ವಿಜಯಪುರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಹಾಮಳೆಗೆ ಸಾಕಷ್ಟು ಗ್ರಾಮಗಳು ಜಲಾವೃತವಾಗಿವೆ. ಇದರಿಂದಾಗಿ ಜಿಲ್ಲಾಡಳಿತ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರಗಳನ್ನು ತೆರೆದಿದೆ. ಅಲ್ಲದೆ ಪ್ರವಾಹಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಭೀಮಾನದಿ ಪ್ರವಾಹದಿಂದ ಸಿಂದಗಿ ತಾಲೂಕಿನ ಕಡಣಿ, ಬ್ಯಾಡಗಿಹಾಳ, ದೇವಣಗಾಂವ, ಕುಮಸಗಿ, ಮೊರಟಗಿ, ಚಡಚಣ ತಾಲೂಕಿನ ಉಮರಾಣಿ, ಇಂಡಿ ತಾಲೂಕಿನ ರೂಡಗಿ ಹಾಗೂ ಬರಗುಡಿಗಳಲ್ಲಿ ಸೇರಿ ಒಟ್ಟು 8 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದರಲ್ಲಿ 341 ಜನ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ.
ಸದ್ಯ ಮಳೆ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ನೇಮಕವಾಗಿರುವ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ತಾಳಿಕೋಟೆ ಬಳಿಯ ದೋಣಿ ನದಿಯಲ್ಲಿ ಸಿಲುಕಿದ್ದ 7 ಜನರನ್ನು ರಕ್ಷಿಸಲಾಗಿದೆ. ತಾರಾಪುರ ಗ್ರಾಮದ ಜಲಾವೃತವಾಗಿರುವ 13 ಕುಟುಂಬಗಳನ್ನು ರಕ್ಷಿಸಲಾಗಿದೆ.