ಕರ್ನಾಟಕ

karnataka

ಕಲುಷಿತ ನೀರು ಸೇವನೆ.. ಮೃತರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ: ಶಾಸಕ ನಾಗನಗೌಡ ಕಂದಕೂರ

By

Published : Feb 25, 2023, 8:55 AM IST

ಕಳೆದ ವಾರ ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಜನರು ವಾಂತಿ, ಭೇದಿಯಿಂದ ಅನಾರೋಗ್ಯಕ್ಕೀಡಾಗಿದ್ದರು.

MLA Naganagowda Kandakura
ಶಾಸಕ ನಾಗನಗೌಡ ಕಂದಕೂರ

ಗುರುಮಠಕಲ್(ಯಾದಗಿರಿ):ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟ 3 ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡಲು ಆದೇಶಿಸಿದೆ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದ್ದಾರೆ. ಕಳೆದ ವಾರ ಜಿಲ್ಲೆಯ ಗುರಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಜನರು ವಾಂತಿ, ಭೇದಿಯಿಂದ ಅನಾರೋಗ್ಯಕ್ಕೀಡಾಗಿದ್ದರು. ಈ ಪೈಕಿ ಗ್ರಾಮದ ಸಾವಿತ್ರಿ (35), ನರಸಮ್ಮ (70) ಹಾಗೂ ಸಾಯಮ್ಮ (75) ಸಾವಿಗೀಡಾಗಿದ್ದರು.

ಪ್ರಕರಣದ ಬಗ್ಗೆ ಅಧಿವೇಶನದ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಸರ್ಕಾರದ ಗಮನ ಸೆಳೆದು ಮೃತ ಕುಟುಂಬಗಳಿಗೆ 25 ಲಕ್ಷ ರೂ.ನೀಡುವಂತೆ ಆಗ್ರಹಿಸಲಾಗಿತ್ತು. ಆದರೆ ಸರ್ಕಾರ ಮೃತ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದೆ. ಘಟನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ ಸರ್ಕಾರ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೂವರು ಸಾವು:ಯಾದಗಿರಿ ಜಿಲ್ಲೆಯ ಗಡಿ ಭಾಗದ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಜನರಿಗೆ ವಾಂತಿ, ಬೇಧಿ ಉಂಟಾಗಿ ಮೂವರು ಸಾವನಪ್ಪಿದ್ದರು. 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿತ್ರಮ್ಮ (35), ಸಾಯಮ್ಮ (70), ನರಸಮ್ಮ ಅನಪರ (71) ಮೃತಪಟ್ಟವರು. ಜೆಡಿಎಸ್ ನಿಯೋಜಿತ ಅಭ್ಯರ್ಥಿ ಶರಣಗೌಡ ಮೃತ ಕುಟುಂಬಗಳಿಗೆ ಅವರು ವೈಯುಕ್ತಿಕವಾಗಿ ತಲಾ 50 ಸಾವಿರ ರು. ಪರಿಹಾರಧನ ನೀಡಿ ಸಾಂತ್ವನ ಹೇಳಿದ್ದರು. ಜಿಲ್ಲಾಧಿಕಾರಿ ಸ್ನೇಹಲ್ ಆರ್.ಮಾತನಾಡಿ, ಕಲುಷಿತ ನೀರಿನಿಂದ ಘಟನೆ ಜರುಗಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಈಗಾಗಲೇ ಚರಂಡಿ ಹಾಗೂ ಪೆಪ್‌ಲೈನ್ ಕಾಮಗಾರಿಯನ್ನು ವೀಕ್ಷಿಸಲಾಗಿದೆ. ಸ್ವಚ್ಛತೆ ಕಾಪಾಡಲು ಕ್ರಮ ವಹಿಸಲು ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಯಾದಗಿರಿ: ಕಲುಷಿತ ನೀರು ಸೇವಿಸಿ ಮೂವರು ಸಾವು

60ಕ್ಕೂ ಹೆಚ್ಚು ಜನರು ಅಸ್ವಸ್ಥ:ಗುರುಮಠಕಲ್‌ ತಾಲೂಕಿನ ಅನಪುರ ಗ್ರಾಮದ ಜನರಿಗೆ ಪೂರೈಕೆ ಮಾಡಬೇಕಾದ ನೀರಿನ ಪೈಪ್​ನಲ್ಲಿ ಕಲುಷಿತ ನೀರು ಸೇರ್ಪಡೆಯಾಗಿದೆ. ಪರಿಣಾಮ ನೀರು ಸೇವಿಸಿ ವಾಂತಿ ಭೇದಿಯಿಂದ ಮೂವರು ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 80 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, 60 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡವರು ವಿವಿಧ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣಮುಖರಾಗಿ ಊರು ಸೇರಿದ್ದಾರೆ.

ಇದನ್ನೂ ಓದಿ:ಕಲುಷಿತ ನೀರು ಸೇವನೆ: ಇಬ್ಬರು ಮೃತ, 34ಕ್ಕೂ ಹೆಚ್ಚು ಜನರು ಅಸ್ವಸ್ಥ

ಗ್ರಾಮ ದೇವತೆಯ ಶಾಪ?:ಅನಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಎಸ್ಸಿ ಬಡಾವಣೆಯಲ್ಲಿ ಕರೆಮ್ಮಾ ದೇವಿಯ ಚಿಕ್ಕದಾದ ಮಂದಿರವಿತ್ತು. ಭಕ್ತರು ದೇವಿಯ ಪೂಜೆ ಪುನಷ್ಕಾರ ಮಾಡಿ ಹರಕೆ ತಿರಿಸಿ ತಮ್ಮ ಕಷ್ಟದಿಂದ ಪಾರಾಗುತ್ತಿದ್ದರು. ಆದರೆ ಈಗ ಮಂದಿರ ಕೆಡವಲಾಗಿದೆ. ಸ್ವಲ್ಪ ದೊಡ್ಡದಾಗಿ ದೇವಿಯ ಮಂದಿರ ನಿರ್ಮಾಣ ಮಾಡಲು ಗ್ರಾಮಸ್ಥರು ನಿರ್ಧಾರ ಮಾಡಿ, ಕಳೆದ ಜನವರಿ 22 ರಂದು ಕರೆಮ್ಮ ದೇವಸ್ಥಾನ ಕೆಡವಿದ್ದರಂತೆ. ಸದ್ಯ ದೇವಿಯ ಮೂರ್ತಿಯನ್ನು ಗ್ರಾಮದ ಕರೆಪ್ಪ ತಾತಾ ಮಠದ ಜಾಗದ ಕೋಣೆಯಲ್ಲಿ ಬೀಗ ಹಾಕಿ ಇಡಲಾಗಿದೆ. ಆದರೆ, ಬೇಗ ದೇವಸ್ಥಾನ ನಿರ್ಮಾಣ ಮಾಡದೇ ವಿಳಂಬ ಮಾಡುವ ಜೊತೆ ಕೋಣೆಯಲ್ಲಿದ್ದ ದೇವಿಯ ಮೂರ್ತಿಗೆ ಯಾರು ಪೂಜೆ ಮಾಡಿ ದೇವಿಯ ಮೇಲೆ ಭಕ್ತಿ ತೋರುವುದನ್ನು ಮರೆತು ಬಿಟ್ಟಿದ್ರು. ಹೀಗಾಗಿ, ಕರೆಮ್ಮ ದೇವಿಯ ಶಾಪದಿಂದಲೇ ಅನಪುರ ಊರಲ್ಲಿ ವಾಂತಿ ಭೇದಿ ಉಲ್ಬಣಗೊಂಡಿದೆ ಎಂದು ಗ್ರಾಮದ ವಿವಿಧೆಡೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಅನಪುರ ಗ್ರಾಮಸ್ಥರಲ್ಲಿ ವಾಂತಿ ಭೇದಿ - ತಟ್ಟಿದೆಯೇ ಗ್ರಾಮ ದೇವತೆಯ ಶಾಪ?

ABOUT THE AUTHOR

...view details