ಕರ್ನಾಟಕ

karnataka

ಅಗ್ನಿಪಥ್‌ನಿಂದ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ, ಸಶಸ್ತ್ರ ಪಡೆಗಳ ನೇಮಕಾತಿಗೆ ಅಡ್ಡಿ: ಕಾಂಗ್ರೆಸ್

By PTI

Published : Mar 4, 2024, 7:13 AM IST

ಅಗ್ನಿಪಥ್ ಯೋಜನೆಯಿಂದ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಾಗಿದೆ. ಇದರ ಜೊತೆಗೆ ಸಶಸ್ತ್ರ ಪಡೆಗಳ ನೇಮಕಾತಿಗೂ ತೀವ್ರ ಅಡ್ಡಿ ಉಂಟಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅಗ್ನಿಪಥ್ ಯೋಜನೆ  Agnipath scheme  national security  Armed forces recruitment  ಕಾಂಗ್ರೆಸ್ ಗಂಭೀರ ಆರೋಪ
ಅಗ್ನಿಪಥ್ ಯೋಜನೆಯಿಂದ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ, ಸಶಸ್ತ್ರ ಪಡೆಗಳ ನೇಮಕಾತಿಗೆ ತೀವ್ರ ಅಡ್ಡಿ: ಕಾಂಗ್ರೆಸ್ ಆರೋಪ

ನವದೆಹಲಿ:ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಮತ್ತೆ ಟೀಕಿಸಿದೆ. ಈ ಯೋಜನೆಯ ಮೂಲಕ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಸಶಸ್ತ್ರ ಪಡೆಗಳ ನೇಮಕಾತಿ ಪ್ರಕ್ರಿಯೆಗಳಿಗೂ ತೀವ್ರವಾಗಿ ಅಡ್ಡಿಯಾಗಿದೆ ಎಂದು ಗಂಭೀರ ಆರೋಪ ಮಾಡಿದೆ.

ಮಧ್ಯಪ್ರದೇಶದಲ್ಲಿ ಭಾನುವಾರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಸೈನಿಕರು ಮತ್ತು ಯುವಕರೊಂದಿಗೆ ಸಂವಾದ ನಡೆಸಿದ್ದಾರೆ.

ಜೈರಾಮ್ ರಮೇಶ್ ಹೇಳಿಕೆ:ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ''ಭಾರತ್ ಜೋಡೋ ನ್ಯಾಯ್ ಯಾತ್ರೆಯ 50ನೇ ದಿನದ ಬೆಳಗ್ಗೆ ರಾಹುಲ್ ಗಾಂಧಿ ಮೂರು ಸಮುದಾಯಗಳೊಂದಿಗೆ 40 ನಿಮಿಷ ಮಾತುಕತೆ ನಡೆಸಿದ್ದಾರೆ. ಅಗ್ನಿಪಥ್ ಯೋಜನೆಯು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿದೆ ಮತ್ತು ಭಾರತದಲ್ಲಿ ಸಶಸ್ತ್ರ ಪಡೆಗಳ ನೇಮಕಾತಿ ಪ್ರಕ್ರಿಯೆಗಳಿಗೆ ತುಂಬಾ ಅಡ್ಡಿಯಾಗಿದೆ. ಈ ಯೋಜನೆಯು ಸಶಸ್ತ್ರ ಪಡೆಗಳ ಧೈರ್ಯ ಕುಗ್ಗಿಸುತ್ತಿದೆ ಮತ್ತು ಕೇವಲ ಆರು ತಿಂಗಳಲ್ಲಿ ನಮ್ಮ ಸೈನಿಕರಿಗೆ ತರಬೇತಿ ನೀಡುವುದರೊಂದಿಗೆ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆ ಎಂಬುದನ್ನು ಮಾಜಿ ಸೈನಿಕರು ಗಮನಿಸಿದ್ದಾರೆ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

"ಸಂಭವನೀಯ ಅಗ್ನಿವೀರರಾಗಿ ನೇಮಕಗೊಂಡವರು ಈ ಯೋಜನೆಯಿಂದ ತಮ್ಮ ಪ್ರತಿಷ್ಠೆ ಮತ್ತು ಆರ್ಥಿಕ ಭದ್ರತೆಯನ್ನು ಕಳೆದುಕೊಳ್ಳುವ ಮೂಲಕ ಅತೃಪ್ತರಾಗಿದ್ದಾರೆ. ಅಂತಿಮವಾಗಿ, ಸಶಸ್ತ್ರ ಪಡೆಗಳಿಗೆ ನಿಯಮಿತ ನೇಮಕಾತಿಗಾಗಿ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಸುಮಾರು 1.5 ಲಕ್ಷ ಯುವಕರ ನೇಮಕಾತಿಗೆ ಅಗ್ನಿಪಥ್ ಯೋಜನೆ ಅಡ್ಡಿ ಉಂಟುಮಾಡಿದೆ. ಅಗ್ನಿಪಥ್ ಎಲ್ಲಾ ರೀತಿಯಲ್ಲೂ ಹಾನಿಕಾರಕವಾಗಿದೆ. ನಮ್ಮ ಸೈನಿಕರಿಗೆ ಮತ್ತು ನಮ್ಮ ಯುವಕರಿಗೆ ಅನ್ಯಾಯವಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಮಾಜಿ ಸೈನಿಕರು ಮತ್ತು ಅಗ್ನಿವೀರ್ ನೇಮಕಗೊಂಡವರು ಹಲವಾರು ತಿಂಗಳುಗಳಿಂದ ಮೋದಿ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಹಲವು ದಿನಗಳವರೆಗೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಬಿಹಾರದ ಚಂಪಾರಣ್‌ನಿಂದ ನವದೆಹಲಿಗೆ ಪಾದಯಾತ್ರೆ ನಡೆಸಿದ್ದಾರೆ'' ಎಂದ ಅವರು, "ಯೋಜನೆಯನ್ನು ಯಾವುದೇ ಚರ್ಚೆ ಮತ್ತು ಸಮಾಲೋಚನೆಯಿಲ್ಲದೆ ಜಾರಿಗೊಳಿಸಲಾಗಿದೆ ಎಂದು ಮಾಜಿ ಸೇನಾ ಸಿಬ್ಬಂದಿ ಹೇಳಿದ್ದಾರೆ. ಯೋಜನೆಗೆ ಸಮಗ್ರ ಪರಿಶೀಲನೆ ಮತ್ತು ಸೂಕ್ತ ತಿದ್ದುಪಡಿಗಳನ್ನು ಮಾಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ'' ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

ಅಗ್ನಿಪಥ್‌ ಯೋಜನೆ ಕುರಿತು ಸಂಕ್ಷಿಪ್ತ ಮಾಹಿತಿ: ಅಗ್ನಿಪಥ್ ಯೋಜನೆ ಅಡಿಯಲ್ಲಿ 17.5 ವರ್ಷದ ಮತ್ತು 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳವರೆಗೆ ನೇಮಿಸಿಕೊಳ್ಳಲಾಗುತ್ತದೆ. ಹೀಗೆ ನೇಮಕಗೊಂಡ ಯುವಕರಲ್ಲಿ ಶೇಕಡಾ 25ರಷ್ಟು ಮಂದಿಯನ್ನು 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆಗೆ 'ಇಂಡಿಯಾ' ಮೈತ್ರಿಕೂಟದ ರಣ ಕಹಳೆ: ಬಿಹಾರದಲ್ಲಿ ಶಕ್ತಿ ಪ್ರದರ್ಶನ

ABOUT THE AUTHOR

...view details