ಕರ್ನಾಟಕ

karnataka

ಬಿಜೆಪಿ ನಾಯಕನ ಹತ್ಯೆ ಪ್ರಕರಣ: 15 ಪಿಎಫ್​ಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ ಆದೇಶ

By PTI

Published : Jan 30, 2024, 1:46 PM IST

Updated : Jan 30, 2024, 3:00 PM IST

ಕೇರಳ ಬಿಜೆಪಿ ನಾಯಕನ ಹತ್ಯೆ ಪ್ರಕರಣದಲ್ಲಿ ನಿಷೇಧಿತ PFI ಸಂಘಟನೆಯ 15 ಮಂದಿಗೆ ಅಲಪ್ಪುಳ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

court gives death sentence  15 PFI affiliated men convicted  killing BJP leader  ಬಿಜೆಪಿ ನಾಯಕನ ಹತ್ಯೆ ಪ್ರಕರಣ  15 ಪಿಎಫ್​ಐ ಕಾರ್ಯಕರ್ತರಿಗೆ ಮರಣದಂಡನೆ  ಮರಣದಂಡನೆ ವಿಧಿಸಿದ ನ್ಯಾಯಾಲಯ
ಬಿಜೆಪಿ ನಾಯಕನ ಹತ್ಯೆ ಪ್ರಕರಣ: 15 ಪಿಎಫ್​ಐ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ಅಲಪ್ಪುಳ(ಕೇರಳ):ಎರಡು ವರ್ಷಗಳ ಹಿಂದೆ ಕೇರಳದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಮುಖಂಡನ ಹತ್ಯೆ ಪ್ರಕರಣದ ಅಂತಿಮ ಆದೇಶವನ್ನು ಅಲಪ್ಪುಳ ನ್ಯಾಯಾಲಯ ಮಂಗಳವಾರ ಪ್ರಕಟಿಸಿದೆ. ಈ ಪ್ರಕರಣದಲ್ಲಿ 15 ಮಂದಿ ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಗೊಳಗಾದವರು ನಿಷೇಧಿತ ಪಿಎಫ್‌ಐ ಸಂಘಟನೆಗೆ ಸೇರಿದವರಾಗಿದ್ದಾರೆ.

ಕೇರಳದ ಇತಿಹಾಸದಲ್ಲಿ ಒಂದೇ ಪ್ರಕರಣದಲ್ಲಿ ಇಷ್ಟೊಂದು ಮಂದಿಗೆ ಮರಣದಂಡನೆ ವಿಧಿಸಿರುವುದು ಇದೇ ಮೊದಲು. 8 ಜನರ ವಿರುದ್ಧ ಕೊಲೆ ಆರೋಪ ಹಾಗೂ ಉಳಿದವರ ವಿರುದ್ಧ ಸಂಚು ರೂಪಿಸಿದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇವರೆಲ್ಲರೂ ತರಬೇತಿ ಪಡೆದ ಕೊಲೆಗಾರರಾಗಿದ್ದಾರೆ. ಬಿಜೆಪಿ ನಾಯಕನನ್ನು ಅವರ ಕುಟುಂಬದ ಮುಂದೆಯೇ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಸರ್ಕಾರಿ ವಕೀಲರು ಪ್ರತಿಪಾದಿಸಿದರು. ಇದನ್ನು ಅತ್ಯಂತ ಘೋರ ಅಪರಾಧ ಎಂದು ಪರಿಗಣಿಸಿ, ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದೆ.

ಪ್ರಕರಣದ ಹಿನ್ನೆಲೆ; ಡಿಸೆಂಬರ್ 19, 2021 ರಂದು, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರನ್ನು ಅಲಪ್ಪುಳಾದಲ್ಲಿ ಹತ್ಯೆ ಮಾಡಲಾಗಿತ್ತು. PFI ಮತ್ತು SDPI ಕಾರ್ಯಕರ್ತರು ಅವರ ಮನೆಗೆ ನುಗ್ಗಿ ಹತ್ಯೆ ಮಾಡಿದ್ದರು. ಘಟನೆ ಕುರಿತು ಪೊಲೀಸರು ತನಿಖೆ ನಡೆಸಿ ಕೆಲವರನ್ನು ಬಂಧಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 15 ಮಂದಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.

ಈ ಹಿಂದೆ ಪಾಪ್ಯುಲರ್ ಫ್ರಂಟ್ ಮತ್ತು ಎಸ್‌ಡಿಪಿಐನ 15 ಕಾರ್ಯಕರ್ತರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಆದೇಶ ನೀಡಿತ್ತು. ಶಿಕ್ಷೆಯ ಹಿನ್ನೆಲೆಯಲ್ಲಿ ಕೋರ್ಟ್​ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಚೆಂಗನ್ನೂರು ಮತ್ತು ಕಾಯಂಕುಲಂ ಡಿವೈಎಸ್ಪಿಗಳ ನೇತೃತ್ವದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಭದ್ರತೆ ಒದಗಿಸಿದ್ದರು. ಆಲಪ್ಪುಳ ಡಿವೈಎಸ್ಪಿ ಎನ್.ಆರ್. ಜಯರಾಜ್ ಪ್ರಕರಣದ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ 156 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತು.

ಸುಮಾರು ಒಂದು ಸಾವಿರ ದಾಖಲೆಗಳು ಮತ್ತು ಸುಮಾರು ನೂರು ಸಾಕ್ಷ್ಯಗಳನ್ನು ಹಾಜರುಪಡಿಸಲಾಯಿತು. ಇದರೊಂದಿಗೆ ಬೆರಳಚ್ಚುಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಗೂಗಲ್ ಮ್ಯಾಪ್‌ನ ಸಹಾಯದಿಂದ ಸಿದ್ಧಪಡಿಸಿದ ಮಾರ್ಗ ನಕ್ಷೆಗಳು ಸೇರಿದಂತೆ ವೈಜ್ಞಾನಿಕ ಪುರಾವೆಗಳು ಆರೋಪಿಗಳ ವಿರುದ್ಧ ನಿರ್ಣಾಯಕವಾಗಿವೆ. ಡಿಸೆಂಬರ್ 19, 2021 ರಂದು, ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದ ರಂಜಿತ್ ಶ್ರೀನಿವಾಸನ್ ಅವರನ್ನು ಬರ್ಬರವಾಗಿ ಕೊಲ್ಲಲಾಗಿತ್ತು.

ಆರೋಪಿಗಳು ರಂಜಿತ್‌ ಅವರನ್ನು ತಾಯಿ, ಪತ್ನಿ ಹಾಗೂ ಮಗಳ ಎದುರೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಸಹಾಯಕ್ಕೆ ದೌಡಾಯಿಸಿದ್ದ ಸ್ಥಳೀಯರು ರಂಜಿತ್ ಹಾಗೂ ಅವರ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಅನಿರೀಕ್ಷಿತ ದಾಳಿಯಾಗಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದರು. ರಂಜಿತ್ ಅವರನ್ನು ಅಲಪ್ಪುಳ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಅದೇ ವರ್ಷ ಡಿಸೆಂಬರ್ 18 ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ನಾಯಕ ಕೆಎಸ್ ಶಾನ್ ಮನೆಗೆ ಹಿಂದಿರುಗುತ್ತಿದ್ದಾಗ ಗ್ಯಾಂಗ್‌ನಿಂದ ಹತ್ಯೆಗೀಡಾಗಿದ್ದರು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರಂಜಿತ್ ಕೊಲೆಯಾಗಿರುವುದು ಅಂದು ಭಾರಿ ಸದ್ದು ಮಾಡಿತ್ತು.

ಓದಿ:ಟ್ರಕ್​ಗಳ ಮಧ್ಯೆ ಸಿಲುಕಿ ಪ್ರಾಣ ಬಿಟ್ಟ ದಂಪತಿ; ಪವಾಡದಂತೆ ಬದುಕುಳಿದ ಮಕ್ಕಳು!

Last Updated : Jan 30, 2024, 3:00 PM IST

ABOUT THE AUTHOR

...view details