ಕರ್ನಾಟಕ

karnataka

ಮುಳುಗಿರುವ ದ್ವಾರಕಾ ನಗರಕ್ಕೆ ಸ್ಕೂಬಾ ಡೈವಿಂಗ್​ ಮೂಲಕ ತೆರಳಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

By ETV Bharat Karnataka Team

Published : Feb 25, 2024, 7:16 PM IST

ಗುಜರಾತ್​ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಳುಗಿರುವ ದ್ವಾರಕಾ ನಗರದಲ್ಲಿ ಪೂಜೆ ಸಲ್ಲಿಸಿದರು.

ಮುಳುಗಿರುವ ದ್ವಾರಕಾ ನಗರ
ಮುಳುಗಿರುವ ದ್ವಾರಕಾ ನಗರ

ದ್ವಾರಕಾ (ಗುಜರಾತ್​):ಇಲ್ಲಿನ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಮುಳುಗಿರುವ ಪ್ರಾಚೀನ ದ್ವಾರಕಾ ನಗರಕ್ಕೆ ಸ್ಕೂಬಾ ಡೈವಿಂಗ್​ ಮೂಲಕ ನೀರಲ್ಲಿ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದ್ದಾರೆ. ಅಲ್ಲಿನ ಐತಿಹಾಸಿಕ ಸ್ಥಳವನ್ನೂ ಇದೇ ವೇಳೆ ವೀಕ್ಷಿಸಿದರು. ದೈವಿಕ ಅನುಭವ ಪಡೆದೆ ಎಂದು ಹೇಳಿದ್ದಾರೆ.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಗುಜರಾತ್​ಗೆ ಭಾನುವಾರ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು, ಪಂಚಕುಯಿ ಕರಾವಳಿ ಪ್ರದೇಶಕ್ಕೆ ತೆರಳಿದರು. ದ್ವಾಪರಯುಗದಲ್ಲಿ ಮುಳುಗಿದೆ ಎಂದು ಐತಿಹಾಸಿಕ ಪುರಾವೆಗಳು ಸಿಕ್ಕಿರುವ ಶ್ರೀಕೃಷ್ಣನು ನಿರ್ಮಿಸಿದ್ದ ದ್ವಾರಕಾನಗರದ ಜಾಗಕ್ಕೆ ಈಜುಗಾರರ ಸಹಾಯದೊಂದಿಗೆ ತೆರಳಿದ ಪ್ರಧಾನಿ, ಅಲ್ಲಿ ನವಿಲುಗರಿಯನ್ನು ಇಟ್ಟು ಕೆಲ ಹೊತ್ತು ಪೂಜೆ ಸಲ್ಲಿಸಿದರು.

ಚಿತ್ರಗಳನ್ನು ಹಂಚಿಕೊಂಡ ಮೋದಿ:ಸಮುದ್ರದಾಳದಲ್ಲಿ ಮುಳುಗುವ ಧೈರ್ಯಕ್ಕಿಂತ ಹೆಚ್ಚಾಗಿ, ಶ್ರೀಕೃಷ್ಣನ ಮೇಲಿನ ಭಕ್ತಿ ಮತ್ತು ನಂಬಿಕೆ ಇತ್ತು ಎಂದು ಅವರು ನೀರಿನಿಂದ ಹೊರಬಂದ ಬಳಿಕ ಹೇಳಿದ್ದಾರೆ. ಇದರ ಚಿತ್ರಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ, ಇಲ್ಲಿ ಪ್ರಾರ್ಥಿಸಿ ದೈವಿಕ ಅನುಭವ ಪಡೆದುಕೊಂಡೆ. ಸಮುದ್ರದಲ್ಲಿ ದ್ವಾರಕಾ ನಗರದ ದರ್ಶನವು 'ಅಭಿವೃದ್ಧಿ ಹೊಂದಿದ ಭಾರತ'ದ ನನ್ನ ಸಂಕಲ್ಪ ಮತ್ತಷ್ಟು ಬಲಗೊಂಡಿದೆ ಎಂದು ಅವರು ಹೇಳಿದ್ದಾರೆ.

ಬಳಿಕ ಇಲ್ಲಿ ನಡೆದ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪವಿತ್ರ ನಗರವನ್ನು ಕಾಣುವ ತಮ್ಮ ದಶಕಗಳ ಕನಸನ್ನು ನನಸಾಗಿಸಿಕೊಂಡ ಅನುಭವ ಮತ್ತು ಬಯಕೆ ಈಡೇರಿದ ಸಂತೋಷದಲ್ಲಿ ತೇಲುತ್ತಿದ್ದೇನೆ ಎಂದು ಹೇಳಿದರು.

ದ್ವಾರಕಾ ಅಭಿವೃದ್ಧಿಶೀಲ ರಾಷ್ಟ್ರದ ಪ್ರತೀಕ:ನಾನು ಸಮುದ್ರದಾಳಕ್ಕೆ ಹೋಗಿ ಪ್ರಾಚೀನ ದ್ವಾರಕಾ ನಗರವನ್ನು ನೋಡಿದೆ. ಪುರಾತತ್ವ ತಜ್ಞರು ಸಮುದ್ರದಲ್ಲಿ ಮುಳುಗಿರುವ ದ್ವಾರಕೆಯ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ನಮ್ಮ ಗ್ರಂಥಗಳಲ್ಲಿಯೂ ದ್ವಾರಕೆಯ ಬಗ್ಗೆ ಬಹಳಷ್ಟು ಮಾಹಿತಿ ಇದೆ. ವಿಶ್ವಕರ್ಮ ದ್ವಾರಕಾ ನಗರವನ್ನು ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ ಎಂದು ಪ್ರಧಾನಿ ಹೇಳಿದರು.

ಪುರಾತನ ದ್ವಾರಕಾ ನಗರವು ಒಂದು ಮಹಾನ್ ನಗರದ ಯೋಜನೆ ಮತ್ತು ಅಭಿವೃದ್ಧಿಗೆ ಉತ್ತಮ ಉದಾಹರಣೆಯಾಗಿದೆ. ಸಮುದ್ರದಲ್ಲಿ ಶ್ರೀಕೃಷ್ಣನಿಗೆ ನವಿಲುಗರಿ ಸೇವೆ ಸಲ್ಲಿಸಿ ಬಳಿಕ ಅದನ್ನು ಜೊತೆಗೆ ತೆಗೆದುಕೊಂಡು ಬಂದಿದ್ದೇನೆ. ಹಲವು ವರ್ಷಗಳಿಂದ ಸಮುದ್ರಕ್ಕೆ ಹೋಗಿ ಪುರಾತನ ನಗರವಾದ ದ್ವಾರಕಾದ ಅವಶೇಷಗಳನ್ನು ಮುಟ್ಟಿ ನಮನ ಸಲ್ಲಿಸುವ ಕುತೂಹಲ ನನ್ನಲ್ಲಿತ್ತು ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ:ದ್ವಾರಕಾದಲ್ಲಿ ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್ 'ಸುದರ್ಶನ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ABOUT THE AUTHOR

...view details