ಕರ್ನಾಟಕ

karnataka

ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಆರು ಮಂದಿ ಸುಟ್ಟು ಕರಕಲು - Fire accident

By ETV Bharat Karnataka Team

Published : Apr 9, 2024, 5:58 PM IST

ಬಿಹಾರದ ರೋಹ್ತಾಸ್‌ನ ಇಬ್ರಾಹಿಂಪುರ ಗ್ರಾಮದಲ್ಲಿ ಮನೆಗೆ ಬೆಂಕಿ ಹೊತ್ತಿಕೊಂಡು ಆರು ಮಂದಿ ಮೃತಪಟ್ಟಿದ್ದಾರೆ.

ಆರು ಮಂದಿ ಸುಟ್ಟು ಕರಕಲು
ಆರು ಮಂದಿ ಸುಟ್ಟು ಕರಕಲು

ರೋಹ್ತಾಸ್ (ಬಿಹಾರ) :ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದು ಒಂದೇ ಕುಟುಂಬದ ಆರು ಮಂದಿ ಸುಟ್ಟು ಕರಕಲಾಗಿರುವ ದುರಂತ ಬಿಹಾರದ ರೋಹ್ತಾಸ್​ನ ಇಬ್ರಾಹಿಂಪುರ ಗ್ರಾಮದಲ್ಲಿ ಸಂಭವಿಸಿದೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದು, ಘಟನೆ ಬಳಿಕ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಕಚ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ರಾಹಿಂಪುರ ಗ್ರಾಮದ ಮನೆಯೊಂದರಲ್ಲಿ ಮೊದಲು ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದೊಳಗೆ ಬೆಂಕಿ ದೈತ್ಯಾಕಾರದ ರೂಪವನ್ನು ಪಡೆದುಕೊಂಡಿದೆ. ಈ ವೇಳೆ ಮನೆಯಲ್ಲಿದ್ದವರು ಸಾಮಗ್ರಿಗಳನ್ನು ಹೊರ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಇತ್ತ ಬೆಂಕಿ ಮೃತರನ್ನು ಆವರಿಸಿದ್ದು, ಬೆಂಕಿಯ ಕೆನ್ನಾಲಿಗೆಯಿಂದ ಹೊರ ಬರಲು ಸಾಧ್ಯವಾಗಿಲ್ಲ. ಪರಿಣಾಮ ಬೆಂಕಿಯಲ್ಲಿ ಆರು ಮಂದಿ ಸುಟ್ಟು ಕರಕಲಾಗಿದ್ದಾರೆ.

ಬೆಂಕಿ ಹತೋಟಿಗೆ ತಂದ ಅಗ್ನಿಶಾಮಕ ದಳ:ಘಟನೆ ಸಂಭವಿಸಿದ ಬಳಿಕಸ್ಥಳೀಯರು ಅಗ್ನಿಯ ಕೆನ್ನಾಲಿಗೆಯನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ, ಬೆಂಕಿಯ ಪ್ರಮಾಣ ತುಂಬಾ ಹೆಚ್ಚಿತ್ತು. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಐದು ವಾಹನಗಳು ಸ್ಥಳಕ್ಕೆ ಧಾವಿಸಿದವು. ತಕ್ಷಣ ಕಾರ್ಯಾಚರಣೆಗಿಳಿದ ಅಗ್ನಿಶಾಮಕ ದಳದ ಅಧಿಕಾರಿಗಳು ಸಾಕಷ್ಟು ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯೇನೋ ಆದರು. ಆದರೆ, ಅಷ್ಟರಲ್ಲಾಗಲೇ 6 ಮಂದಿ ಮೃತಪಟ್ಟಿದ್ದರು.

ಇದೇ ವೇಳೆ, ಸಿಒ ಜೊತೆಗೆ ಕಚ್ವಾ ಪೊಲೀಸ್ ಠಾಣೆಯ ಎಸ್‌ಡಿಎಂ ಮತ್ತು ಎಸ್‌ಎಚ್‌ಒ ಕೂಡ ಸ್ಥಳಕ್ಕೆ ಆಗಮಿಸಿದ್ದು, ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬೆಂಕಿ ಹೇಗೆ ಮನೆಗೆ ತಗುಲಿದೆ ಎಂಬುದಕ್ಕೆ ಇನ್ನೂ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಆದರೆ, ಮನೆ ಪಕ್ಕದಲ್ಲಿರುವ ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ :ಬೆಂಗಳೂರಿನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಟೈರ್ ಗೋದಾಮು - Fire accident

ABOUT THE AUTHOR

...view details