ಕರ್ನಾಟಕ

karnataka

ಜಮ್ಮು ಕಾಶ್ಮೀರ ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಶಹನಾಜ್ ಗನೈ ಬಿಜೆಪಿ ಸೇರ್ಪಡೆ

By PTI

Published : Feb 12, 2024, 5:07 PM IST

Updated : Feb 12, 2024, 7:44 PM IST

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಹ್ಯಾಟ್ರಿಕ್​ ಗೆಲುವಿಗಾಗಿ ತಾನು ಬಿಜೆಪಿಗೆ ಸೇರ್ಪಡೆಗೊಂಡಿರುವುದಾಗಿ ಜಮ್ಮು ಕಾಶ್ಮೀರದ ಮಾಜಿ ಎಂಎಲ್‌ಸಿ ಡಾ.ಶಹನಾಜ್ ಗನೈ ಹೇಳಿದ್ದಾರೆ.

ಶಹನಾಜ್ ಗನೈ
ಶಹನಾಜ್ ಗನೈ

ಹೊಸದಿಲ್ಲಿ:ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‌ ನಾಯಕಿ, ಮಾಜಿ ವಿಧಾನ ಪರಿಷತ್ ಸದಸ್ಯೆ ಡಾ.ಶಹನಾಜ್ ಗನೈ ಇಂದು ಬಿಜೆಪಿ ಸೇರಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಉಧಂಪುರದ ಲೋಕಸಭಾ ಸಂಸದ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಸಮ್ಮುಖದಲ್ಲಿ ಅವರು ಪಕ್ಷ ಸೇರ್ಪಡೆಯಾದರು.

ಬಳಿಕ ಮಾತನಾಡಿದ ಗನೈ, "ಇಂದು ನನಗೆ ಬಿಜೆಪಿ ಸೇರಲು ಅವಕಾಶ ಸಿಕ್ಕಿದೆ. ಹೈಕಮಾಂಡ್‌ಗೆ ಕೃತಜ್ಞನಾಗಿದ್ದೇನೆ" ಎಂದರು. ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಕ್ಕೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಜಾರಿಗೆ ತಂಡ ಕಾರ್ಯಕ್ರಮಗಳನ್ನು ಶ್ಲಾಘಿಸುತ್ತಾ, "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಕಣಿವೆ ಜನರಿಗಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅವರು ಜಾರಿಗೆ ತಂದ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ತತ್ವದಿಂದ ಪ್ರಭಾವಿತರಾದವರಲ್ಲಿ ನಾನೂ ಕೂಡ ಒಬ್ಬಳು. ಈ ಸರ್ಕಾರವು 'ಪರಿವರ್ತನೆ'ಗೆ ಒಳಗಾಗುತ್ತಿರುವ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವನ್ನೂ ಸಶಕ್ತಗೊಳಿಸಿದೆ. ಜನರು ಕೂಡ ಮೋದಿ ಮತ್ತು ಬಿಜೆಪಿಯನ್ನು ಬಲಪಡಿಸಲು ಬಯಸುತ್ತಾರೆ" ಎಂದು ಶಹನಾಜ್ ಹೇಳಿದರು.

"ಮುಂಬರುವ ಲೋಕಸಭೆ ಚುನಾವಣೆ ಗೆದ್ದು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಅವರ ಹ್ಯಾಟ್ರಿಕ್​ ಗೆಲುವಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ" ಎಂದರು. "ಸದ್ಯ ಕಣಿವೆ ನಾಡು ಶಾಂತಿಯುತವಾಗಿದೆ. ಎಲ್ಲರೂ ಶಾಂತಿಯುತ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ ಕೇಂದ್ರ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರಗಳು. ಅವರ ದಿಟ್ಟ ನಿರ್ಧಾರದಿಂದ ಗಡಿಯಲ್ಲಿ ಎಲ್ಲವೂ ಶಾಂತವಾಗಿದೆ. ​ಗಡಿಯೊಳಗೆ ಪ್ರವೇಶಿಸಲು ಪಾಕಿಸ್ತಾನದ ಉಗ್ರರು ಧೈರ್ಯ ತೋರುತ್ತಿಲ್ಲ. ಇದು ಅವರ ಆಡಳಿತ ವೈಖರಿಗೆ ದಿಟ್ಟ ಉದಾಹರಣೆ. ಈ ಪ್ರದೇಶವು ಹಿಂದೆ ಭಯೋತ್ಪಾದಕ ಕೃತ್ಯಗಳಿಗೆ ರಾಷ್ಟ್ರವ್ಯಾಪಿ ಸುದ್ದಿ ಮಾಡುತ್ತಿತ್ತು. ಇದೀಗ ಇದೇ ಪ್ರದೇಶಕ್ಕೆ ಎರಡು ಕೋಟಿ ರೂ.ಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ದಾಖಲೆಗಳು ಮುರಿಯುತ್ತಿವೆ. ಇದು ಶಾಂತಿ ಮತ್ತು ಸಮೃದ್ಧಿಯ ಸಂಕೇತ" ಎಂದು ಶಹನಾಜ್ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು.

ಶಹನಾಜ್ ಅವರ ತಂದೆ ಗುಲಾಮ್ ಅಹ್ಮದ್ ಗನೈ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದರು. ಪ್ರಾದೇಶಿಕ ರಾಜಕೀಯ ಪಕ್ಷ ನ್ಯಾಷನಲ್ ಕಾನ್ಫರೆನ್ಸ್‌ನೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದ ಶಹನಾಜ್, 2013ರಲ್ಲಿ ಎಂಎಲ್‌ಸಿ ಆಗಿದ್ದರು. ಇದೀಗ ಆ ಪಕ್ಷದಿಂದ ಹೊರ ಬಂದಿದ್ದಾರೆ. 2022ರಲ್ಲಿ ಉತ್ತರ ಕಾಶ್ಮೀರದ ಯುವ ಸಾಮಾಜಿಕ ಕಾರ್ಯಕರ್ತ ಮತ್ತು ರಾಜಕೀಯ ಕಾರ್ಯಕರ್ತ ಮಿರ್ ಜುನೈದ್ ಅವರನ್ನು ವಿವಾಹವಾದರು. ಎನ್‌ಜಿಒ ತೆರೆದಿರುವ ಶಹನಾಜ್, ಭೂಕಂಪದಿಂದ ತತ್ತರಿಸಿದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಪದಾರ್ಪಣೆಗೂ ಮುನ್ನ ಸರ್ಕಾರಿ ಅಧಿಕಾರಿಯಾಗಿದ್ದರು.

ಇದನ್ನೂ ಓದಿ:ಕಾಂಗ್ರೆಸ್ ತೊರೆದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್

Last Updated : Feb 12, 2024, 7:44 PM IST

ABOUT THE AUTHOR

...view details