಭರ್ಜರಿ ಸಾಧನೆ:ಉತ್ತರ ಪ್ರದೇಶದಲ್ಲಿ 10 ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 8 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಮೂರು ಅಭ್ಯರ್ಥಿಗಳನ್ನು ಹಾಕಿದ್ದ ಸಮಾಜವಾದಿ ಪಕ್ಷವು ಕೇವಲ 2 ಸ್ಥಾನಗಳಲ್ಲಿ ಜಯ ಸಾಧಿಸಿತು.

ಕೇಂದ್ರದ ಮಾಜಿ ಸಚಿವ ಆರ್‌ಪಿಎನ್‌ ಸಿಂಗ್‌, ಮಾಜಿ ಸಂಸದ ಚೌಧರಿ ತೇಜ್‌ವೀರ್‌ ಸಿಂಗ್‌, ಅಮರ್‌ಪಾಲ್‌ ಮೌರ್ಯ, ಸಂಗೀತಾ ಬಲ್ವಂತ್‌, ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಮಾಜಿ ಶಾಸಕ ಸಾಧನಾ ಸಿಂಗ್‌, ನವೀನ್‌ ಜೈನ್‌ ಮತ್ತು ಸಂಜಯ್‌ ಸೇಠ್‌ ಗೆದ್ದ ಬಿಜೆಪಿ ಅಭ್ಯರ್ಥಿಗಳು. ಸಮಾಜವಾದಿ ಪಕ್ಷದಿಂದ ಜಯಾ ಬಚ್ಚನ್ ಮತ್ತು ರಾಮ್‌ಜಿ ಲಾಲ್ ಸುಮನ್ ಗೆದ್ದಿದ್ದಾರೆ. ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದ ಅಲೋಕ್ ರಂಜನ್ ಸೋಲು ಅನುಭವಿಸಿದ್ದಾರೆ.

ಕರ್ನಾಟಕದಲ್ಲಿ ಮೈತ್ರಿಗೆ ಸೋಲು:ಕರ್ನಾಟಕದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್​ 3 ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕೇನ್, ಡಾ ಸೈಯದ್ ನಾಸೀರ್ ಹುಸೇನ್ ಮತ್ತು ಜಿಸಿ ಚಂದ್ರಶೇಖರ್ ಅವರು ಜಯ ಗಳಿಸಿದ್ದಾರೆ. ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ವಿಜಯದ ನಗೆ ಬೀರಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯ 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಪರವಾಗಿ ಅಡ್ಡ ಮತ ಮಾಡಿದ್ದಾರೆ.

ಒಟ್ಟು 15 ರಾಜ್ಯಗಳಲ್ಲಿ ತೆರವಾಗಿದ್ದ 56 ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿತ್ತು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. 15 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಇದನ್ನೂ ಓದಿ:ಚುನಾವಣಾ ವ್ಯವಸ್ಥೆಯಲ್ಲಿ ಅಡ್ಡ ಮತದಾನಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್​: ಕುಮಾರಸ್ವಾಮಿ

ABOUT THE AUTHOR

...view details