ಕರ್ನಾಟಕ

karnataka

ರಾಜನಾಥ್ ನೇತೃತ್ವದಲ್ಲಿ ಬಿಜೆಪಿ ಪ್ರಣಾಳಿಕೆ ಸಮಿತಿ ರಚನೆ: ಕರ್ನಾಟಕದಿಂದ ರಾಜೀವ್​ ಚಂದ್ರಶೇಖರ್​ಗೆ ಸ್ಥಾನ - Lok Sabha Election 2024

By ETV Bharat Karnataka Team

Published : Mar 30, 2024, 8:49 PM IST

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ 27 ಸದಸ್ಯರ ಪ್ರಣಾಳಿಕೆ ಸಮಿತಿ ರಚನೆ ಮಾಡಿದೆ.

Lok Sabha Election 2024: BJP Forms 27-member Manifesto Committee; Rajnath Singh to Lead
ರಾಜನಾಥ್ ನೇತೃತ್ವದಲ್ಲಿ ಬಿಜೆಪಿ ಪ್ರಣಾಳಿಕೆ ರಚನೆ; ಕರ್ನಾಟಕದಿಂದ ರಾಜೀವ್​ ಚಂದ್ರಶೇಖರ್​ಗೆ ಸ್ಥಾನ

ನವದೆಹಲಿ: 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಪ್ರಣಾಳಿಕೆ ತಯಾರಿಸಲು 27 ಸದಸ್ಯರ ಸಮಿತಿಯನ್ನು ಶನಿವಾರ ರಚಿಸಿದೆ. ರಕ್ಷಣಾ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಿರ್ಮಲಾ ಸೀತಾರಾಮನ್, ವಸುಂಧರಾ ರಾಜೆ ಮತ್ತು ಸ್ಮೃತಿ ಇರಾನಿ ಅವರಂತಹ ಪ್ರಮುಖ ನಾಯಕರು ಇದ್ದಾರೆ. ಕರ್ನಾಟಕದಿಂದ ರಾಜೀವ್​ ಚಂದ್ರಶೇಖರ್​ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

ಬಿಜೆಪಿ ಪ್ರಣಾಳಿಕೆ ಸಮಿತಿ

ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆದ ರಾಜನಾಥ್ ಸಿಂಗ್ 2019ರ ಚುನಾವಣೆಯಲ್ಲೂ ಬಿಜೆಪಿಯ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ಸಮಿತಿನಲ್ಲಿಯೂ ಹಲವು ಸದಸ್ಯರು ಪುನರಾವರ್ತನೆಯಾಗಿದ್ದಾರೆ. ರಾಜನಾಥ್ ಸಿಂಗ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರೆ, ನಿರ್ಮಲಾ ಸೀತಾರಾಮನ್ ಅವರನ್ನು​ ಸಂಯೋಜಕರಾಗಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಹ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್, ಭೂಪೇಂದರ್ ಯಾದವ್, ಕಿರಣ್ ರಿಜಿಜು, ಅರ್ಜುನ್ ಮುಂಡಾ, ಅರ್ಜುನ್ ರಾಮ್ ಮೇಘವಾಲ್, ಸ್ಮೃತಿ ಇರಾನಿ ಮತ್ತು ರಾಜೀವ್ ಚಂದ್ರಶೇಖರ್ ಸದಸ್ಯರಾಗಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಛತ್ತೀಸ್‌ಗಢದ ಸಿಎಂ ವಿಷ್ಣು ದೇವ್ ಸಾಯಿ ಮತ್ತು ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಕೂಡ ಸಮಿತಿಯಲ್ಲಿದ್ದಾರೆ. ಆದಾಗ್ಯೂ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸೇರಿದಂತೆ ಇತರ ಮುಖ್ಯಮಂತ್ರಿಗಳು ಸಮಿತಿಯಲ್ಲಿ ಇಲ್ಲ. ಈ ಸಮಿತಿಯಲ್ಲಿಲ್ಲದ ಪಕ್ಷದ ಹಿರಿಯ ನಾಯಕರನ್ನು ಚುನಾವಣೆಗೆ ಸಂಬಂಧಿಸಿದ ಇತರ ಸಂಘಟನಾ ಕಸರತ್ತಿನ ಭಾಗವಾಗಿ ಮಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಹಾರದ ನಾಯಕರಾದ ಸುಶೀಲ್ ಕುಮಾರ್ ಮೋದಿ ಮತ್ತು ರವಿಶಂಕರ್ ಪ್ರಸಾದ್, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಮಾಜಿ ಕೇಂದ್ರ ಸಚಿವ ಜುಯಲ್ ಓರಂ, ಪಕ್ಷದ ಸಂಘಟನಾ ನಾಯಕರಾದ ವಿನೋದ್ ತಾವ್ಡೆ, ರಾಧಾ ಮೋಹನ್ ದಾಸ್ ಅಗರ್ವಾಲ್, ಮಂಜಿಂದರ್ ಸಿಂಗ್ ಸಿರ್ಸಾ, ತಾರಿಕ್ ಮನ್ಸೂರ್ ಮತ್ತು ಅನಿಲ್ ಆ್ಯಂಟನಿ ಅವರನ್ನು ಸಮಿತಿಯಲ್ಲಿ ಸೇರಿಸಲಾಗಿದೆ. ಆ್ಯಂಟನಿ ಮತ್ತು ಮನ್ಸೂರ್ ಕ್ರಮವಾಗಿ ಪಕ್ಷದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮುಖಗಳಾಗಿದ್ದಾರೆ.

ಬಿಜೆಪಿ ತನ್ನ ಪ್ರಣಾಳಿಕೆಗೆ ಈಗಾಗಲೇ ವಿವಿಧ ಗುಂಪುಗಳಿಂದ ಸಲಹೆಗಳನ್ನು ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹಲವು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಕೆಲವು ಪ್ರಮುಖ ಸೈದ್ಧಾಂತಿಕ ಭರವಸೆಗಳು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸದೇ ಇರುವುದು ಎಂಬ ಚರ್ಚೆಯು ನಡೆಯುತ್ತಿದೆ. ಹಲವಾರು ಚುನಾವಣೆಗಳಿಗೆ ಪ್ರಮುಖ ಭರವಸೆಗಳಾಗಿದ್ದ 370ನೇ ವಿಧಿ ರದ್ದು, ರಾಮ ಮಂದಿರ ನಿರ್ಮಾಣವನ್ನು ಮೋದಿ ನೇತೃತ್ವದ ಸರ್ಕಾರವು ತನ್ನ ಎರಡನೇ ಅವಧಿಯಲ್ಲಿ ಪೂರೈಸಿದೆ.

ಕೆಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಕೆಲಸ ಮಾಡುತ್ತಿವೆ. ಅಲ್ಲದೇ. ತಮ್ಮ ಮೂರನೇ ಅವಧಿಯುಲ್ಲಿ ದೊಡ್ಡ ನಿರ್ಧಾರಗಳಿಂದ ತೆಗೆದುಕೊಳ್ಳಲಾಗುತ್ತದೆ ಎಂದು ಮೋದಿ ಆಗಾಗ್ಗೆ ಹೇಳುತ್ತಿರುವುದರಿಂದ ಪ್ರಣಾಳಿಕೆ ಬಗ್ಗೆ ಸಹಜವಾದ ಕುತೂಹಲ ಇದೆ. ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ.

ಇದನ್ನೂ ಓದಿ:ಚುನಾವಣಾ ಬಾಂಡ್‌ ಕುರಿತ ತೀರ್ಪಿನ ಬಳಿಕ ನ್ಯಾಯಾಂಗದ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ: ಪ್ರಿಯಾಂಕಾ ಗಾಂಧಿ

ABOUT THE AUTHOR

...view details