ಕರ್ನಾಟಕ

karnataka

ಹೊಸ ಸರ್ಕಾರದ 100 ದಿನದ ಅಜೆಂಡಾ ಸಿದ್ಧ: 'ಹೋಗಿ, ಗೆದ್ದು ಬನ್ನಿ' ಸಚಿವರಿಗೆ ಹುರಿದುಂಬಿಸಿದ ಮೋದಿ

By ETV Bharat Karnataka Team

Published : Mar 4, 2024, 10:22 AM IST

ಲೋಕಸಭೆ ಚುನಾವಣೆಯ ಕೊನೆಯ ಮಂತ್ರಿಮಂಡಲ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ 100 ದಿನಗಳ ಕ್ರಿಯಾಯೋಜನೆಯ ಜೊತೆಗೆ, ಚುನಾವಣೆಯಲ್ಲಿ ಹೋಗಿ ಗೆದ್ದು ಬನ್ನಿ ಎಂದು ಹುರಿದುಂಬಿಸಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ಭರಪೂರ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ಸರ್ಕಾರ ರಚನೆಯ ಬಳಿಕ ಮೊದಲ 100 ದಿನಗಳ ಕ್ರಿಯಾಯೋಜನೆಯ ಬಗ್ಗೆ ಸಚಿವ ಸಂಪುಟದ ಜೊತೆ ಭಾನುವಾರ ಚರ್ಚೆ ನಡೆಸಿದರು. ಜೊತೆಗೆ ಮುಂದಿನ 5 ವರ್ಷಗಳ ಕಾರ್ಯಸೂಚಿ, 'ವಿಕಸಿತ ಭಾರತ-2047'ದ ಬಗ್ಗೆಯೂ ಹಲವು ವಿಚಾರಗಳನ್ನು ಮಂಡಿಸಿದ್ದಾರೆ.

ಈ ಸಭೆಯು 8 ತಾಸುಗಳ ಕಾಲ ನಡೆದಿದ್ದು, ಸಚಿವರು ಕೂಡ ತಮ್ಮ ಇಲಾಖೆಯ ಕಾರ್ಯಸೂಚಿಯನ್ನು ಕೂಡ ಪ್ರಧಾನಿ ಮುಂದೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ. ಚುನಾವಣೆಯಲ್ಲಿ ಎನ್​ಡಿಎ ಗೆಲುವು ಸಾಧಿಸಿದ ಬಳಿಕ ಮೊದಲ ಸರ್ಕಾರದ 100 ದಿನಗಳ ಕೆಲಸ ಕಾರ್ಯಗಳು ಹೇಗಿರಬೇಕು, ಸರ್ಕಾರದ ಸ್ಪಷ್ಟವಾದ ಅಜೆಂಡಾ ಏನಾಗಿರಬೇಕು ಎಂಬುದನ್ನು ಮೋದಿ ಅವರು ಸಚಿವರಿಗೆ ಸ್ಪಷ್ಟಪಡಿಸಿದ್ದಾರೆ.

ಸಭೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ, ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ಕೈಗೊಂಡ ಹಲವಾರು ಕ್ರಮಗಳ ಬಗ್ಗೆ ಹೇಳಿದರು. ಇದನ್ನು ಚುನಾವಣಾ ಪ್ರಚಾರದಲ್ಲಿ ಜನಮಾನಸದಲ್ಲಿ ತಲುಪಿಸಿ, ಇದರ ಆಧಾರದ ಮೇಲೆ ಮತ್ತೆ ಸರ್ಕಾರ ರಚನೆಗೆ ಅವಕಾಶ ಕೋರಬೇಕು ಎಂದು ಸಚಿವರಿಗೆ ತಿಳಿಸಿದ್ದಾಗಿ ಗೊತ್ತಾಗಿದೆ.

ಗೆದ್ದು ಬನ್ನಿ, ಮತ್ತೆ ಭೇಟಿಯಾಗೋಣ:ಸಂಸದರ ಚುನಾವಣಾ ತಯಾರಿ ಮತ್ತು ಆತ್ಮಸ್ಥೈರ್ಯದ ಬಗ್ಗೆ ಮಾತನಾಡಿರುವ ಮೋದಿ, ಹೋಗಿ, ಗೆದ್ದು ಬನ್ನಿ. ಮತ್ತೆ ಇಲ್ಲಿಯೇ ಭೇಟಿಯಾಗೋಣ ಎಂದು ಹೇಳುವ ಮೂಲಕ ಹುರಿದುಂಬಿಸಿದ್ದಾರೆ. ವಿನಾಕಾರಣ ಏನೇನೋ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಬೇಡಿ. ಡೀಪ್​ಫೇಕ್​ ತಂತ್ರಜ್ಞಾನದಿಂದಲೂ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ.

25 ವರ್ಷಗಳ ಕ್ರಿಯಾಯೋಜನೆ:2047ರ ವಿಕಸಿತ ಭಾರತದ ಸಂಕಲ್ಪ ಮಾಡಿರುವ ಪ್ರಧಾನಿ ಮೋದಿ, ಮುಂದಿನ 25 ವರ್ಷಗಳ ಸರ್ಕಾರದ ಕ್ರಿಯಾಯೋಜನೆ ಏನೆಂಬುದನ್ನು ಈಗಲೇ ಸಿದ್ಧಪಡಿಸಲು ಸೂಚಿಸಿದ್ದಾಗಿ ತಿಳಿದುಬಂದಿದೆ. 2021 ರಿಂದ 2024 ರವರೆಗೆ ಎಲ್ಲ ಸಚಿವಾಲಯಗಳು 2700 ಕ್ಕೂ ಅಧಿಕ ಸಭೆಗಳು, ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ನಡೆಸಿವೆ. 20 ಲಕ್ಷ ಯುವಕ ಅಭಿಪ್ರಾಯ ಸಂಗ್ರಹಿಸಲಾಗಿದೆ. ನೂರಾರು ಶಿಫಾರಸುಗಳನ್ನು ಪರಿಶೀಲಿಸಿರುವ ಸರ್ಕಾರ 15 ತಜ್ಞರನ್ನು ಸಂಪರ್ಕಿಸಿದೆ.

ವಿಕಸಿತ ಭಾರತದ ಮಾರ್ಗಸೂಚಿಯು ಸ್ಪಷ್ಟವಾದ ರಾಷ್ಟ್ರೀಯ ದೃಷ್ಟಿ, ಆಕಾಂಕ್ಷೆಗಳು, ಗುರಿಗಳು ಮತ್ತು ಕ್ರಿಯಾ ಅಂಶಗಳೊಂದಿಗೆ ಸಮಗ್ರ ನೀಲನಕ್ಷೆಯನ್ನು ಹೊಂದಿದೆ. ಅದರ ಗುರಿಗಳು ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ ಗುರಿಗಳು, ಸುಲಭ ವ್ಯಾಪಾರ, ಮೂಲಸೌಕರ್ಯ ಮತ್ತು ಸಮಾಜ ಕಲ್ಯಾಣ, ಸರಳ ಜೀವನ ಸೇರಿದಂತೆ ಮುಂತಾದ ಕ್ಷೇತ್ರಗಳನ್ನು ಒಳಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗೂ ಮೊದಲಿನ ಕೊನೆಯ ಸಭೆ ಇದಾಗಿದ್ದು, ಸಚಿವರು ತಮ್ಮ ಇಲಾಖಾವಾರು ಕ್ರಿಯಾ ಯೋಜನೆಗಳನ್ನು ತರಬೇಕು ಎಂದು ಪ್ರಧಾನಿ ಮೋದಿ ಅವರು ಈ ಹಿಂದೆಯೇ ಸಚಿವರಿಗೆ ಸೂಚಿಸಿದ್ದರು.

ಇದನ್ನೂ ಓದಿ:ಮುಂದಿನ 10 ದಿನ ಪ್ರಧಾನಿ ಮೋದಿ ಫುಲ್​ ಬ್ಯುಸಿ: 12 ರಾಜ್ಯಗಳ 29 ಕಾರ್ಯಕ್ರಮಗಳಲ್ಲಿ ಭಾಗಿ

ABOUT THE AUTHOR

...view details