ಕರ್ನಾಟಕ

karnataka

ಚುನಾವಣಾ ಪ್ರಚಾರದ ನಡುವೆ ಅಂಗಡಿಯಲ್ಲಿ ಜಾಮೂನು, ಮೈಸೂರು ಪಾಕ್​ ಖರೀದಿಸಿದ ರಾಹುಲ್​ ಗಾಂಧಿ - Rahul Gandhi visit sweet shop

By ETV Bharat Karnataka Team

Published : Apr 13, 2024, 10:06 AM IST

Updated : Apr 13, 2024, 10:27 AM IST

ಸಿಬಿಐ, ಇಡಿ ಅಥವಾ ಆದಾಯ ತೆರಿಗೆ (ಐಟಿ) ಇಲಾಖೆಯಿಂದ ತನಿಖೆ ಎದುರಿಸುತ್ತಿರುವ ಕಂಪನಿಗಳು ಬಿಜೆಪಿಗೆ ಭಾರಿ ಮೊತ್ತದ ದೇಣಿಗೆ ನೀಡಿವೆ. ಅವರ ವಿರುದ್ಧದ ಪ್ರಕರಣಗಳನ್ನು ಮುಚ್ಚಿ ಹಾಕಲಾಗಿದೆ. ಇದು ಸುಲಿಗೆಯಲ್ಲದೆ ಬೇರೇನೂ ಅಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಆರೋಪಿಸಿದರು.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

ಕೊಯಮತ್ತೂರು (ತಮಿಳುನಾಡು):ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಹುಲ್​ ಗಾಂಧಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ರ‍್ಯಾಲಿಗಳ ನಡುವೆ ತುಸು ವಿರಾಮ ಪಡೆದ ಕಾಂಗ್ರೆಸ್ ಸಂಸದ ಸಿಂಗನಲ್ಲೂರಿನ ಸಿಹಿತಿಂಡಿ ಅಂಗಡಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿದ್ದಾರೆ.

ತಮ್ಮ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಜೊತೆಗೆ ಅಂಗಡಿಗೆ ಬಂದ ರಾಹುಲ್​ ಗಾಂಧಿ, ತಮ್ಮ ಇಷ್ಟದ ಸಿಹಿಯಾದ ಜಾಮೂನು ಮತ್ತು ಮೈಸೂರು ಪಾಕ್​ ಅನ್ನು ಖರೀದಿಸಿದ್ದಾರೆ. ಬಳಿಕ ಅಲ್ಲಿದ್ದ ಸಿಬ್ಬಂದಿ ಜೊತೆಗೆ ಫೋಟೋಗೂ ಪೋಸ್​ ನೀಡಿದ್ದಾರೆ. ಕಾಂಗ್ರೆಸ್ ನಾಯಕನ ಹಠಾತ್ ಭೇಟಿಯಿಂದ ಅಂಗಡಿಯ ಮಾಲೀಕರು, ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸಿಹಿ ಅಂಗಡಿ ಮಾಲೀಕ ಬಾಬು, ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಅವರು ನಮ್ಮ ಅಂಗಡಿಗೆ ಬಂದಾಗ ಆಶ್ಚರ್ಯವಾಯಿತು. ಕೊಯಮತ್ತೂರು ಸಭೆಯಲ್ಲಿ ಅವರು ಭಾಗಿಯಾಗಿದ್ದರು. ಇದೇ ಸಮಯದಲ್ಲಿ ಅವರು ಇಲ್ಲಿಗೆ ಬಂದು, 1 ಕೆಜಿ ಜಾಮೂನು, ಮೈಸೂರು ಪಾಕ್ ಸಿಹಿಯನ್ನು ಖರೀದಿಸಿದರು. ಇಲ್ಲಿದ್ದ ಇತರ ಸಿಹಿತಿಂಡಿಗಳ ರುಚಿ ನೋಡಿದರು. ಇದು ನಮಗೆ ಮತ್ತು ಸಿಬ್ಬಂದಿಗೆ ಸಂತಸ ತಂದಿತು. ಅರ್ಧಗಂಟೆ ಕಾಲ ಅವರು ನಮ್ಮೊಂದಿಗೆ ಬೆರೆತರು. ಖರೀದಿಸಿದ ಸಿಹಿಗೆ ಸಂಪೂರ್ಣ ಹಣವನ್ನು ಪಾವತಿಸಿದರು ಎಂದು ತಿಳಿಸಿದರು.

ಇನ್ನೂ ಸಿಹಿ ಅಂಗಡಿಗೆ ರಾಹುಲ್​ ಭೇಟಿ ನೀಡಿದ ಸಿಸಿಟಿವಿ ದೃಶ್ಯವುಳ್ಳ ವಿಡಿಯೋವನ್ನು ಕಾಂಗ್ರೆಸ್​ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ರಾಹುಲ್ ಗಾಂಧಿ ಅವರು ಸಿಎಂ ಎಂಕೆ ಸ್ಟಾಲಿನ್​ ಅವರಿಗೆ ಪ್ರಸಿದ್ಧ ಮೈಸೂರು ಪಾಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರು ತಮಿಳುನಾಡಿನ ಜನರೊಂದಿಗೆ ಹಂಚಿಕೊಳ್ಳುವ ಪ್ರೀತಿಯ ದ್ಯೋತಕ ಇದು ಎಂದು ಬಣ್ಣಿಸಲಾಗಿದೆ.

ಕೇಂದ್ರದ ವಿರುದ್ಧ ವಾಗ್ದಾಳಿ:ಇದಕ್ಕೂ ಮೊದಲು ಕೊಯಮತ್ತೂರಿನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯು ಜಗತ್ತಿನಲ್ಲಿಯೇ ಅತಿದೊಡ್ಡ ಭ್ರಷ್ಟಾಚಾರ ಸಂಕೋಲೆಯಾಗಿದೆ'' ಎಂದು ಆರೋಪಿಸಿದರು.

"ಚುನಾವಣಾ ಬಾಂಡ್ ದೊಡ್ಡ ಹಗರಣ. ಬಿಜೆಪಿ ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಿಸುವ ವಾಗ್ದಾನ ಮಾಡಿತ್ತು. ಆದರೆ, ಅವರೇ ಈ ಯೋಜನೆಯನ್ನು ಜಾರಿಗೆ ತಂದಿದ್ದು ಖೇದಕರ. ಚುನಾವಣಾ ಬಾಂಡ್ ಯೋಜನೆಯಡಿ ಯಾರು, ಯಾವ ಪಕ್ಷಕ್ಕೆ, ಎಷ್ಟು ಹಣ ನೀಡಿದರು ಎಂಬ ಬಗ್ಗೆ ಮಾಹಿತಿ ತಿಳಿಯುವುದಿಲ್ಲ. ಇದು ಗೌಪ್ಯ ಭ್ರಷ್ಟಾಚಾರವಾಗಿದೆ. ಹೀಗಾಗಿಯೇ ಈ ಯೋಜನೆಯನ್ನು ಸುಪ್ರೀಂಕೋರ್ಟ್​ ಕಾನೂನುಬಾಹಿರ ಎಂದು ಘೋಷಿಸಿ, ದಾನಿಗಳ ಹೆಸರನ್ನು ಬಹಿರಂಗ ಮಾಡುವಂತೆ ನಿರ್ದೇಶಿಸಿದೆ'' ಎಂದು ಅವರು ಹೇಳಿದರು.

ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಸಾರ್ವತ್ರಿಕ ಚುನಾವಣೆಯ 1 ನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಿಗದಿಯಾಗಿದೆ.

ಇದನ್ನೂ ಓದಿ:ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರದಲ್ಲಿ ಬೃಹತ್​ ಕಾಂಗ್ರೆಸ್ ಸಮಾವೇಶ: ಬಿಜೆಪಿ ನಾಯಕರಿಗೆ ಟಕ್ಕರ್​ - congress convention

Last Updated : Apr 13, 2024, 10:27 AM IST

ABOUT THE AUTHOR

...view details