ಕರ್ನಾಟಕ

karnataka

ಹಿಮಾಚಲಪ್ರದೇಶದಲ್ಲಿ ರಾಜಕೀಯ ತಲ್ಲಣ: ಸರ್ಕಾರ ಉಳಿಸಲು ಸಿಎಂ ಸುಖು ರಾಜೀನಾಮೆ?

By ETV Bharat Karnataka Team

Published : Feb 28, 2024, 11:45 AM IST

Updated : Feb 28, 2024, 1:15 PM IST

ಹಿಮಾಚಲಪ್ರದೇಶ ರಾಜಕೀಯದಲ್ಲಿ ಭಾರೀ ತಲ್ಲಣ ಉಂಟಾಗಿದೆ. ಸಿಎಂ ಸುಖವಿಂದರ್​ ಸಿಂಗ್​ ನೇತೃತ್ವದ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಂಡಾಯ ಎದ್ದಿದ್ದಾರೆ.

ಹಿಮಾಚಲಪ್ರದೇಶದಲ್ಲಿ ರಾಜಕೀಯ ತಲ್ಲಣ
ಹಿಮಾಚಲಪ್ರದೇಶದಲ್ಲಿ ರಾಜಕೀಯ ತಲ್ಲಣ

ಶಿಮ್ಲಾ (ಹಿಮಾಚಲ ಪ್ರದೇಶ):ಹಿಮಾಚಲಪ್ರದೇಶ ರಾಜಕೀಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಶಾಸಕರ ಬಂಡಾಯ, ಸಚಿವರ ರಾಜೀನಾಮೆಯಿಂದ ಸರ್ಕಾರ ಉರುಳುವ ಭೀತಿ ಉಂಟಾಗಿದೆ. ಇದರಿಂದ ಸರ್ಕಾರ ಉಳಿಸಲು ಸಿಎಂ ಸುಖವಿಂದರ್​ ಸಿಂಗ್​ ಸುಖು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ವೀಕ್ಷಕರ ಸಭೆಯಲ್ಲಿ ಸಿಎಂ ತಾವು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆ ಚುನಾವಣೆಯ ಬಳಿಕ ಹಿಮಾಚಲಪ್ರದೇಶದಲ್ಲಿ ರಾಜಕೀಯ ವಿಪ್ಲವ ಶುರುವಾಗಿದೆ. ಮತದಾನದ ವೇಳೆ ಬಿಜೆಪಿ ಅಭ್ಯರ್ಥಿಗೆ 6 ಮಂದಿ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರು. ಸೋಲಿನ ಬೆನ್ನಲ್ಲೇ ಮಾಜಿ ಸಿಎಂ ವೀರಭದ್ರ ಸಿಂಗ್​ ಪುತ್ರ, ಸಚಿವ ವಿಕ್ರಮಾದಿತ್ಯ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇಂದಿನಿಂದ ಆರಂಭವಾಗಿರುವ ಬಜೆಟ್​ ಅಧಿವೇಶನದ ಮೊದಲ ದಿನವೇ 15 ಬಿಜೆಪಿ ಶಾಸಕರನ್ನು ಸ್ಪೀಕರ್​ ಅಮಾನತು ಮಾಡಿ ಆದೇಶಿಸಿದ್ದಾರೆ.

ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಶಾಸಕರು ಅಡ್ಡಮತದಾನ ಮಾಡಿದ್ದು, ಸರ್ಕಾರದ ಬುಡ ಅಲ್ಲಾಡಿಸಿದೆ. ಚುನಾವಣೆಯಲ್ಲಿ ಪಕ್ಷ ಸೋಲುಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಭಾರೀ ಅಸಮಾಧಾನ ಭುಗಿಲೆದ್ದಿದೆ.

ರಾಜೀನಾಮೆ ಘೋಷಿಸಿದ ಸಚಿವ:ಸಿಎಂ ಸುಖವಿಂದರ್​ ಸಿಂಗ್​ ಸುಖು ನೇತೃತ್ವದ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ಶಾಸಕರನ್ನು ಗೌರವಯುತವಾಗಿ ಕಾಣುತ್ತಿಲ್ಲ ಎಂದು ಆರೋಪಿಸಿ ಮಾಜಿ ಸಿಎಂ ವೀರಭದ್ರ ಸಿಂಗ್​ ಪುತ್ರ, ಸಚಿವ ವಿಕ್ರಮಾದಿತ್ಯ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ಇಂದು (ಬುಧವಾರ) ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ವೀರಭದ್ರ ಸಿಂಗ್​ ಅವರ ಹೆಸರಿನಲ್ಲಿ ಚುನಾವಣೆ ನಡೆದು ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ಅವರನ್ನೇ ಸರ್ಕಾರ ಮರೆತಂತಿದೆ. ಇದರಿಂದ ಜನರ ಭಾವನೆಯನ್ನು ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಸಚಿವನಾಗಿದ್ದರೂ ಹಲವು ವಿಷಯಗಳಲ್ಲಿ ಅವಮಾನ ಮಾಡಲಾಗಿದೆ. ಒಂದು ವರ್ಷ ಸಚಿವನಾಗಿದ್ದುಕೊಂಡು ಏನು ಮಾಡಲು ಸಾಧ್ಯವೋ ಅದನ್ನು ಮಾಡಿದ್ದೇನೆ. ಇನ್ನು ಮುಂದೆ ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ತಮಗೆ ಸಚಿವ ಹುದ್ದೆ ಮುಖ್ಯವಲ್ಲ, ಜನರ ಆಶೋತ್ತರಗಳನ್ನು ಈಡೇರಿಸಬೇಕಾದುದು ಸರ್ಕಾರದ ಕೆಲಸ. ಅದು ಸಾಧ್ಯವಾಗುತ್ತಿಲ್ಲ. ಒಂದು ವರ್ಷದಲ್ಲಿ ಸರ್ಕಾರದ ಆಡಳಿತ ವೈಖರಿ ಮತ್ತು ಶಾಸಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಅವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಶಾಸಕರ ಅಮಾನತು:ಇಂದಿನಿಂದ ಆರಂಭವಾಗಿರುವ ಬಜೆಟ್​ ಅಧಿವೇಶನದ ಮೊದಲ ದಿನವೇ ಎಲ್ಲ 15 ಬಿಜೆಪಿ ಶಾಸಕರನ್ನು ಅಮಾನತು ಮಾಡಿ ವಿಧಾನಸಭೆ ಸ್ಪೀಕರ್​ ಆದೇಶಿಸಿದ್ದಾರೆ. ವಿಪಕ್ಷ ನಾಯಕ ಜೈರಾಮ್ ಠಾಕೂರ್, ವಿಪಿನ್ ಸಿಂಗ್ ಪರ್ಮಾರ್, ರಣಧೀರ್ ಶರ್ಮಾ, ಲೋಕೇಂದರ್ ಕುಮಾರ್, ವಿನೋದ್ ಕುಮಾರ್, ಹನ್ಸ್ ರಾಜ್, ಜನಕ್ ರಾಜ್, ಬಲ್ಬೀರ್ ವರ್ಮಾ, ತ್ರಿಲೋಕ್ ಜಮ್ವಾಲ್, ಸುರೇಂದರ್ ಶೋರಿ, ದೀಪ್ ರಾಜ್, ಪುರಣ್ ಠಾಕೂರ್, ಇಂದರ್ ಸಿಂಗ್ ಗಾಂಧಿ, ದಿಲೀಪ್ ಠಾಕೂರ್ ಮತ್ತು ಇಂದರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ಸನದಿಂದ ಉಚ್ಚಾಟಿಸಲಾಗಿದೆ.

ರಾಜ್ಯಪಾಲರ ಭೇಟಿಯಾದ ಬಿಜೆಪಿ ಶಾಸಕರು:ಇದಕ್ಕೂ ಮೊದಲು, ಬಿಜೆಪಿ ಶಾಸಕರು ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ, ರಾಜ್ಯ ಸರ್ಕಾರವು ಶಾಸಕರ ವಿಶ್ವಾಸ ಕಳೆದುಕೊಂಡಿದ್ದು, ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿದೆ ಎಂದು ದೂರು ನೀಡಿದರು.

ಹಿಮಾಚಲಕ್ಕೆ ಡಿಕೆ ಶಿವಕುಮಾರ್​ ದೌಡು:ರಾಜ್ಯ ಸರ್ಕಾರದ ವಿರುದ್ಧ ಬಂಡಾಯದ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಉಸ್ತುವಾರಿಯಾಗಿ ಆಯ್ಕೆಯಾಗಿರುವ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್​ ಅವರು ಹಿಮಾಚಲಪ್ರದೇಶಕ್ಕೆ ತೆರಳಿದ್ದಾರೆ. ಶಾಸಕರ ಬಂಡಾಯ ಮತ್ತು ಸಚಿವರು ರಾಜೀನಾಮೆ ನೀಡಿದ್ದು, ಸರ್ಕಾರ ಡೋಲಾಯಮಾನವಾಗಿದೆ.

ಇದನ್ನೂ ಓದಿ:ಹಿಮಾಚಲ ರಾಜ್ಯಸಭೆ ಚುನಾವಣೆ ಮುಕ್ತಾಯ: 6 ರಿಂದ 9 ಶಾಸಕರಿಂದ ಅಡ್ಡ ಮತದಾನ?, ಕಾಂಗ್ರೆಸ್​ಗೆ ಆತಂಕ

Last Updated : Feb 28, 2024, 1:15 PM IST

ABOUT THE AUTHOR

...view details