ಕರ್ನಾಟಕ

karnataka

ನಾಗ್ಪುರದಿಂದ ನಾಗೌರ್‌ವರೆಗೆ ಕಾಂಗ್ರೆಸ್​ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನ - Lok Sabha Election

By ETV Bharat Karnataka Team

Published : Mar 26, 2024, 10:42 PM IST

2024ರ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಶುರುವಾಗಿದೆ. ಕಾಂಗ್ರೆಸ್​ ನೇತೃತ್ವದ 'ಇಂಡಿಯಾ' ಮೈತ್ರಿಕೂಟವು ಮಹಾರಾಷ್ಟ್ರದ ನಾಗ್ಪುರ, ರಾಜಸ್ಥಾನದ ನಾಗೌರ್‌ನಲ್ಲಿ ತನ್ನ ಒಗ್ಗಟ್ಟು ಪ್ರದರ್ಶನ ಮಾಡಿದೆ.

india-bloc-cooperation-shows-on-ground-from-nagpur-to-nagaur
ನಾಗ್ಪುರದಿಂದ ನಾಗೌರ್‌ವರೆಗೆ ಕಾಂಗ್ರೆಸ್​ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನ

ನವದೆಹಲಿ:ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆಗೆ ಬೃಹತ್ ಮೆರವಣಿಗೆಯಲ್ಲಿ ಬರುವುದು ವಾಡಿಕೆ. ಹೀಗಾಗಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗೆ ಉಮೇದುವಾರಿಕೆ ಪ್ರಕ್ರಿಯೆಯು ಚುನಾವಣಾ ಅಖಾಡದಲ್ಲಿ ಶಕ್ತಿಪ್ರದರ್ಶನವೂ ಹೌದು. ಕಾಂಗ್ರೆಸ್​ ನೇತೃತ್ವದ 'ಇಂಡಿಯಾ' ಮೈತ್ರಿಕೂಟವು ಇದನ್ನು ತನ್ನ ಒಗ್ಗಟ್ಟು ಪ್ರದರ್ಶನದ ವೇದಿಕೆಯನ್ನಾಗಿ ರೂಪಿಸಿಕೊಂಡಿದೆ.

ದೇಶದ ಎರಡು ದೂರದ ಪ್ರದೇಶಗಳಲ್ಲಿ ಮಂಗಳವಾರ ನಡೆದ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ 'ಇಂಡಿಯಾ' ಮೈತ್ರಿಕೂಟದಿಂದ ಇಂತಹದ್ದೊಂದು ಸಂದೇಶ ರವಾನೆಯಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ವಿಕಾಸ್ ಠಾಕ್ರೆ ಹಮ್ಮಿಕೊಂಡಿದ್ದ ನಾಮಪತ್ರ ಸಲ್ಲಿಕೆ ಮುನ್ನ ಮೆರವಣಿಗೆಯಲ್ಲಿ ಎನ್‌ಸಿಪಿ (ಶರದ್​ಚಂದ್ರ ಪವಾರ್ ಬಣ) ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ) ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮತ್ತೊಂದೆಡೆ, ರಾಜಸ್ಥಾನದ ನಾಗೌರ್‌ನಲ್ಲಿ ಆರ್​ಎಲ್​ಪಿ ನಾಯಕ ಹನುಮಾನ್ ಬೇನಿವಾಲ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರು ಹಾಜರಿದ್ದು ಬೆಂಬಲ ಸೂಚಿಸಿದರು.

ರಾಜಸ್ಥಾನದಲ್ಲಿ ಮೈತ್ರಿ ಭಾಗವಾಗಿ ಕಾಂಗ್ರೆಸ್ ನಗೌರ್ ಕ್ಷೇತ್ರವನ್ನು ಆರ್‌ಎಲ್‌ಪಿಗೆ ಬಿಟ್ಟುಕೊಟ್ಟಿದೆ. ಆದರೆ, ಕಾಂಗ್ರೆಸ್​ ಮತ್ತು ಎನ್​ಸಿಪಿ, ಶಿವಸೇನೆ ಸೀಟು ಹಂಚಿಕೆ ಬಗ್ಗೆ ಇನ್ನೂ ಅಂತಿಮವಾಗಿ ಘೋಷಣೆ ಮಾಡಿಲ್ಲ. ಆದರೂ, ನಾಗ್ಪುರದಲ್ಲಿ ಮೈತ್ರಿಪಕ್ಷಗಳ ನಾಯಕರು ಅತ್ಯಂತ ಯಶಸ್ವಿಯಾಗಿ ರೋಡ್ ಶೋ ನಡೆಸಿದ್ದಾರೆ. ''ನಮ್ಮ ನಾಗ್ಪುರದ ಅಭ್ಯರ್ಥಿ ವಿಕಾಸ್ ಠಾಕ್ರೆ ಅವರ ನಾಮಪತ್ರ ಸಲ್ಲಿಕೆಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು. ನಾಗ್ಪುರದಲ್ಲಿನ ಒಗ್ಗಟ್ಟು ಪ್ರದರ್ಶನವು ರಾಜ್ಯಾದ್ಯಂತ ಉತ್ತಮ ಸಂದೇಶವನ್ನು ರವಾನಿಸಿದೆ'' ಎಂದು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ರಾಮ್ ಕಿಶನ್ ಓಜಾ 'ಈಟಿವಿ ಭಾರತ್​'ಗೆ ತಿಳಿಸಿದರು.

ಲೋಕಸಭಾ ಅಭ್ಯರ್ಥಿಯಾಗಿರುವ ವಿಕಾಸ್ ಠಾಕ್ರೆ ಕಾಂಗ್ರೆಸ್‌ನ ಹಾಲಿ ಶಾಸಕರಾಗಿದ್ದಾರೆ. ಆರ್‌ಎಸ್‌ಎಸ್ ಪ್ರಧಾನ ಕಚೇರಿ ಇರುವ ಈ ನಗರದಲ್ಲಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ವಿಕಾಸ್ ಠಾಕ್ರೆ ನಾಮಪತ್ರ ಸಲ್ಲಿಸುವಾಗ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮತ್ತು ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ ಜೊತೆಗೆ ಎನ್‌ಸಿಪಿ ಬಣದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಶಿವಸೇನೆಯ ಎಂಎಲ್‌ಸಿ ದುಷ್ಯಂತ್ ಚತುರ್ವೇದಿ ಉಪಸ್ಥಿತರಿದ್ದರು.

ಮಹಾರಾಷ್ಟ್ರದಲ್ಲಿ ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆಯು ಕೆಲ ಬಿಗಿಪಟ್ಟಿನ ಕಾರಣದಿಂದ ಸೀಟು ಹಂಚಿಕೆಯ ಘೋಷಣೆ ವಿಳಂಬವಾಗುತ್ತಿದೆ ಎನ್ನಲಾಗಿದೆ. ಇದರ ನಡುವೆಯೂ 'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶಿಸಲಾಗಿದೆ. ಸಾಂಗ್ಲಿ, ಭಿವಂಡಿ ಮತ್ತು ಕೊಲ್ಲಾಪುರ ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಮೈತ್ರಿ ಮಾತುಕತೆ ಮುಗಿದಿದೆ. ಇದು ಕೂಡ ಒಂದು ಅಥವಾ ಎರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜಸ್ಥಾನದ ನಗೌರ್‌ನಲ್ಲಿ 'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನ ಮಾಡಲಾಗಿದೆ. ಆರ್​ಎಲ್​ಪಿ ನಾಯಕರಾದ ಹನುಮಾನ್ ಬೇನಿವಾಲ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪರ್ಬತ್ಸರ್‌ ಕ್ಷೇತ್ರದ ಎರಡು ಬಾರಿಯ ಕಾಂಗ್ರೆಸ್ ಶಾಸಕರಾದ ರಾಮನಿವಾಸ್ ಗವಾರಿಯಾ, ಅಭ್ಯರ್ಥಿ ಹನುಮಾನ್ ಅವರನ್ನು ಕೂರಿಸಿಕೊಂಡು ಕಾರನ್ನು ಚಲಾಯಿಸಿದರು. ಅದೇ ಕಾರಿನ ಹಿಂದಿನ ಸೀಟಿನಲ್ಲಿ ನಗೌರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಕ್ರಾನಾ ಶಾಸಕ ಝಾಕಿರ್ ಹುಸೇನ್, ಮಾಜಿ ಶಾಸಕ ಚೇತನ್ ದುಡಿ ಕುಳಿತುಕೊಂಡಿದ್ದರು. ಈ ನಾಯಕರ ಕಾರಿನ ಹಿಂದೆ ದೊಡ್ಡ ಬೆಂಗಾವಲು ಪಡೆಯೇ ಇತ್ತು.

''ಇಂಡಿಯಾ' ಮೈತ್ರಿಕೂಟದ ಈ ಒಗ್ಗಟ್ಟು ಮುಂಬರುವ ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಿದೆ'' ಎಂದು ರಾಜಸ್ಥಾನದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ವೀರೇಂದ್ರ ರಾಥೋಡ್ ವಿಶ್ವಾಸ ವ್ಯಕ್ತಪಡಿಸಿದರು. ಹನುಮಾನ್ ಬೇನಿವಾಲ್ 2019ರಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿ ಮಾಜಿ ಕಾಂಗ್ರೆಸ್ ನಾಯಕಿ ಜ್ಯೋತಿ ಮಿರ್ಧಾ ಈಗ ನಾಗೌರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ನಾಗೌರ್‌ನಲ್ಲಿ ಜಾಟ್ ಮತದಾರರು ಪ್ರಬಲವಾಗಿದ್ದು, ಇಬ್ಬರೂ ಅಭ್ಯರ್ಥಿಗಳು ಸಹ ಈ ಪ್ರಭಾವಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 2019 ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಜ್ಯೋತಿ ಅವರನ್ನು ಹನುಮಾನ್ ಬೇನಿವಾಲ್ ಸೋಲಿಸಿದ್ದರು. ಹೀಗಾಗಿ ಈ ಬಾರಿಯ ಸ್ಪರ್ಧೆ ಅತ್ಯಂತ ಕುತೂಹಲ ಕೆರಳಿಸಿದೆ.

ರಾಜಸ್ಥಾನದಲ್ಲಿ ಡುಂಗರ್‌ಪುರ-ಬನ್ಸ್ವಾರಾ ಕ್ಷೇತ್ರ ಹೊರತುಪಡಿಸಿ ಎಲ್ಲ 24 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಇದು ಬುಡಕಟ್ಟು ಸಂಘಟನೆಯಾದ ಬಿಎಪಿಯೊಂದಿಗೆ ಉದ್ದೇಶಿತ ಮೈತ್ರಿ ಅನಿಶ್ಚಿತತೆಗೆ ಕಾರಣವಾಗಿದೆ. ಉದಯಪುರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿ ತಾರಾಚಂದ್ ಮೀನಾ ಅವರನ್ನು ಹಿಂತೆಗೆದುಕೊಳ್ಳಬೇಕು. ಈ ಕ್ಷೇತ್ರವನ್ನು ತನಗೆ ಬಿಟ್ಟುಕೊಡಬೇಕು ಎಂದು ಬಿಎಪಿ ಒತ್ತಾಯಿಸುತ್ತಿದೆ. ಆದರೆ, ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಪ್ರಸ್ತಾವಕ್ಕೆ ಸಮ್ಮತಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಬಿಜೆಪಿ ಟಿಕೆಟ್​ ವಂಚಿತ ವರುಣ್​ ಗಾಂಧಿಗೆ ಕಾಂಗ್ರೆಸ್​ ಗಾಳ: ಅಧೀರ್​ ರಂಜನ್​ ಹೇಳಿದ್ದೇನು?

ABOUT THE AUTHOR

...view details