ಕರ್ನಾಟಕ

karnataka

ಅನ್ಯ ಕೋಮಿನ ಯುವತಿ ಜೊತೆ ಲವ್: ಯುವಕನ ಕೊಂದು ಬಾವಿಗೆ ಎಸೆದ್ರು!

By

Published : Oct 24, 2021, 7:42 PM IST

ಅನ್ಯ ಕೋಮಿನ ಹುಡುಗಿ ಪ್ರೀತಿಸಿದ್ದಕ್ಕೆ ಕೊಲೆ

ಪ್ರೀತಿಸುತ್ತಿದ್ದ ಅನ್ಯಕೋಮಿನ ಯುವಕನನ್ನು ಯುವತಿಯ ಪೋಷಕರು ಕೊಲೆ ಮಾಡಿರುವ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ: ಅನ್ಯ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ತಪ್ಪಿಗೆ ಯುವಕನನ್ನು ಯುವತಿಯ ಸಂಬಂಧಿಕರು ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಕೊಲೆಯಾದವನನ್ನು ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ತೋಟದ ವಸ್ತಿಯ ನಿವಾಸಿ ರವಿ ನಿಂಬರಗಿ (32) ಎಂದು ಗುರುತಿಸಲಾಗಿದೆ. ಇತನನ್ನು ಕೊಲೆ ಮಾಡಿ, ನಂತರ ಬಟ್ಟೆಯಿಂದ ಕೈ ಕಾಲು ಕಟ್ಟಿ ಗ್ರಾಮದ ಮುನೀರ ಅಹಮ್ಮದ ಅತ್ತಾರ ಎಂಬವರ ಜಮೀನಿನಲ್ಲಿದ್ದ ಬಾವಿಯಲ್ಲಿ ಎಸೆದು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಕೊಲೆಯಾದ ರವಿ ನಿಂಬರಗಿಯ ಪೋಷಕರು ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಆತನ ಶವವಾಗಲಿ, ಆತನಾಗಲಿ ಪತ್ತೆಯಾಗಿರಲಿಲ್ಲ. ಈ ಪ್ರಕರಣ ಸಂಬಂಧ ಯುವತಿಯ ಸಂಬಂಧಿಕರಾದ ಇಸ್ಲಾಯಿಲ್ ತಾಂಬೆ, ಆಶಪಾಕ್​​ ತಾಂಬೆ, ಇಬ್ರಾಹಿಂ ತಾಂಬೆ, ಇಮಾಮಸಾಬ್​​ ತಾಂಬೆ, ಬಂದೇನಮಾಜ್ ಗೋಠೆ, ಮೈಬೂಬಸಾಬಾಲಚೆರಿ ಹಾಗೂ ಚಾಂದಸಾಬ ತಾಂಬೆ ಸೇರಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರೇಮ ಕಹಾನಿ:

ಬಳಗಾನೂರ ಗ್ರಾಮದ ರವಿ ನಿಂಬರಗಿ ಹಾಗೂ ಅದೇ ಗ್ರಾಮದ ಯುವತಿ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದು ಎರಡೂ ಕುಟುಂಬದವರಿಗೆ ಗೊತ್ತಿತ್ತು. ಈ ಕುರಿತು ಯುವತಿ ಕುಟುಂಬದವರು ಯುವಕನಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಸಹ, ಪ್ರೀತಿ ಮುಂದುವರಿದಿತ್ತು.

ಇದರಿಂದ ಕೋಪಗೊಂಡಿದ್ದ ಯುವತಿಯ ಕುಟುಂಬಸ್ಥರು ಅ‌. 21ರಂದು ಸಂಜೆ ಯುವಕ ಬಳಗಾನೂರಲ್ಲಿ ಸಾಮಗ್ರಿ ಖರೀದಿಸಿ ತೋಟದವಸ್ತಿ ಕಡೆಗೆ ಹೋಗುತ್ತಿದ್ದಾಗ ಪ್ರಶಾಂತ ಯಾಳವಾರ ತೋಟದ ಬಳಿ ಅಡ್ಡಗಟ್ಟಿದ ದುರ್ಷ್ಕಮಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸಾಕ್ಷಿ ನಾಶ ಮಾಡಲು ಶವಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದು ಪರಾರಿಯಾಗಿದ್ದಾರೆ.

ಈ ಕುರಿತು ಯುವತಿಗೆ ವಿಷಯ ತಿಳಿದು ಸ್ವಃತ ಯುವಕನ ಕುಟುಂಬದವರಿಗೆ ಹಾಗೂ ಆಲಮೇಲ ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾಳೆ. ಆದರೆ ಲಿಖಿತ ದೂರ ನೀಡದ ಕಾರಣ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಬಾವಿಯಲ್ಲಿ ಯುವಕನ ಶವ ಎಸೆದಿರುವ ಮಾಹಿತಿ ಪಡೆದು ಶವವನ್ನು ಇಂದು ಹೊರಗೆ ತೆಗೆದ ಬಳಿಕ ಯುವತಿ ಕುಟುಂಬದ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ABOUT THE AUTHOR

...view details