ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಮತ್ತೆ ಭೂಕಂಪದ ಅನುಭವ ಜನರಲ್ಲಿ ಆಗಿದೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವ ಇಲ್ಲಿನ ಜನತೆಗೆ ಆಗಿದೆ.
23:53 February 24
ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದ ಜನರಿಗೆ ಭೂಕಂಪನದ ಅನುಭವವಾಗಿದೆ.
ಭೂಮಿಯಿಂದ ಭಾರಿ ಶಬ್ದ ಕೇಳಿ ಬಂದ ಹಿನ್ನೆಲೆ ಮನೆಯಿಂದ ಜನರು ಹೊರಗಡೆ ಓಡಿ ಬಂದಿದ್ದಾರೆ. ಕಳೆದ ಒಂದು ವಾರದಲ್ಲಿ ಇಂದು ರಾತ್ರಿ ಆದ ಅನುಭವ ಸೇರಿ ಒಟ್ಟು ನಾಲ್ಕು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರ ಹೇಳಿದ್ದಾರೆ.
ಪದೇ ಪದೇ ಭೂಕಂಪದ ಅನುಭವವಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಭೂಮಿ ಕಂಪಿಸಿದ ಅನುಭವದಿಂದಾಗಿ ಗ್ರಾಮಸ್ಥರು ತಮ್ಮ ಮನೆಯ ಹೊರ ಅಂಗಳದಲ್ಲಿ ಮಲಗಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿಗಳು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಭೂಕಂಪನದ ಆತಂಕದಲ್ಲಿಯೇ ಮನಗೂಳಿ ಗ್ರಾಮಸ್ಥರು ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.