ಕರ್ನಾಟಕ

karnataka

'ಲೂಟಿ ಮಾಡಿದವರನ್ನು ಜೈಲಿಗೆ ಕಳುಹಿಸುವುದು ಮೋದಿ ಗ್ಯಾರಂಟಿ'

By ANI

Published : Mar 18, 2024, 2:52 PM IST

Updated : Mar 18, 2024, 3:59 PM IST

ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟ ಮತ್ತು ವಂಶ ರಾಜಕಾರಣದ ಬಗ್ಗೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಜಗ್ತಿಯಲ್​, ತೆಲಂಗಾಣ: ಲೂಟಿ ಮಾಡಿದವರು ಯಾರೇ ಆಗಿರಲಿ, ಅವರನ್ನು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಜಗ್ತಿಯಾಲ್​​ನಲ್ಲಿ ಬೃಹತ್​ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಷ್ಟ ಮತ್ತು ವಂಶ ರಾಜಕಾರಣದ ಬಗ್ಗೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಲೂಟಿ ಮಾಡಿದವರನ್ನು ಜೈಲಿಗೆ ಕಳಿಸುವುದು ಮೋದಿಯ ಗ್ಯಾರಂಟಿ. ತೆಲಂಗಾಣದಲ್ಲಿ ಬಿಆರ್‌ಎಸ್ ರಾಜ್ಯದ ಜನರನ್ನು ದೋಚಿದರೆ, ಕಾಂಗ್ರೆಸ್ ಅದರ ರಕ್ಷಣೆಗೆ ನಿಂತಿದೆ. ರಾಜ್ಯದಲ್ಲಿ ಕೇಳಿ ಬಂದ ಯಾವುದೇ ಭ್ರಷ್ಟಾಚಾರ, ದರೋಡೆ ಪ್ರಕರಣ ಗಮನಿಸಿದರೂ, ಅದರ ಹಿಂದೆ ಕೆಲ ಪಕ್ಷಗಳ ಪಾಲು ಇರುವುದು ಗೊತ್ತಾಗಿದೆ. ದೆಹಲಿಯ ಮದ್ಯ ನೀತಿ ಪ್ರಕರಣದಲ್ಲಿ ಬಿಆರ್‌ಎಸ್ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಪ್ರಶ್ನಿಸಬೇಕಾದ ಕಾಂಗ್ರೆಸ್​ ಕೈಕಟ್ಟಿ ಕುಳಿತಿದೆ. ಉಭಯ ಪಕ್ಷಗಳು ಪರಸ್ಪರ ರಕ್ಷಣೆಯಲ್ಲಿ ಕುಳಿತಿವೆ. ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಬಿಆರ್​ಎಸ್​ ರಾಜ್ಯದ ಜನತೆಯನ್ನು ಲೂಟಿ ಮಾಡಿತು. ಈಗ ಕಾಂಗ್ರೆಸ್​ ತೆಲಂಗಾಣವನ್ನು ಎಟಿಎಂ ಆಗಿ ಮಾಡಿಕೊಂಡಿದೆ.

ಈ ರಾಜ್ಯದ ಹಣ ಈಗ ದೆಹಲಿ ತಲುಪುತ್ತಿದ್ದು, ಒಬ್ಬ ಲೂಟಿಕೋರನ ವಿರುದ್ಧ ಮತ್ತೊಂದು ಲೂಟಿಕೋರ ಹೋರಾಡಲು ಸಾಧ್ಯವಿಲ್ಲ. ಬಿಆರ್‌ಎಸ್​ನ ಭ್ರಷ್ಟಾಚಾರದ ಬಗ್ಗೆ ಸಿಎಂ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಮೌನ ವಹಿಸಿರುವುದು ಜನ ಗಮನಿಸುತ್ತಿದ್ದಾರೆ. ಲೂಟಿಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು ಮೋದಿ ಗ್ಯಾರಂಟಿ ಎಂದರು.

ಪರಿವಾರವಾದಿ ಪಕ್ಷಗಳು ಕೇವಲ ಸರ್ಕಾರ ರಚನೆ ಮಾಡಲು ಬಯಸುತ್ತಿರುವುದು ಅದರ ಲಾಭಕ್ಕಾಗಿಯೇ ಹೊರತು ಜನರನ್ನು ಉದ್ಧಾರ ಮಾಡಲು ಅಲ್ಲ. 2ಜಿ, ನ್ಯಾಷನಲ್ ಹೆರಾಲ್ಡ್ ಹಗರಣ, ಬೋಫೋರ್ಸ್ ಹಗರಣ, ಮೇವು ಹಗರಣ. ಪ್ರತಿಯೊಂದು ದೊಡ್ಡ ಹಗರಣದ ಹಿಂದೆಯೂ ಪರಿವಾರವಾದಿ ಪಕ್ಷ ಅಡಗಿದೆ ಎಂದು ಮೋದಿ ಹೇಳಿದರು.

ತಮ್ಮ ದಾಳಿ ಮುಂದುವರಿಸಿದ ಅವರು, ಬಿಆರ್‌ಎಸ್ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರುವುದನ್ನು ತೆಲಂಗಾಣ ಈಗ ಗಮನಿಸುತ್ತಿದೆ. ಉಭಯ ಪಕ್ಷಗಳು ಭ್ರಷ್ಟಾಚಾರ, ದರೋಡೆಯಂತಹ ಪ್ರಕರಣವನ್ನು ಯಾವತ್ತೂ ಖಂಡಿಸಿಲ್ಲ. ಬಿಆರ್‌ಎಸ್ ಹಾದಿಯಲ್ಲಿ ತೆರಳುತ್ತಿರುವ ಕಾಂಗ್ರೆಸ್,​ ರಾಜ್ಯದ ಜನರ ಕನಸುಗಳನ್ನು ನುಚ್ಚುನೂರು ಮಾಡಿದೆ. ಜನರ ಕಷ್ಟಪಟ್ಟು ದುಡಿದ ಹಣದಲ್ಲಿ ರಾಜ್ಯಭಾರ ನಡೆಸುತ್ತಿದೆ. ಒಂದು ಕಾಲದಲ್ಲಿ ಬಿಆರ್​ಎಸ್​ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರೆಸುತ್ತಿದ್ದ ಕಾಂಗ್ರೆಸ್, ಈಗ ಅದಕ್ಕೆ ಬೆಂಬಲವಾಗಿ ನಿಂತಿದೆ. ಈ ರೀತಿಯ ಸರ್ಕಾರ ಬಹಳ ಉಳಿಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ನಾವು ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದಿದ್ದರೆ, ರಾಜ್ಯ ಈಗಾಗಲೇ ಅಭಿವೃದ್ಧಿಯಾಗುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆ ವೇಳೆ ನಿಮ್ಮ ಆಕ್ರೋಶದ ಮತಗಳು ಬಿಆರ್​ಎಸ್​ ಅನ್ನು ಹಿಂದಕ್ಕೆ ಕಳುಹಿಸಿದೆ. ಆದರೆ, ನಿಮ್ಮ ಆಶೋತ್ತರಗಳು ಈಡೇರಿಲ್ಲ. ಅದಕ್ಕಾಗಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಮೇಲೆ ನಂಬಿಕೆ ಇಡುವಂತೆ ಪ್ರಧಾನಿ ಮನವಿ ಮಾಡಿದರು.

ಇದನ್ನೂ ಓದಿ:ಚುನಾವಣಾ ಬಾಂಡ್‌ ಕುರಿತ ಎಲ್ಲ ಮಾಹಿತಿಯನ್ನು ಗುರುವಾರದೊಳಗೆ ಬಹಿರಂಗಪಡಿಸಿ: SBIಗೆ ಸುಪ್ರೀಂ ಕೋರ್ಟ್ ತಾಕೀತು

Last Updated :Mar 18, 2024, 3:59 PM IST

ABOUT THE AUTHOR

...view details